ಬೆಂಗಳೂರು:ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಆನೆ, ಹುಲಿ, ಚಿರತೆ ಸೇರಿದಂತೆ ಆಯ್ದ ವನ್ಯಜೀವಿಗಳ ಸಂತಾನ ಶಕ್ತಿ ಹರಣಕ್ಕೆ ಸರ್ಕಾರ ಮುಂದಾಗಿದೆ.
ಇಂತಹ ಪ್ರಾಣಿಗಳ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಇಂದಿಲ್ಲಿ ತಿಳಿಸಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರಹೊಳೆ, ಬಂಡೀಪುರ, ಭದ್ರಾ ಸೇರಿದಂತೆ ರಾಜ್ಯಾದ್ಯಂತದ ಕಾಡಂಚಿನ ಭಾಗದಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷದಿಂದ ಇತ್ತೀಚೆಗೆ ಸಾವು-ನೋವುಗಳು ಹೆಚ್ಚಾಗಿವೆ.
ಆನೆ, ಚಿರತೆ, ಹುಲಿ ಸಂಖ್ಯೆ ಹೆಚ್ಚಳದಿಂದ ಆಹಾರಕ್ಕಾಗಿ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತಿವೆ.
ಇಂತಹ ಸಂಘರ್ಷ ತಡೆಯಲು ಕನಿಷ್ಠ ೨ ವರ್ಷ ಆಯ್ದ ವನ್ಯಜೀವಿಗಳ ಸಂತಾನಹರಣ ಚಿಕಿತ್ಸೆ ಅನಿವಾರ್ಯ.
ಸಾರ್ವಜನಿಕ ಚರ್ಚೆ ಅಗತ್ಯ
ವನ್ಯಜೀವಿಗಳ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ಅಗತ್ಯವಿದ್ದು, ಸಾರ್ವಜನಿಕವಾಗಿ ಚರ್ಚೆಯೂ ನಡೆಯಬೇಕಿದೆ ಎಂದರು.
ಕೆಲವು ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ, ಇವುಗಳ ಸಂಖ್ಯೆಗೆ ಕಡಿವಾಣ ಹಾಕುವ ಅಗತ್ಯವೂ ಕಂಡು ಬರುತ್ತಿದೆ, ವನ್ಯಜೀವಿಗಳ ಸಂರಕ್ಷಣೆಯೂ ಆಗಬೇಕು, ಅಮೂಲ್ಯ ಜೀವಹಾನಿಯೂ ತಪ್ಪಬೇಕು, ಮಾನವರ ಜೀವ ಉಳಿಸುವ ಕೆಲಸವೂ ಆಗಬೇಕಿದೆ.
ಇದು ನಿರ್ಧಾರವಲ್ಲ, ಒಂದು ಚಿಂತನೆ ಮಾತ್ರ, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಅಗತ್ಯವಿದೆ, ಜೊತೆಗೆ ತತ್ಸಂಬಂಧ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ತಜ್ಞರು, ಕಾನೂನು ಪಂಡಿತರೊಂದಿಗೆ ಚರ್ಚಿಸಿ ನ್ಯಾಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ.
ಒಂದೆರೆಡು ವರ್ಷ ನಿಯಂತ್ರಣ
ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು, ಯಾವ ಭಾಗದಲ್ಲಿ ಯಾವ ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತದೆಯೋ ಅಲ್ಲಿ ಒಂದೆರೆಡು ವರ್ಷ ನಿಯಂತ್ರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಬೇರೆ ರಾಜ್ಯಗಳಲ್ಲೂ ಇಂತಹ ಆಲೋಚನೆ, ಚಿಂತನೆ ಇದೆ, ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯುವ ಅಗತ್ಯವಿದೆ ಎಂದರು.
ಸ್ವಯಂ ಪ್ರೇರಣೆಯಿಂದ ಕಾಡಿನಿಂದ ಹೊರಬರಲು ಇಚ್ಛಿಸುವ ಅರಣ್ಯವಾಸಿಗಳ ಸ್ಥಳಾಂತರ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಅಂತಹವರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.
ಮುಖ್ಯಮಂತ್ರಿ ಜೊತೆ ಚರ್ಚೆ
ಪಟ್ಟಿ ಸಿದ್ಧವಾದ ನಂತರ ಇವರ ಸ್ಥಳಾಂತರಕ್ಕೆ ಎಷ್ಟು ಹಣದ ಅಗತ್ಯವಿದೆ, ಆಯವ್ಯಯದಲ್ಲಿ ಎಷ್ಟು ಮೀಸಲಿಡಲಾಗಿದೆ, ಎಷ್ಟು ಕೊರತೆ ಆಗಲಿದೆ ಎಂಬ ಕುರಿತು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
ಅರಣ್ಯದಲ್ಲಿನ ವಸತಿಪ್ರದೇಶಗಳ ಸ್ಥಳಾಂತರದಿಂದ ವನ್ಯಜೀವಿಗಳ ಆವಾಸಸ್ಥಾನ ವಿಸ್ತರಣೆ ಆಗುಲಿದೆ, ಮೂಲಭೂತಸೌಕರ್ಯ ಇಲ್ಲದೆ ಬದುಕುತ್ತಿರುವ ಅರಣ್ಯವಾಸಿಗಳನ್ನೂ ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗಲಿದೆ.
ಆನೆಗಳ ಸಮಸ್ಯೆ ಪರಿಹರಿಸಲು ಆನೆ ಧಾಮ ನಿರ್ಮಾಣ ಕುರಿತು ಸರ್ಕಾರ ಯೋಜನೆ ರೂಪಿಸಿತ್ತು, ಆದರೆ, ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವಲ್ಲಿ ತೊಡಕಾಗಿದೆ, ಸಮಸ್ಯೆ ಪರಿಹರಿಸಿಕೊಂಡು ಆನೆ ಧಾಮ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.


