ಸಂಪುಟ ಪುನರ್ ರಚನೆ ಚಕಾರ ಎತ್ತದ ಮುಖ್ಯಮಂತ್ರಿ ಸಿದ್ದರಾಮಯ್ಯ
ನವದೆಹಲಿ:ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನರ್ ರಚನೆ ಇಲ್ಲವೇ ಕರ್ನಾಟಕದಲ್ಲಿನ ನಾಯಕತ್ವ ಗೊಂದಲ ಪರಿಹಾರ ಕುರಿತು ವರಿಷ್ಠರ ಮುಂದೆ ಪ್ರಸ್ತಾಪವನ್ನೇ ಮಾಡಲಿಲ್ಲ.
ಶುಕ್ರವಾರ ಮಧ್ಯಾನ್ಹ ವಿಶೇಷ ವಿಮಾನದಲ್ಲಿ ತೆರಳಿದ ಮುಖ್ಯಮಂತ್ರಿ, ಇಂದಿರಾ ಭವನದಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ತಡರಾತ್ರಿ ನಗರಕ್ಕೆ ಹಿಂತಿರುಗಿದರು.
ಕಾಂಗ್ರೆಸ್ ಕಾರ್ಯಕಾರಿಣಿ ಸಭೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ, ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೊಪಾಲ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಸಭೆಗೂ ಮುನ್ನ ಮತ್ತು ನಂತರ ಮುಖ್ಯಮಂತ್ರಿ ಅವರು, ಖರ್ಗೆ, ರಾಹುಲ್, ವೇಣುಗೋಪಾಲ್ ಜೊತೆ ಮಾತನಾಡಿದರೇ ಹೊರತು ಸಂಪುಟ ಪುನರ್ ರಚನೆ ಕುರಿತು ವರಿಷ್ಠರ ಮುಂದೆ ಪ್ರಸ್ತಾಪವನ್ನೇ ಮಾಡಲಿಲ್ಲ.
ರಾಹುಲ್ ಗಾಂಧಿ ಸಹಾ ಅಧಿಕಾರ ಹಸ್ತಾಂತರ ಬಗ್ಗೆ ಚಕಾರ ಎತ್ತಲಿಲ್ಲ, ಅವರು ರಾಜ್ಯದಲ್ಲಿ ನಡೆದ ಉಪಚುನಾವಣೆ ಕುರಿತು ಮಾಹಿತಿ ಪಡೆದಿದ್ದು ಹೊರತುಪಡಿಸಿದರೆ ಉಳಿದಂತೆ ಯಾವುದೇ ರಾಜಕೀಯ ಚರ್ಚೆಯೂ ನಡೆಯಲಿಲ್ಲ.
ದೆಹಲಿ ಭೇಟಿಯಲ್ಲಿ ಮೌನ
ಬಜೆಟ್ ಅಧಿವೇಶನ ನಂತರ ದೆಹಲಿಗೆ ತೆರಳಿ ಸಂಪುಟ ಪುನರ್ ರಚನೆಗೆ ಅನುಮತಿ ಪಡೆಯುವುದಾಗಿ ಹೇಳಿಕೊಂಡೇ ಬಂದಿದ್ದ ಸಿದ್ದರಾಮಯ್ಯ, ದೆಹಲಿ ಭೇಟಿ ವೇಳೆ ಈ ಗೋಜಿಗೇ ಹೋಗಲಿಲ್ಲ.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ನಂತರ ತಮ್ಮನ್ನು ಹಾಗೂ ಮುಖ್ಯಮಂತ್ರಿ ಅವರನ್ನು ದೆಹಲಿಗೆ ಕರೆಸುತ್ತಾರೆಂಬ ನಿರೀಕ್ಷೆಯಲ್ಲಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಳೆದ ಎರಡು-ಮೂರು ದಿನಗಳಿಂದ ಪಕ್ಷದ ಶಾಸಕರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ.
ಮುಖಾಮುಖಿ ಚರ್ಚೆ
ವರಿಷ್ಠರು ದೆಹಲಿಗೆ ಆಹ್ವಾನ ನೀಡದ ಹಿನ್ನೆಲೆಯಲ್ಲಿ ಶಿವಕುಮಾರ್ ನಗರದ ಪಂಚತಾರಾ ಹೋಟೆಲ್ ಒಂದರಲ್ಲಿ ಬಿಡಾರ ಹೂಡಿ ಪಕ್ಷದ ಆಯ್ದ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಮುಖಾಮುಖಿ ಚರ್ಚೆ ನಡೆಸಿದ್ದಾರೆ.
ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ಹ್ಯಾರಿಸ್ ನಲಪಾಡ್ ಶಾಸಕರನ್ನು ಹೋಟೆಲ್ಗೆ ಕರೆತರುವ ಶಿವಕುಮಾರ್ ಜೊತೆ ಮಾತುಕತೆ ನಡೆಸುವ ಕಾರ್ಯ ನಿಭಾಯಿಸುತ್ತಿದ್ದಾರೆ ಎನ್ನಲಾಗಿದೆ.


