ಬೆಂಗಳೂರು:ಕಳೆದ ಮಾರ್ಚ್ನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡ 94.10 ವಿದ್ಯಾರ್ಥಿಗಳು ತೇರ್ಗಡೆಗೊಂಡು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಕಳೆದ ವರ್ಷ ಶೇಕಡ 80.04 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದರು, ಈ ಬಾರಿ ಅದಕ್ಕಿಂತ ಶೇ.14ರಷ್ಟು ಫಲಿತಾಂಶ ಹೆಚ್ಚಳವಾಗಿದೆ.
625 ಅಂಕ ಪಡೆದ 7 ವಿದ್ಯಾರ್ಥಿಗಳು
ಈ ಬಾರಿ 7,70,209 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು ಅದರಲ್ಲಿ 7,24,794 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 625ಕ್ಕೆ 625 ಅಂಕ ಪಡೆದ 7 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ಮಾಹಿತಿ ನೀಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಇಲಾಖೆ ಪ್ರಾರಂಭದಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನ ಹರಿಸಿತ್ತು, ಇದರ ಪರಿಣಾಮ ಹೆಚ್ಚಿನ ತೇರ್ಗಡೆ ಸಾಧ್ಯವಾಯಿತು ಎಂದರು.
ಸರ್ಕಾರ 20 ಅಂಶಗಳ ಸಮಗ್ರ ಸುತ್ತೋಲೆಯನ್ನು ಅಧಿಕಾರಿಗಳು ಮತ್ತು ಶಿಕ್ಷಕರಿಗೆ ನೀಡಿದ್ದಲ್ಲದೆ, ಮಕ್ಕಳಿಗೆ ಶಿಕ್ಷಣದಲ್ಲಿ ತೊಂದರೆ ಆಗದಂತೆ ಶಿಕ್ಷಕರ ನೇಮಕ ಕೈಗೊಂಡಿದ್ದರಿಂದ ಇಂತಹ ಫಲಿತಾಂಶ ಸಾಧ್ಯವಾಯಿತು.
ಸರ್ಕಾರಿ ಶಾಲೆಗಳ ಫಲಿತಾಂಶ ಗಮನಾರ್ಹ
ಈ ಬಾರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ನಗರ ಪ್ರದೇಶಕ್ಕೆ ಸರಿಸಮನಾಗಿ ಫಲಿತಾಂಶ ಪಡೆದಿದ್ದಾರೆ.
ಎಂದಿನಂತೆ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶೇ.98.4ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡು ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಶೇಕಡ 85.06ರಷ್ಟು ಫಲಿತಾಂಶದೊಂದಿಗೆ ಕೊನೆ ಸ್ಥಾನದಲ್ಲಿದೆ.
ಅನುದಾನ ರಹಿತ ಶಾಲೆಗಳಲ್ಲಿ ಫಲಿತಾಂಶ ಶೇಕಡ 95.04ರಷ್ಟಿದ್ದರೆ, ಸರ್ಕಾರಿ ಶಾಲೆಗಳಲ್ಲಿ ಶೇ.93.97ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿರುವುದು ಶಿಕ್ಷಣ ಗುಣಮಟ್ಟ ಹೆಚ್ಚಿರುವುದಕ್ಕೆ ಸಾಕ್ಷಿಯಾಗಿದೆ.
ಚಿಕ್ಕೋಡಿಯ ಕಟಿಗೇರಿ ಸರ್ಕಾರಿ ಶಾಲೆ
ಚಿಕ್ಕೋಡಿಯ ಕಟಿಗೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ್ ಪೂರ್ಣ 625 ಅಂಕ ಗಳಿಸಿದ 7 ವಿದ್ಯಾರ್ಥಿಗಳ ಪೈಕಿ ಒಬ್ಬರು.
