ನಾಗೇಂದ್ರ ಕಣ್ಣೀರಿಗೆ ಬಿಜೆಪಿ ಕಾರಣವಲ್ಲ, ಕಾಂಗ್ರೆಸ್ ಕಾರಣ
ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಪೂರ್ವನಿಗದಿಯಂತೆ ಪಾದಯಾತ್ರೆ ನಡೆಸುವಂತೆ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಆದೇಶಿಸಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ದೆಹಲಿಗೆ ಕರೆಸಿಕೊಂಡ ಬಿಜೆಪಿ ರಾಷ್ಟ್ರೀಯ ನಿತಿನ್ ನಬಿನ್, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮುದುವರಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಜನತೆಗೆ ತಿಳಿಸಲು ಸಲಹೆ
ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸಂಪರ್ಕಿಸಿದ ನಬಿನ್, ಪೂರ್ವ ನಿಧಾರದಂತೆ ಬಳ್ಳಾರಿ ಪಾದಯಾತ್ರೆ ನಡೆಸಿ ಎಂಬುದಾಗಿ ಸಲಹೆ ಮಾಡಿರುವುದಲ್ಲದೆ, ಈ ವೇಳೆ, ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ನಿಗದಿ ಪಡಿಸಿದ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಪಡಿಸಿಕೊಂಡ ವಿಷಯವನ್ನು ಜನತೆಯ ಮನ ಮುಟ್ಟುವಂತೆ ತಿಳಿಸಿ ಎಂದಿದ್ದಾರೆ.
ನಾಗೇಂದ್ರರ ಹಗರಣ ಮಾತ್ರವಲ್ಲದೆ, ಕಾಂಗ್ರೆಸ್ ಆಡಳಿತದಲ್ಲಿ ಹಲವು ಹಗರಣಗಳು ನಡೆದಿವೆ, ಅವುಗಳನ್ನೂ ಬಯಲಿಗೆಳೆಯಿರಿ ಎಂದಿದ್ದಾರೆ.
ವರಿಷ್ಠರ ಆದೇಶದ ನಂತರ ಪ್ರತ್ಯೇಕವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಪೂರ್ವ ನಿಗದಿಯಂತೆ ಸೆಪ್ಟೆಂಬರ್ 1ರಂದು ರಾಯಚೂರಿನ ಲಿಂಗಸೂಗೂರಿನಲ್ಲಿ ಬೈಹತ್ ಸಮಾವೇಶ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗುವುದು ಎಂದರು.
ಬಳ್ಳಾರಿಯಲ್ಲಿ ಪಾದಯಾತ್ರೆ ಸಮಾರೋಪ
ಸೆಪ್ಟೆಂಬರ್ 10ರಂದು ಬಳ್ಳಾರಿಯಲ್ಲಿ ಪಾದಯಾತ್ರೆ ಅಂತಿಮಗೊಳ್ಳಲಿದ್ದು, ಅದಕ್ಕೂ ಮೊದಲು ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ, ಸಂಡೂರು, ಬಳ್ಳಾರಿ ಗ್ರಾಮಾಂತರ ಮೂಲಕ ಪಾದಯಾತ್ರೆ ಸಾಗಲಿದೆ ಎಂದರು.
ವಾಲ್ಮೀಕಿ ನಿಗಮದ 187 ಕೋಟಿ ರೂ. ವಾಪಾಸ್ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
ಪಾದಯಾತ್ರೆಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಉಪಸ್ಥಿತರಿರುವರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ನಾಗೇಂದ್ರ ಅವರನ್ನು ಸಮರ್ಥಿಸಿಕೊಳ್ಳಬಹುದಿತ್ತು, ವಿರೋಧ ಪಕ್ಷಗಳ ಒತಾಯದ ಹಿನ್ನೆಲೆ ರಾಜೀನಾಮೆ ಪಡೆದರು.
ನಾಗೇಂದ್ರ ಕಣ್ಣೀರಿಗೆ ಬಿಜೆಪಿ ಕಾರಣವಲ್ಲ
ರಾಜೀನಾಮೆ ವೇಳೆ ಕಣ್ಣೀರು ಹಾಕುವಂತೆ ನಾಗೇಂದ್ರ ಅವರಿಗೆ ಯಾರು ಹೇಳಿದ್ದರೋ ಗೊತ್ತಿಲ್ಲ, ಅವರ ಕಣ್ಣೀರಿಗೆ ಬಿಜೆಪಿ ಕಾರಣವಲ್ಲ, ಕಾಂಗ್ರೆಸ್ ಕಾರಣ.
ನಮ್ಮ ಸ್ವಾರ್ಥಕ್ಕೆ ಹೋರಾಟ ಮಾಡಲಿಲ್ಲ, ಎಸ್ಟಿ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಹೋರಾಡಿದೆವು.
