ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದ ಅಪರಾಧಿ
ಬೆಂಗಳೂರು:ಕರ್ನಾಟಕ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದ ಅಪರಾಧಿ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಅಲ್ಲದೆ, ಪ್ರಕರಣದ ಎಲ್ಲಾ 16 ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ಹತ್ಯೆ ಪ್ರಕರಣದ 19ನೇ ಆರೋಪಿ ಚನ್ನಕೇಶವ ಟಿಂಗರಿಕರ್ಗೆ 7 ವರ್ಷ ಜೈಲು ಶಿಕ್ಷೆ ನೀಡಿದರೆ, ಒಂದನೇ ಆರೋಪಿ ಬಸವರಾಜ ಮುತ್ತಗಿಗೆ ಮಾಫಿ ಸಾಕ್ಷಿ ಸ್ಥಾನ ಸ್ಥಿರೀಕರಿಸಿ ತೀರ್ಪು ನೀಡಿದೆ.
ಶಾಸಕ ಸ್ಥಾನದಿಂದ ಪದಚ್ಯುತ
ಪ್ರಕರಣದ 15ನೇ ಆರೋಪಿ ಆಗಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ಜೊತೆಗೆ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಶಾಸಕ ಸ್ಥಾನದಿಂದಲೂ ಪದಚ್ಯುತರಾಗಿದ್ದಾರೆ.
ಹತ್ಯೆಗೊಳಗಾದ ಬಿಜೆಪಿ ನಾಯಕ ಯೋಗೇಶ್ ಗೌಡ ಅವರ ಮಕ್ಕಳಿಗೆ 16 ಲಕ್ಷ ರೂ. ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ತೀರ್ಪಿನಲ್ಲಿ ಸೂಚಿಸಿದೆ.
ಪ್ರಕರಣದ 21 ಆರೋಪಿಗಳ ಪೈಕಿ ಇಬ್ಬರು ಮಾಫಿ ಸಾಕ್ಷಿಯಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಉಳಿದ ಎಲ್ಲಾ 17 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿದೆ, 17ನೇ ಆರೋಪಿ ಶಿವಾನಂದ ಮಾಫಿ ಸಾಕ್ಷಿಯಾದ ನಂತರವೂ ಪ್ರತಿಕೂಲ ಹೇಳಿಕೆ ನೀಡಿದ್ದರಿಂದ ಪುನಃ ಆರೋಪಿಯನ್ನಾಗಿ ಪರಿಗಣಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿದೆ.
ಇಬ್ಬರು ಆರೋಪಿಗಳ ಬಿಡುಗಡೆ
ಇನ್ನು ಪ್ರಕರಣದ 20ನೇ ಆರೋಪಿ ವಾಸುದೇವ ನಿಲೇಕಣಿ, 21ನೇ ಆರೋಪಿ ಸೋಮಶೇಖರ ಬಿಡುಗಡೆಗೆ ನ್ಯಾಯಾಲಯ ಆದೇಶಿಸಿತ್ತು.
ಉಳಿದಂತೆ 2ನೇ ಆರೋಪಿ ವಿಕ್ರಮ್, 3ನೇ ಆರೋಪಿ ಕೀರ್ತಿ ಕುಮಾರ್, 4ನೇ ಆರೋಪಿ ಸಂದೀಪ್, 5ನೇ ಆರೋಪಿ ವಿನಾಯಕ್, 6ನೇ ಆರೋಪಿ ಮಹಾಬಲೇಶ್ವರ್ ಅಲಿಯಾಸ್ ಮುದಕ, 7ನೇ ಆರೋಪಿ ಸಂತೋಷ್, 8ನೇ ಆರೋಪಿ ದಿನೇಶ್, 9ನೇ ಆರೋಪಿ ಅಶ್ವಥ್, 10ನೇ ಆರೋಪಿ ಸುನಿಲ್, 11ನೇ ಆರೋಪಿ ನಜೀರ್ ಅಹಮದ್, 12ನೇ ಆರೋಪಿ ಷಾನವಾಜ್, 13ನೇ ಆರೋಪಿ ನೂತನ್, 14ನೇ ಆರೋಪಿ ಹರ್ಷಿತ್, 16ನೇ ಆರೋಪಿ ಚಂದ್ರು ಮಾಮ, 18ನೇ ಆರೋಪಿ ವಿಕಾಸ್ ಕಲಬುರ್ಗಿ ಅವರುಗಳಿಗೂ ಶಿಕ್ಷೆ ವಿಧಿಸಿದೆ.
ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು ಸಪ್ತಾಪುರ ಬಡಾವಣೆಯ ಜಿಮ್ನಲ್ಲಿ 2016ರ ಜೂನ್ 15ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.
ಪ್ರಕರಣಕ್ಕೆ ಮಹತ್ವದ ತಿರುವು
ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡದ ಉಪನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು, ಮೊದಲು ಆಸ್ತಿ ವಿವಾದದ ವಿಚಾರಕ್ಕೆ ನಡೆದ ಕೊಲೆ ಎಂದು ಹೇಳಲಾಗಿತ್ತು.
ಆರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು, ಆದರೆ, ಕೊಲೆಯಾದ ಯೋಗೇಶ್ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.
ಸಿಬಿಐ ತನಿಖೆಯಿಂದ ಇದು ರಾಜಕೀಯ ಪ್ರೇರಿತ ಕೊಲೆ ಎಂದು ದೃಢಪಟ್ಟು ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.
ಶಾಸಕ ಕುಲಕರ್ಣಿ ಕೈವಾಡ ಶಂಕೆ
ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಕೈವಾಡ ಶಂಕೆ ವ್ಯಕ್ತವಾಗಿತ್ತಲ್ಲದೆ, 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು, ಅವರನ್ನು ಬಂಧಿಸಿದ್ದರು.
ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಲಾಗಿತ್ತು.


