ಬೆಂಗಳೂರು:ದೆಹಲಿಯಲ್ಲಿ ಭೀಕರ ಕಾರ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ.
ಕೇಂದ್ರ ಗೃಹ ಇಲಾಖೆ ನೀಡಿದ ಸೂಚನೆ ಮೇರೆಗೆ ರಾಜ್ಯ ಪೋಲಿಸರು ಸೋಮವಾರ ತಡರಾತ್ರಿಯಿಂದಲೇ ಮುನ್ನಚ್ಚರಿಕೆಯಾಗಿ ರಾಜ್ಯದೆಲ್ಲೆಡೆ ಬಿಗಿ ಭದ್ರತಾ ಏರ್ಪಾಡು ಮಾಡಿದ್ದಾರೆ.
ಕೇಂದ್ರದಿಂದ ಮಾಹಿತಿ
ಕೇಂದ್ರದಿಂದ ಮಾಹಿತಿ ಬರುತ್ತಿದ್ದಂತೆ ರಾಜ್ಯ ಪೋಲಿಸ್ ಮಹಾನಿರ್ದೇಶಕ ಸಲೀಂ, ಎಲ್ಲಾ ಪಾಲಿಕೆಗಳ ಪೋಲಿಸ್ ಆಯುಕ್ತರು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ ಕಟ್ಟೆಚ್ಚರದ ಸೂಚನೆಗಳನ್ನು ನೀಡಿದರು.
ಹಗಲು-ರಾತ್ರಿ ಗಸ್ತು ಹೆಚ್ಚಿಸುವಂತೆ ಮತ್ತು ಸೂಕ್ಷ್ಮ ಪ್ರದೇಶ ಹಾಗೂ ಪ್ರಮುಖ ಕೇಂದ್ರಗಳಲ್ಲಿ ತೀವ್ರ ತಪಾಸಣೆ ನಡೆಸುವಂತೆ ಆದೇಶಿಸಿದರು.
ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ, ಕೇಂದ್ರ ಕರ್ತವ್ಯ ನಿರ್ವಹಣೆಯ ಕೇಂದ್ರ ಸ್ಥಾನದಿಂದ ಹೊರಹೋಗದಂತೆ ಅಧಿಕಾರಿಗಳಿಗೆ ಸೂಚಿಸಿದರು.
ತೀವ್ರ ತಪಾಸಣೆ
ಜನನಿಬಿಡ ಪ್ರದೇಶಗಳಾದ ಬಸ್, ರೈಲು, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸಂಶಯಾಸ್ಪದ ವ್ಯಕ್ತಿ ಹಾಗೂ ವಸ್ತುಗಳಿಗಾಗಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿನ ಅಣುಸ್ಥಾವರ, ಬಂದರುಗಳು, ಪ್ರವಾಸೋದ್ಯಮ ತಾಣಗಳು, ಜಲಾಶಯ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಪ್ರಮುಖ ಸರ್ಕಾರಿ ಕಟ್ಟಡಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸರು ಗಸ್ತು ತೀವ್ರಗೊಳಿಸಿದ್ದು, ಮತ್ತೊಂದೆಡೆ ರಾಜ್ಯದ ಎಲ್ಲಾ ವಸತಿ ಗೃಹಗಳ ತಪಾಸಣೆ ನಡೆಸಲಾಗುತ್ತಿದೆ.
ಬಾಂಬ್ ನಿಷ್ಕ್ರಿಯ ದಳ
ಜನನಿಬಿಡ ಪ್ರದೇಶಗಳಲ್ಲಿ ಪೋಲಿಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಶ್ವಾನ ಪಡೆಯೊಂದಿಗೆ ಸಂಶಯಾಸ್ಪದ ವಸ್ತುಗಳ ಪರಿಶೀಲನೆ ನಡೆಸಲಾಗುತ್ತಿದೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ವೇಳೆಯಲ್ಲೇ ಏಕೆ ಬಾಂಬ್ ಸ್ಫೋಟ ಘಟನೆಗಳು ಸಂಭವಿಸುತ್ತವೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಚುನಾವಣೆ ವೇಳೆ ಸ್ಫೋಟ
ಬಿಹಾರ ವಿಧಾನಸಭಾ ಚುನಾವಣೆ ವೇಳೆ ದೆಹಲಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿರುವ ಕುರಿತು ಕೇಂದ್ರ ಸರ್ಕಾರವೇ ಉತ್ತರಿಸಬೇಕು.
ಏನೇ ಆಗಲಿ ಇಂತಹ ಸ್ಫೋಟ ಘಟನೆಗಳು ನಡೆಯಬಾರದು, ಅಮಾಯಕ ಜನರ ಪ್ರಾಣ ಹೋಗಿರುವುದು ಬೇಸರದ ಸಂಗತಿ ಎಂದರು.