ಬಿಜೆಪಿ ಮನುವಾದಿಗಳೆಂದು ಟೀಕೆ ಮಾಡುವ ನಾಗೇಂದ್ರ ಅವರನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸಿದ್ದೇ ನಮ್ಮ ಪಕ್ಷ, 2013 ರಲ್ಲಿ ಗೆಲುವು ಸಾಧಿಸಿದಾಗ ಜನಾರ್ದನ ರೆಡ್ಡಿ ಸೇರಿ ಹಲವರು ಅವರ ಜೊತೆಯಲ್ಲಿದ್ದರು, ಆಗ ನಮ್ಮ ಪಕ್ಷ ಮನುವಾದಿಗಳಾಗಿ ಕಾಣಲಿಲ್ಲ.
ಹಿಂಸೆ ತಾಳದೆ ಅಧಿಕಾರಿ ಆತ್ಮಹತ್ಯೆ
ದಲಿತ ಸಮುದಾಯದ ಅಧಿಕಾರಿ ಚಂದ್ರಶೇಖರ್ ತಮಗಾದ ಬೆದರಿಕೆ, ಹಿಂಸೆ ತಾಳದೆ ಆತ್ಮಹತ್ಯೆ ಮಾಡಿಕೊಂಡರು, ಇದರ ಕರ್ಮ ನಾಗೇಂದ್ರ ಅವರ ಬೆನ್ನು ಹತ್ತಿದೆ.
ಅಧಿಕಾರಿ ಪತ್ನಿ, ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ, ಕುಟುಂಬಕ್ಕೆ ಕಿಂಚಿತ್ತೂ ಕಾಳಜಿ ತೋರಲಿಲ್ಲ, ಕಣ್ಣೆತ್ತಿಯೂ ನೋಡಿಲ್ಲ ಎಂದರು.
ಕಾಂಗ್ರೆಸ್ ಪಕ್ಷವನ್ನು ದೇಶದ ದಲಿತರು ಎಂದಿಗೂ ಕ್ಷಮಿಸುವುದಿಲ್ಲ, ಡಾ.ಬಾಬಾ ಸಾಹೇಬರನ್ನು ಸೋಲಿಸಿದ ಕಾಂಗ್ರೆಸ್, ಜಗಜೀವನ್ ರಾಮ್ ಅವರನ್ನು ಬಳಸಿಕೊಂಡು ತುರ್ತು ಪರಿಸ್ಥಿತಿ ಹೇರಿತು, ಪ್ರಧಾನಿ ಆಗದಂತೆ ಅವರನ್ನು ತುಳಿಯಿತು.
ಕಾಂಗ್ರೆಸ್ ಮೊಸಳೆ ಕಣ್ಣೀರು
ದಲಿತರನ್ನು ಬಳಸಿಕೊಂಡು ಕಾಂಗ್ರೆಸ್ ಹೊಲಸು ಕೆಲಸ ಮಾಡುತ್ತಾ ಬಂದಿದೆ, ಎರಡು ದಿನ ಕೋಪಿಸಿಕೊಳ್ಳುವ ದಲಿತರು ಮಾರನೇ ದಿನ ಎಲ್ಲಾ ಮರೆಯುತ್ತಾರೆ, ಅವರನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಕಾಂಗ್ರೆಸ್ ಮಾಡುತ್ತದೆ, ಮೀಸಲಾತಿ ವಿಚಾರದಲ್ಲೂ ಮೋಸ ಮಾಡಿದೆ, ಸರ್ಕಾರಿ ನೇಮಕಾತಿಯಲ್ಲೂ ಮೀಸಲಾತಿ ಕಡಿಮೆ ಮಾಡಿದರು.
ದಲಿತ ನಾಯಕ ಕೆ.ಎನ್.ರಾಜಣ್ಣ ಅವರನ್ನೂ ಸಚಿವ ಸ್ಥಾನದಿಂದ ತೆಗೆದು ಬಲಿಪಶು ಮಾಡಿದರು, ಆಗ ಇಲ್ಲದ ಮೊಸಳೆ ಕಣ್ಣೀರು, ನಾಟಕ, ದಲಿತರ ಮೇಲಿನ ಅಭಿಮಾನ ಈಗ ಏಕೆ ಎಂದು ಪ್ರಶ್ನಿಸಿದರು.
ಜನರ ಹಣ ಕಾಂಗ್ರೆಸ್ ಪಾಲು
ನಾಗೇಂದ್ರ ಪಕ್ಷದ ಆಸ್ತಿ ಎಂದು ಮುಖ್ಯಮಂತ್ರಿ ಹೇಳುತ್ತಾರೆ, ಅವರು ಕಾಂಗ್ರೆಸ್ ಪಕ್ಷದ ಆಸ್ತಿ, ಸೋನಿಯಾ, ರಾಹುಲ್, ಪ್ರಿಯಾಂಕಾ, ಕೆಪಿಸಿಸಿ ಆಸ್ತಿ, ಜನರ ಹಣ ಕಾಂಗ್ರೆಸ್ ಗೆ ನೀಡುವ ಕೆಲಸ ಮಾಡಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮನೆಗೆ ಹೋಗಲಿದೆ, ಇಡೀ ಸರ್ಕಾರವನ್ನೇ ವಜಾ ಮಾಡಿ ಚುನಾವಣೆ ನಡೆಸಲಿ, ಜನತಾ ನ್ಯಾಯಾಲಯಕ್ಕೆ ಹೋಗೋಣ ಎಂದು ಸವಾಲು ಎಸೆದರು.


