ಬೆಳಗಾವಿ:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬುದಾಗಿ ಪಕ್ಷದ ದೆಹಲಿ ವರಿಷ್ಠರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಮತ್ತೆ ಬಾಂಬ್ ಸಿಡಿಸಿದ್ದಾರೆ.
ಕಳೆದ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್, ಮುಖ್ಯಮಂತ್ರಿ ಹಾಗೂ ಅವರ ಆಪ್ತ ಸಚಿವರು ಮತ್ತು ಶಾಸಕರಿಗೆ ಏರ್ಪಡಿಸಿದ್ದ ಬೋಜನಕೂಟದ ಮರುದಿನವೇ ಯತೀಂದ್ರ ಈ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸೇಠ್ ಬೋಜನಕೂಟ
ಸೇಠ್ ಕರೆದಿದ್ದ ಬೋಜನಕೂಟಕ್ಕೆ ಯತೀಂದ್ರ ಹೋಗಿರಲಿಲ್ಲ, ಉಳಿದಂತೆ ಮುಖ್ಯಮಂತ್ರಿ ಹಾಗೂ ಸಚಿವರಾದ ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್, ಡಾ.ಎಚ್.ಸಿ.ಮಹದೇವಪ್ಪ ಹಾಗೂ ಶಾಸಕರು ಭಾಗವಹಿಸಿದ್ದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಬಣಕ್ಕೆ ಈ ಔತಣಕೂಟಕ್ಕೆ ಆಹ್ವಾನ ಇರಲಿಲ್ಲ.
ಆದರೆ, ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ತಮ್ಮ ಸಮುದಾಯಕ್ಕೆ ಸೇರಿದ ಶಾಸಕರ ಜೊತೆ ಬೋಜನಕೂಟ ನಡೆಸಿ ಸಿದ್ದರಾಮಯ್ಯ ಕೈಬಲಪಡಿಸುವ ನಿರ್ಣಯ ಮಾಡಿದ್ದಾರೆ.
ಎಐಸಿಸಿ ಆದೇಶ ಉಲ್ಲಂಘನೆ
ಅಧಿಕಾರ ಹಸ್ತಾಂತರ ಕುರಿತಂತೆ ಯಾವುದೇ ಹೇಳಿಕೆ ನೀಡಬಾರದು ಮತ್ತು ಈ ಸಂಬಂಧ ಔತಣಕೂಟಗಳನ್ನು ನಡೆಸಬಾರದೆಂಬುದಾಗಿ ಎಐಸಿಸಿಯಿಂದ ಸ್ಪಷ್ಟ ಸಂದೇಶ ನೀಡಿದ್ದರೂ ಲೆಕ್ಕಿಸದೆ, ಸಿದ್ದರಾಮಯ್ಯ ಬಣ ಆದೇಶಗಳನ್ನು ಉಲ್ಲಂಘಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ, ನನ್ನ ತಂದೆಯೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಯತೀಂದ್ರ ಹೇಳಿಕೆ ಬಗ್ಗೆ ಮೌನವಹಿಸಿರುವ ಶಿವಕುಮಾರ್ ಬಣ, ಇವರ ಹಿಂದೆ ಯಾರೋ ಇದ್ದಾರೆ, ಅವರ ಅಣತಿಯಂತೆ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಮಾಧ್ಯಮದವರ ಮುಂದೆ ಹೇಳಿಕೆ ನೀಡಿ, ನಾವು ಮಾತನಾಡಿದರೆ ಬಲತ್ಕಾರ, ಅವರು ಮಾತನಾಡಿದರೆ ಚಮತ್ಕಾರ, ನಮಗೆ ಮಾತನಾಡಬಾರದೆಂದು ನಾಯಕರಿಂದ ಆದೇಶವಿದೆ ಎಂದರು.

