ನವದೆಹಲಿ:ಬೃಹತ್ ನೀರಾವರಿ ಸಚಿವ ಎನ್.ಚಲುವರಾಯಸ್ವಾಮಿ ಅಥವಾ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಇವರಲ್ಲಿ ಒಬ್ಬರನ್ನು ಸಂಪುಟದಿಂದ ಕೈಬಿಟ್ಟು ಎಂ.ಕೃಷ್ಣಪ್ಪ (ಲೇಔಟ್) ಅವರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ವರಿಷ್ಠರು ಸೂಚಿಸಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಸಂಪುಟ ಪುನರ್ ರಚನೆ ಮಾಡಲು ನಮ್ಮ ಅಭ್ಯಂತರ ಇಲ್ಲ, ಆದರೆ, ಮಹಿಳೆಯರಿಗೆ ಸ್ಥಾನ ನೀಡುವುದರ ಜೊತೆಗೆ ಕೃಷ್ಣಪ್ಪ ಅವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಸಲಹೆ ನೀಡಿದ್ದಾರೆ.
ಗೌಪ್ಯ ಸಮಾಲೋಚನೆ
ಪುನರ್ ರಚನೆ ಹಾಗೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಸಂಬಂಧ ಭಾನುವಾರ ಸಂಜೆ ದಿಢೀರನೆ ದೆಹಲಿಗೆ ತೆರಳಿದ ಮುಖ್ಯಮಂತ್ರಿ, ಗೌಪ್ಯವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದ್ದರು.
ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಬಹುತೇಕ ಅಂತಿಮಗೊಂಡಿದೆ, ಸಂಪುಟ ಪುನರ್ ರಚನೆಗೂ ಷರತ್ತುಬದ್ಧ ಅನುಮತಿ ದೊರೆತಿದೆ, ಆದರೆ, ಇದನ್ನು ಅನುಷ್ಟಾನಕ್ಕೆ ತರಲು ಮುಖ್ಯಮಂತ್ರಿ ಸೆಪ್ಟೆಂಬರ್ ೩ರವರೆಗೂ ಕಾಯಬೇಕಿದೆ.
ವಿದೇಶ ಪ್ರವಾಸದಲ್ಲಿರುವ ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೆಪ್ಟೆಂಬರ್ 3ರಂದು ದೆಹಲಿಗೆ ಹಿಂತಿರುಗಲಿದ್ದಾರೆ.
ಎಐಸಿಸಿಯೇ ಪಟ್ಟಿ ನೀಡಲಿದೆ
ಅವರು ಹಿಂತಿರುಗಿದ ನಂತರ ನೀವು ಮತ್ತೆ ದೆಹಲಿಗೆ ಬನ್ನಿ, ಚರ್ಚಿಸಿದ ನಂತರ ಎಐಸಿಸಿಯೇ ಎರಡೂ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಶಿವಕುಮಾರ್ ಅವರಿಗೆ ಸುರ್ಜೇವಾಲ ತಿಳಿಸಿದ್ದಾರೆ.
ಮಂತ್ರಿಮಂಡಲದಲ್ಲಿ ಎರಡು ಸ್ಥಾನ ಖಾಲಿ ಇವೆ, ಅವನ್ನು ತುಂಬಲು ಯಾವುದೇ ತಕರಾರು ಇಲ್ಲ, ಆದರೆ, ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ರಾಜ್ಯಪಾಲರು ಕೋರಿದ್ದು, ಈ ವಿಷಯವನ್ನೂ ಅಂದೇ ಪರಿಹರಿಸೋಣ ಎಂದು ತಿಳಿಸಿದ್ದಾರೆ.
ಕೃಷ್ಣಪ್ಪ ಸೇರ್ಪಡೆಗೆ ಸುರ್ಜೇವಾಲ ಪಟ್ಟು ಹಿಡಿದಿದ್ದಾರೆ, ಅವರಿಗೆ ಮಾತು ಕೊಟ್ಟಿದ್ದೇವೆ, ಪಕ್ಷದ ನಿಷ್ಠಾವಂತ, ಅವರನ್ನು ನಾವು ಕಳೆದುಕೊಳ್ಳುವುದು ಬೇಡ, ಅವರಿಗೆ ಪುನರ್ ರಚನೆ ವೇಳೆ ಅವಕಾಶ ಮಾಡಿಕೊಡಲೇಬೇಕು ಎಂದು ಮುಖ್ಯಮಂತ್ರಿ ಅವರಿಗೆ ಕಟ್ಟಾದೇಶ ಮಾಡಿದ್ದಾರಂತೆ.
ಒಕ್ಕಲಿಗರ ಕೋಟಾ ಮುಗಿದಿದೆ
ಮಂತ್ರಿಮಂಡಲದಲ್ಲಿ ಒಕ್ಕಲಿಗರ ಪ್ರಾತಿನಿಧ್ಯ ಕೋಟಾ ಮುಗಿದಿದೆ, ಕೃಷ್ಣಪ್ಪ ಅವರಿಗೆ ಅವಕಾಶ ಮಾಡಿಕೊಡಲು, ಅದೇ ಸಮುದಾಯಕ್ಕೆ ಸೇರಿದವರನ್ನು ಕೈಬಿಟ್ಟು ಇವರಿಗೆ ಅವಕಾಶ ಮಾಡಿಕೊಡಬೇಕಿದೆ.
ಈ ಸಮುದಾಯಕ್ಕೆ ಸೇರಿದ ಬಾಲಕೃಷ್ಣ ಇಲ್ಲವೇ ಚಲುವರಾಯಸ್ವಾಮಿ, ಇವರಲ್ಲಿ ಒಬ್ಬರನ್ನು ಕೈಬಿಟ್ಟು ಕೃಷ್ಣಪ್ಪ ಅವರಿಗೆ ಅವಕಾಶ ಮಾಡಿಕೊಡಿ, ಇದನ್ನು ನಿಮ್ಮ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಅವರಿಗೆ ಸುರ್ಜೇವಾಲ ಸ್ಪಷ್ಟವಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಅವರಿಗೆ ಸಂಪುಟದಿಂದ ಇಬ್ಬರನ್ನೂ ಬಿಡಲು ಇಷ್ಟವಿಲ್ಲ, ಆದರೆ, ಸುರ್ಜೇವಾಲ ಅವರ ಖಡಕ್ ಆದೇಶ ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.