ಉಳಿದಂತೆ ಜಿ.ಭಾರತಿ, ಬೃಂದಾ ಎಂ. ತಾಪ್ಸೆ, ಧನುಷ್ ಎಂ. ಸುಧೀರ್, ಜಿ.ಪ್ರೀತಂ ಪೂಜಾರಿ, ಸೌಜನ್ಯ ಕಂದಕೂರ್ ಹಾಗೂ ಸುಖದೇವ್ ಪೂರ್ಣ ಅಂಕ ಗಳಿಸಿದವರ ಪಟ್ಟಿಯಲ್ಲಿದ್ದಾರೆ.
ಒಟ್ಟು 625ರಲ್ಲಿ 624 ಅಂಕ ಪಡೆದವರು 21 ವಿದ್ಯಾರ್ಥಿಗಳಿದ್ದು, 625ಕ್ಕೆ 623 ಅಂಕ ಗಳಿಸಿದ 28 ವಿದ್ಯಾರ್ಥಿಗಳಿದ್ದಾರೆ, 625ರಲ್ಲಿ 622 ಅಂಕ ಗಳಿಸಿದ 74 ವಿದ್ಯಾರ್ಥಿಗಳು, 625ರಲ್ಲಿ 621 ಅಂಕ ಪಡೆದ 98 ಮಂದಿ, ಐದನೇ ಸ್ಥಾನದಲ್ಲಿ 620 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 150 ಇದೆ.
ಒತ್ತಡಕ್ಕೆ ಒಳಗಾಗದೆ ಪರೀಕ್ಷೆ
ತೃತೀಯ ಭಾಷೆಗೆ ಅಂಕ ಬದಲಿಗೆ ಗ್ರೇಡಿಂಗ್ ನೀಡುವ ವಿಚಾರದಲ್ಲಿ ಗೊಂದಲ ಉಂಟಾದರೂ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದೆ ಪರೀಕ್ಷೆ ಬರೆದಿದ್ದರಿಂದ ಈ ಐತಿಹಾಸಿಕ ಫಲಿತಾಂಶ ಬರಲು ಕಾರಣವಾಗಿದೆ ಎಂದರು.
ಒಟ್ಟು 6,176 ಶಾಲೆಗಳಲ್ಲಿ ಶೇಕಡ 100ರಷ್ಟು ಫಲಿತಾಂಶ ಬಂದಿದ್ದರೆ, ಅದರಲ್ಲಿ 2,393 ಸರ್ಕಾರಿ ಶಾಲೆಗಳಾಗಿವೆ.
ಈ ಬಾರಿ ಶೇ.96.18ರಷ್ಟು ವಿದ್ಯಾರ್ಥಿನಿಯರು, ಶೇ.91.94ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ.
ಎರಡನೇ ಪರೀಕ್ಷೆಗೆ ಅವಕಾಶ
ಅನುತ್ತೀರ್ಣಗೊಂಡ ಶೇ.೬ರಷ್ಟು ವಿದ್ಯಾರ್ಥಿಗಳಿಗೆ ಎರಡನೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳ ಸಾಧನೆ ಗಮನಿಸಿ, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗಬೇಕು ಎಂದು ಮಧು ಬಂಗಾರಪ್ಪ ಮನವಿ ಮಾಡಿದರು.
ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ
ವಿದ್ಯಾರ್ಥಿಗಳು ಬರೆದ ಉತ್ತರಗಳಿಗೆ ಮೌಲ್ಯಮಾಪಕರು ಎಷ್ಟು ಅಂಕ ನೀಡಿದ್ದಾರೆ, ಅಥವಾ ಉತ್ತರ ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನ ಆಗಿದೆಯೇ ಎಂಬುದನ್ನು ತಿಳಿಯಲು ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಬಹುದಾಗಿದೆ.
ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮುನ್ನ ಸ್ಕ್ಯಾನ್ ಪ್ರತಿ ಪಡೆಯುವುದು ಖಡ್ಡಾಯ, ನಿಗದಿತ ದಿನಾಂಕದ ನಂತರ ಬರುವ ಅರ್ಜಿಯನ್ನು ಪರೀಕ್ಷಾ ಮಂಡಳಿ ಸ್ವೀಕರಿಸುವುದಿಲ್ಲ ಎಂದರು.


