ಬೆಂಗಳೂರು:ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದ ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡ 7.5ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಕಾನೂನು ರೂಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಉತ್ತೇಜಿಸುವ ಮತ್ತು ಗ್ರಾಮೀಣ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಇಂತಹ ತೀರ್ಮಾನಕ್ಕ ಬರಲಾಗಿದೆ ಎಂದರು.
ಹಲವು ಕಾರ್ಯಕ್ರಮ
ವಿಜಯನಗರದ ಕೂಡ್ಲಿಗಿಯಲ್ಲಿ ಇಂದು ಮಹತ್ವಾಕಾಕ್ಷಿ ಪ್ರಜಾಸೇವಾ ಇಲಾಖೆ ಹಾಗೂ ಆಡಳಿತ ವಿಕೇಂದ್ರೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಉತ್ತೇಜನಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಲಿದೆ ಎಂದರು.
ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಹಿಂದೆ ಶೇ.15ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು, ಆದರೆ, ನ್ಯಾಯಾಲಯದ ಆದೇಶದಂತೆ ಸರ್ಕಾರ ಇದನ್ನು ಹಿಂದೆ ಪಡೆಯುವಂತಾಯಿತು.
ಇದೀಗ, ಸರ್ಕಾರಿ ಶಾಲೆಗಳಲ್ಲಿ ಕಲಿಕೆ ಮಾಡಿದ ಮಕ್ಕಳಿಗಷ್ಟೇ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲಾಗುವುದು.

ಶೀಘ್ರದಲ್ಲೇ ಕಾನೂನು
ಈಗಾಗಲೇ ಕಾನೂನು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿದ್ದು, ಸರ್ಕಾರದ ನಿರ್ಧಾರ ಅನುಷ್ಟಾನಕ್ಕೆ ಶೀಘ್ರದಲ್ಲೇ ಕಾನೂನು ರೂಪಿಸಿ ಜಾರಿಗೆ ತರಲಾಗುವುದು.
ಶಿಕ್ಷಕರ ದಿನಾಚರಣೆಯಂದೇ ಈ ಮಹತ್ವದ ಘೋಷಣೆ ಮಾಡಿದ್ದೇನೆ, ಗ್ರಾಮೀಣ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೂ ಗೌರವ ನೀಡುವ ಉದ್ದೇಶದಿಂದ ನಾನು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದೇನೆ.
ವೈದ್ಯರು, ಇಂಜಿನಿಯರ್ಗಳಿಗೆ ಅವರ ಹೆಸರಿನ ಮುಂದೆ ವೃತ್ತಿ ಸಾಂಕೇತಿಕ ಪದನಾಮ ಇರುತ್ತದೆ.
ಗೌರವ ಸೂಚಕ ಪದ
ಇನ್ನು ಮುಂದೆ ರಾಜ್ಯದ 4.36 ಲಕ್ಷ ಶಿಕ್ಷರಿಗೂ ಹೆಸರಿನ ಮುಂದೆ ಗೌರವ ಸೂಚಕವಾಗಿ ಟಿಆರ್. (Tr.) ಎಂಬ ಪದ ಬಳಸಲು ಆದೇಶಿಸಲಾಗುತ್ತದೆ.
ಶಿಕ್ಷಕರ ಹೆಸರು ಬರೆಯುವ ವೇಳೆ Tr. ಎಂಬ ಪದ ಬಳಸಿದಾಗ ಅವರಿಗೆ ಗೌರವ ನೀಡಿದಂತಾಗುತ್ತದೆ.
ಈ ಕುರಿತು ಸಂಪುಟ ಸಭೆಯಲ್ಲಿ ಸಮಾಲೋಚಿಸಿ ಕೈಗೊಂಡ ತೀರ್ಮಾನವನ್ನು ಶಿಕ್ಷಕರ ದಿನಾಚರಣೆಯ ಪವಿತ್ರ ದಿನದಂದೇ ಪ್ರಕಟಿಸುತ್ತಿದ್ದೇನೆ ಎಂದರು.


