ಬೆಂಗಳೂರು: ಪಕ್ಷದ ಸಿದ್ದಾಂತಗಳಿಗೆ ಬದ್ಧರಾಗಿ ವರ್ಚ್ಚಸ್ಸುಳ್ಳ ನಾಯಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಮಂತ್ರಿಯಾಗಲು ಕಾಂಗ್ರೆಸ್ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ.
ಕಾಂಗ್ರೆಸ್ ಅಧಿನಾಯಕ ರಾಹುಲ್ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಟ್ಟಿಗೆ ಸಮಾಲೋಚನೆ ನಡೆಸಿದ್ದು, ಸಂಭವನೀಯ ಪಟ್ಟಿಗೆ ಹಸಿರು ನಿಶಾನೆ ತೋರಿದ್ದಾರೆ.
ಮಂತ್ರಿಯಾಗುವವರು ವರ್ಚ್ಚಸ್ಸಿನ ಜೊತೆಗೆ ಯಾವುದೇ ಕಳಂಕ ಹೊತ್ತಿರಬಾರದು. ಎರಡಕ್ಕಿಂತ ಹೆಚ್ಚು ಬಾರಿ ಶಾಸನಸಭೆಗೆ ಆಯ್ಕೆಯಾಗಿರಬೇಕು. ಅವರು ಪ್ರತಿನಿಧಿಸುವ ಜಾತಿ ಮತ್ತು ಪ್ರದೇಶವನ್ನು ಪರಿಗಣನೀಗೆ ತೆಗೆದುಕೊಂಡು 18 ಸದಸ್ಯರ ಆಯ್ಕೆ ಮಾಡಲಾಗಿದೆ.
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವಾರ ರಾಹುಲ್ಗಾಂಧಿ ಸೇರಿದಂತೆ ಇತರ ವರಿಷ್ಠರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿ, ಸಂಭವನೀಯ ಸಚಿವರುಗಳ ಪಟ್ಟಿ ಮತ್ತು ಅವರ ಇತಿಹಾಸದ ಕುರಿತು ಮಾಹಿತಿ ನೀಡಿದ್ದರು.
ರಾಜ್ಯ ನಾಯಕರು ನೀಡಿದ್ದ ಶಿಫಾರಸ್ಸನ್ನು ಪರಿಶೀಲಿಸಿ, ವರದಿ ನೀಡುವಂತೆ ಸಂಸದ ಸಸಿಕಾಂತ್ ಸೆಂಥಿಲ್ ನೇತೃತ್ವದ ಸಮಿತಿಗೆ ಹೊಣೆಗಾರಿಕೆ ನೀಡಿದ್ದರು. ಸೆಂಥಿಲ್ ಸಮಿತಿ ಸಂಭವನಿಯ ಸಚಿವರಾಗುವ ಪಟ್ಟಿಯ ಪೂರ್ವಾಪರ ಮಾಹಿತಿ ಸಂಗ್ರಹಿಸಿದ್ದಲ್ಲದೆ, ಅದರಲ್ಲಿ, ಹೊಸಬರಿಗೂ ಅವಕಾಶ ನೀಡಿ, ಅಂತಿಮ ವರದಿಯನ್ನು ರಾಹುಲ್ಗಾಂಧಿ ಅವರಿಗೆ ಸಲ್ಲಿಸಿದ್ದಾರೆ.
ವರದಿಯ ಬಗ್ಗೆ ರಾಹುಲ್, ಖರ್ಗೆ ಅವರ ಜೊತೆ ಸಮಾಲೋಚನೆ ನಡೆಸಿ, ಅಂತಿಮ ಪಟ್ಟಿ ಸಿದ್ದಗೊಳಿಸಿದ್ದಾರೆ. ಉನ್ನತ ಮೂಲಗಳ ಪ್ರಕಾರ ಸಮಿತಿ ಶಿಫಾರಸ್ಸಿನಂತೆ 50 ವರ್ಷ ಕೆಳಗಿನ 14 ಮಂದಿ ಯುವಕರಿಗೆ ಮಂತ್ರಿ ಸ್ಥಾನ ಕಲ್ಪಿಸುವಂತೆ ಹೇಳಿದೆ. ಉಳಿದವುಗಳನ್ನು 50 ಮೇಲ್ಪಟ್ಟವರಿಗೆ ಅವಕಾಶ ಮಾಡಿಕೊಟ್ಟು, ಕೆಲವು ಹೆಸರುಗಳನ್ನು ನಮೂದಿಸಿದೆ.
ಸೆಂಥಿಲ್ ವರದಿಯಂತೆ ಬಹುತೇಕ ಇದು ಪ್ರಸಕ್ತ ಸರ್ಕಾರದ ಕೊನೆಯ ಸಂಪುಟ ವಿಸ್ತರಣೆಯಾಗಿದೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು, ಪಕ್ಷ ಸಂಘಟನೆಗೆ ಅನುಕೂಲವಾಗುವ ರೀತಿಯಲ್ಲಿ ಸಂಪುಟ ವಿಸ್ತರಣೆಯಾಗಬೇಕು.
