ಬೆಂಗಳೂರು:ಮತಗಳ್ಳತನ ಆರೋಪ ಕುರಿತು ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಹೋರಾಟವನ್ನೇ ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಲೆ ದಂಡವಾಗಿದೆ.
ಪಕ್ಷದ ವರಿಷ್ಠರ ವಿರುದ್ಧವೇ ಅಪಸ್ವರ ಎತ್ತಿದ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆದೇಶಿಸಿದರು.
ರಾಜಣ್ಣ ವಜಾ ಆದೇಶ
ವರಿಷ್ಠರ ಆದೇಶದಂತೆ ರಾಜಣ್ಣ ಅವರನ್ನು ವಜಾ ಮಾಡದಿದ್ದರೂ, ಅವರಿಂದ ರಾಜೀನಾಮೆ ಪಡೆದರು.
ರಾಜಣ್ಣ ರಾಜೀನಾಮೆಯಿಂದ ಸಿದ್ದರಾಮಯ್ಯ ಸಂಪುಟದ ಇಬ್ಬರು ಸಚಿವರು ವಿವಿಧ ಕಾರಣಗಳಿಗೆ ಮಂತ್ರಿ ಸ್ಥಾನ ಕಳೆದುಕೊಂಡಂತಾಗಿದೆ.
ಈ ಮೊದಲು ಮಹರ್ಷಿ ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಅಂದಿನ ಹಿಂದುಳಿದ ವರ್ಗದ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕಾಗಿತ್ತು.
ಇಬ್ಬರೂ ಪರಿಶಿಷ್ಟ ವರ್ಗದವರು
ರಾಜಣ್ಣ ಮತ್ತು ನಾಗೇಂದ್ರ ಇಬ್ಬರೂ ಪರಿಶಿಷ್ಟ ವರ್ಗ (ವಾಲ್ಮೀಕಿ) ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಸಚಿವ ರಾಜಣ್ಣ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೇ ಭಾನುವಾರ ಘೇರಾವ್ ಮಾಡಿದ್ದರು.
ಪಕ್ಷದವರಿಂದಲೇ ಬಂದ ದೂರು ಸ್ವೀಕರಿಸಿ, ಹೇಳಿಕೆ ಆಲಿಸಿ, ಶಿವಕುಮಾರ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಸಂದೇಶ ರವಾನೆ ಮಾಡಿದ್ದರು.

ರಾಜ್ಯ ಘಟಕ ಶಿಫಾರಸು
ಈ ವೇಳೆಗೆ ವರಿಷ್ಠರಿಗೆ ಮಾಹಿತಿ ತಲುಪಿತ್ತು, ರಾಜ್ಯ ಘಟಕದ ಶಿಫಾರಸಿನ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಸುರ್ಜೇವಾಲ ಜೊತೆ ಸಮಾಲೋಚಿಸಿ, ರಾಜಣ್ಣ ಅವರನ್ನು ಮಂತ್ರಿ ಸ್ಥಾನದಿಂದ ಕೂಡಲೇ ತೆಗೆದುಹಾಕುವ ನಿರ್ಧಾರಕ್ಕೆ ಬಂದರು.
ಪಕ್ಷದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿ ತಕ್ಷಣ ವಜಾ ಮಾಡುವಂತೆ ಆದೇಶಿಸಿದರು.
ಪತ್ರ ಕೈಸೇರುತ್ತಿದ್ದಂತೆ ಮುಖ್ಯಮಂತ್ರಿ, ವಿಧಾನಸಭಾ ಅಧಿವೇಶನ ನಡೆಯುವ ಸಂದರ್ಭದಲ್ಲೇ ರಾಜಣ್ಣ ಅವರನ್ನು ಕರೆಸಿಕೊಂಡು ಸುಮಾರು 30 ನಿಮಿಷ ಚರ್ಚಿಸಿ ರಾಜೀನಾಮೆ ನೀಡುವಂತೆ ಸೂಚಿಸಿದರು.
ಡಾ.ಪರಮೇಶ್ವರ್ ಸಮ್ಮುಖ
ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನೂ ಕರೆಸಿಕೊಂಡ ಮುಖ್ಯಮಂತ್ರಿ, ರಾಜಣ್ಣ ಸಮ್ಮುಖದಲ್ಲೇ ಮಾತನಾಡಿದ್ದಲ್ಲದೆ, ವರಿಷ್ಠರ ಪತ್ರವನ್ನೂ ನೀಡಿದರು.
ಮುಖ್ಯಮಂತ್ರಿ ಸಲಹೆ ಮೇರೆಗೆ ವಿಧಾನಸೌಧದಲ್ಲೇ ರಾಜೀನಾಮೆ ಪತ್ರ ಬರೆದುಕೊಟ್ಟ ರಾಜಣ್ಣ ಎಂದಿನಂತೆ ಸದನ ಕಲಾಪಕ್ಕೆ ಹಾಜರಾದರು.
ರಾಜೀನಾಮೆ ಪತ್ರ ಪಡೆದ ತಕ್ಷಣ ಮುಖ್ಯಮಂತ್ರಿ, ಪತ್ರವನ್ನು ರಾಜಭವನಕ್ಕೆ ರವಾನಿಸಿ, ಅಂಗೀಕರಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದರು.


