ಬೆಂಗಳೂರು:ಬಿ.ನಾಗೇಂದ್ರ ನಂತರ ಇದೀಗ ವಸತಿ ಸಚಿವ ಜಮೀರ್ ಅಹಮದ್ ಖಾನ್ ತಲೆದಂಡ ಸನ್ನಿಹಿತವಾಗಿದೆ.
ಅಕ್ರಮ ಆಸ್ತಿ ಗಳಿಕೆ ಹಾಗೂ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಜಮೀರ್ ವಿಚಾರಣೆ (ಪ್ರಾಸಿಕ್ಯೂಷನ್) ನಡೆಸಲು ಅನುಮತಿ ದೊರಕಿಸುವಂತೆ ಜಾರಿ ನಿರ್ದೇಶನಾಲಯ (ಇ.ಡಿ.) ರಾಜ್ಯಪಾಲರ ಮೊರೆ ಹೋಗಿದೆ.
ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರ ವಿಚಾರಣೆ ಅಗತ್ಯವಿದೆ, ರಾಜ್ಯ ಸರ್ಕಾರಕ್ಕೆ ಆದೇಶಿಸಿ, ಅನುಮತಿ ದೊರಕಿಸಬೇಕೆಂದು ಕೋರಿದೆ.
ಇ.ಡಿ., ಸಿಬಿಐ ಮನವಿ
ಇ.ಡಿ. ಜೊತೆ ಸಿಬಿಐ ಸಹಾ ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಅವಕಾಶ ಕೋರಿದೆ.
ಕೇಂದ್ರ ತನಿಖಾ ದಳದ ಮನವಿ ಹಾಗೂ ವರದಿ ಆಧಾರದ ಮೇಲೆ ರಾಜ್ಯಪಾಲರು ಆಗಸ್ಟ್ 24ರಂದು ರಾಜ್ಯ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು ಜಮೀರ್ ವಿಚಾರಣೆಗೆ ಅನುಮತಿ ನೀಡುವಂತೆ ಸೂಚಿಸಿದ್ದರು.
ರಾಜ್ಯಪಾಲರ ಪ್ರಸ್ತಾಪದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಂಕಷ್ಟ ಎದುರಾಗಿದೆ.
ಸಂಪುಟ ತೀರ್ಮಾನ ಅಗತ್ಯ
ಈ ವಿಷಯವನ್ನು ಸಂಪುಟದ ಮುಂದಿಟ್ಟು, ಅನುಮತಿ ನೀಡುವ ಇಲ್ಲವೇ ನಿರಾಕರಿಸುವ ತೀರ್ಮಾನ ಮಾಡಬೇಕಿದೆ.
ಆದರೆ, ಎಐಸಿಸಿ ನಿಲುವುಗಳೇ ಬೇರೆ ಆಗಿರುವುದರಿಂದ ಮುಖ್ಯಮಂತ್ರಿ ಅವರು ರಾಜ್ಯಪಾಲರ ಸೂಚನೆಯನ್ನು ನಿರಾಕರಿಸಲು ಸಾಧ್ಯವಾಗುತ್ತಿಲ್ಲ.
ಸದ್ಯಕ್ಕೆ ಜಮೀರ್ ರಾಜೀನಾಮೆ ಪಡೆದು ವಿವಾದ ತಿಳಿಗೊಂಡ ನಂತರದ ದಿನಗಳಲ್ಲಿ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಕುರಿತು ಆಪ್ತರೊಂದಿಗೆ ಸಮಾಲೋಚಿಸಿದ್ದಾರೆ.
ಎರಡು ಬಾರಿ ಸಮಾಲೋಚನೆ
ಇಂದು ಬೆಳಗ್ಗೆ ಜಮೀರ್ ಅವರನ್ನು ಎರಡು ಬಾರಿ ಕರೆಸಿಕೊಂಡು ಸಮಾಲೋಚನೆ ನಡೆಸಿದರು.
ಮೊದಲಿಗೆ ಜಮೀರ್ ಅವರನ್ನು ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಕರೆದುಕೊಂಡು ಬಂದರೆ, ಮತ್ತೊಮ್ಮೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಸಲಹೆಗಾರ ಶಾಸಕ ಎ.ಎಸ್.ಪೊನ್ನಣ್ಣ ಕರೆತಂದು ಚರ್ಚಿಸಿದರು.
ನಂತರ ಮುಖ್ಯಮಂತ್ರಿ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾನೂನು ತಜ್ಞರನ್ನು ಕರೆಸಿಕೊಂಡು ಜಮೀರ್ ವಿಷಯ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಅಕ್ರಮ ಆಸ್ತಿ ಗಳಿಕೆ
ಅಕ್ರಮ ಆಸ್ತಿ ಗಳಿಕೆ ಹಾಗೂ ಹಣ ವಹಿವಾಟಿಗೆ ಸಂಬಂಧಿಸಿದಂತೆ ಜಮೀರ್ ಅಹಮದ್ ವಿರುದ್ಧ ೨೦೨೧ರ ಆಗಸ್ಟ್ ೫ರಂದು ಇ.ಡಿ. ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿತ್ತು.
ಇದಾದ ನಂತರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹಾ ನೀಡಿತ್ತು.
ಪ್ರಕರಣದ ತನಿಖೆ ಸಂದರ್ಭದಲ್ಲೇ ಜಮೀರ್ ಪಾಲುದಾರಿಕೆಯ ಖಾಸಗಿ ಸಾರಿಗೆ ಸಂಸ್ಥೆ ಕೋಟ್ಯಂತರ ರೂ. ವಂಚಿಸಿದೆ ಎಂಬ ಆರೋಪದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ ನಡೆಸಿ, ದಾಖಲೆ ವಶಪಡಿಸಿಕೊಂಡಿತ್ತು.
ರಾಜ್ಯಪಾಲರ ಮೊರೆ
ಕೋಟ್ಯಂತರ ರೂ. ಅವ್ಯವಹಾರ ಬಯಲಾಗುತ್ತಿದ್ದಂತೆ ಇ.ಡಿ. ಹಾಗೂ ಸಿಬಿಐ ವಿಚಾರಣೆಗೆ ಮುಂದಾಗಿದ್ದು, ರಾಜ್ಯಪಾಲರ ಮೊರೆ ಹೋಗಿದೆ.
ರಾಜ್ಯದಲ್ಲಿ ಸಿಬಿಐ ತನಿಖೆಗೆ ಮುಕ್ತ ಅವಕಾಶ ಇಲ್ಲದಿರುವುದರಿಂದ ಇ.ಡಿ. ಮುಖೇನ ಪ್ರಕರಣ ಕೈಗೆತ್ತಿಕೊಳ್ಳಲು ಮುಂದಾಗಿದೆ.