ವಿಸ್ತರಣೆ ಸಮಯದಲ್ಲಿ ಯಾವುದೇ ರೀತಿಯ ಅಪಸ್ವರಗಳಿಗೆ ಅವಕಾಶ ಇರಬಾರದು ಮಂತ್ರಿಗಳಾಗಿ ಬರುವ ವ್ಯಕ್ತಿಯಿಂದ ಕಾಂಗ್ರೆಸ್ ಸಂಘಟನೆಗೆ ಅನುಕೂಲವಾಗಬೇಕು. ಆ ವ್ಯಕ್ತಿಯ ಸಮುದಾಯ ಪಕ್ಷದ ಜೊತೆ ನಿಲ್ಲಬೇಕು ಎಂಬ ನಿಟ್ಟಿನಲ್ಲಿ ಸೆಂಥಿಲ್ ನೇತೃತ್ವದ ಸಮಿತಿ ಅಧ್ಯಯನ ನಡೆಸಿ ವರದಿ ನೀಡಿದೆ.
ಇದನ್ನು ಆದರಿಸಿ ರಾಹುಲ್ ಗಾಂಧಿ 14 ಜನ ಹೊಸಬರಿಗೆ ಅವಕಾಶ ನೀಡಲು ತೀರ್ಮಾನಿಸಿದ್ದಾರೆ. ಈ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಮಾಲೋಚನೆ ನಡೆಸಿ ಪಟ್ಟಿ ಅಂತಿಮಗೊಳಿಸಲಿದ್ದಾರೆ.
ಈ ಚರ್ಚೆಯ ಸಮಯದಲ್ಲಿ ಅಗತ್ಯವಿದ್ದರೆ ಮತ್ತೊಂದು ಸುತ್ತಿನ ಮಾತುಕತೆಗೆ ಮುಖ್ಯಮಂತ್ರಿ ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಆಹ್ವಾನಿಸುವ ಸಾಧ್ಯತೆ ಇದೆ. ಇಲ್ಲದೆ ಹೋದರೆ ಬುಧವಾರ ಸಂಜೆ ಅಥವಾ ಗುರುವಾರ ಬೆಳಿಗ್ಗೆ ಪಟ್ಟಿ ರವಾನಿಸಲಿದ್ದಾರೆ.
ಆ ಪಟ್ಟಿಯ ಪ್ರಕಾರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂತ್ರಿ ಮಂಡಲ ವಿಸ್ತರಣೆಗೆ ಕ್ರಮ ಕೈಗೊಳ್ಳಲಿದ್ದಾರೆ. ಮಂತ್ರಿ ಮಂಡಲದಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ದೆಹಲಿಯಿಂದ ಬರುವ ಪಟ್ಟಿಯೇ ಅಂತಿಮ ಎಂಬ ವರದಿಗಳು ಬಂದಿರುವ ಬೆನ್ನಲ್ಲೇ ಮಂತ್ರಿ ಸ್ಥಾನಾಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದಾರೆ.
ಮಾಜಿ ಮಂತ್ರಿಗಳಾದ ಆರ್.ವಿ. ದೇಶಪಾಂಡೆ, ಎಚ್. ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ಮಧು ಬಂಗಾರಪ್ಪ, ಬಸವರಾಜ ರಾಯರೆಡ್ಡಿ, ಶರಣಬಸಪ್ಪ ದರ್ಶನಾಪುರ, ಆರ್.ಬಿ. ತಿಮ್ಮಾಪುರ, ಸಿ.ಎಸ್.ನಾಡಗೌಡ, ಜೆ.ಟಿ ಪಾಟೀಲ್, ಜಿ.ಎಸ್.ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್,ಅಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ಕಾದು ಕುಳಿತಿದ್ದಾರೆ.
ಸಸಿಕಾಂತ ಸೆಂಥಿಲ್ ಕರ್ನಾಟಕದಲ್ಲಿ ಎಐಎಸ್ ಅಧಿಕಾರಿಯಾಗಿ ಕೆಲವು ವರ್ಷಗಳ ಸೇವೆ ಸಲ್ಲಿಸಿದ್ದರು. ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ವಿಶೇಷ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
2019 ರಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ, ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯ ಸಲಹೆಗಾರರಾಗಿ ನೇಮಕಗೊಂಡಿದ್ದರು.
ಅಷ್ಟೇ ಅಲ್ಲ 2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ತಿರವುಲ್ಲೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸತ್ ಪ್ರವೇಶಿಸಿದ್ದರು. ಸೆಂಥಿಲ್ಗೆ ರಾಜ್ಯ ರಾಜಕೀಯ ಮತ್ತು ರಾಜಕಾರಣಿಗಳ ಇತಿಹಾಸ ತಿಳಿದ ಹಿನ್ನೆಲೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಗೆ ರಾಹುಲ್ ಇವರನ್ನು ನೇಮಕ ಮಾಡಿದ್ದರು.


