Monday, September 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, September 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyಅಂಕಣರಾಜಕೀಯರಾಜ್ಯರಾಷ್ಟ್ರವಿಶ್ಲೇಷಣೆ

ಆಪರೇಷನ್ ಕಮಲ ಬೇಡ ಅಂದ್ರು ಮೋದಿ?

by admin February 19, 2024
written by admin February 19, 2024 0 comments 5 minutes read
3FacebookTwitterPinterestEmail
387

ಬೆಂಗಳೂರು:ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಮೊನ್ನೆ ದಿಲ್ಲಿಗೆ ಹೋಗಿದ್ದ ರಾಜ್ಯ ಬಿಜೆಪಿಯ ಟಾಪ್ ಲೀಡರುಗಳಿಗೆ ವರಿಷ್ಟರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವನ್ನು ಯಾವ ಕಾರಣಕ್ಕೂ ಅಲುಗಾಡಿಸುವುದಿಲ್ಲ ಎಂಬುದು ಈ ಸಂದೇಶ.

ಅಂದ ಹಾಗೆ ಕೆಲವೇ ಕಾಲದ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ವಿಷಯದಲ್ಲಿ ರಾಜ್ಯದ ಕೆಲ ಬಿಜೆಪಿ ನಾಯಕರು ಉತ್ಸುಕರಾಗಿದ್ದರು. ವರಿಷ್ಟರು ಅನುಮತಿ ನೀಡಿದರೆ ಸಾಕು, ಸರ್ಕಾರ ಉರುಳಿಸುವ ಜವಾಬ್ದಾರಿ ನಮ್ಮದು ಅಂತ ಆಪ್ತ ವಲಯಗಳಲ್ಲಿ ರಣೋತ್ಸಾಹ ತೋರಿಸುತ್ತಿದ್ದರು.

ಅವರ ಇಂತಹ ಉತ್ಸಾಹಕ್ಕೆ ಕಾರಣವೂ ಇತ್ತು. ಯಾಕೆಂದರೆ 2019 ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರವನ್ನು ಉರುಳಿಸುವುದರ ಹಿಂದೆ ಇವರ ಕೈ ಕೆಲಸ ಮಾಡಿತ್ತು. ಇಂತಹ ಅನುಭವ ಇದ್ದ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಮತ್ತೊಂದು ರೌಂಡು ಆಪರೇಷನ್ ಮಾಡಲು ಈ ನಾಯಕರು ಸಜ್ಜಾಗಿದ್ದರು.

ಹೀಗೆ ಅವರು ಸಜ್ಜಾಗಿ ನಿಂತ ಕಾಲಕ್ಕೆ ಸರಿಯಾಗಿ ಜಾತ್ಯತೀತ ಜನತಾ ದಳ ಕೂಡಾ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿತಲ್ಲ, ಇಂತಹ ಹೊಂದಾಣಿಕೆಯಾಗಿದ್ದೇ ತಡ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಹಲವು ಮೂಲಗಳಿಂದ ಪ್ರಯತ್ನ ಆರಂಭವಾದ ಸಂದೇಶಗಳು ಅಪ್ಪಳಿಸತೊಡಗಿದವು.

ಈ ಪೈಕಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದವರೆಂದರೆ ಗೋವಾದ ಮುಖ್ಯಮಂತ್ರಿ ಸಾವಂತ್ ಮತ್ತು ಮಹಾರಾಷ್ಟ್ರದ ಬಿಜೆಪಿ ನಾಯಕ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್. ನೋಡ ನೋಡುತ್ತಿದ್ದಂತೆಯೇ ಈ ಇಬ್ಬರು ನಾಯಕರು ರಾಜ್ಯ ಕಾಂಗ್ರೆಸ್‌ನ ಹಲ ಗುಂಪುಗಳ ನಾಯಕರ ಜತೆ ಚರ್ಚೆ ನಡೆಸುತ್ತಿದ್ದಾರೆ. ವರಿಷ್ಟರಿಂದ ಸಂದೇಶ ದೊರೆತ ತಕ್ಷಣ ಆಪರೇಷನ್‌ಗೆ ಕೈ ಹಾಕುತ್ತಾರೆ ಎಂಬ ಮಾತುಗಳು ಕೇಳಿಸತೊಡಗಿದವು.

ಇದು ಸಾಲದೆಂಬಂತೆ ಇವತ್ತು ಉಪಮುಖ್ಯಮಂತ್ರಿಯಾಗಲು ಹವಣಿಸುತ್ತಿರುವ ಮುಂಬಯಿ-ಕರ್ನಾಟಕ ಭಾಗದ ಸಚಿವರೊಬ್ಬರು ಪದೇ ಪದೇ ದೇವೇಂದ್ರ ಫಡ್ನವೀಸ್ ಜತೆ ಮಾತುಕತೆ ನಡೆಸಿ ಬರುತ್ತಿದ್ದಾರೆ. ಬಿಜೆಪಿ ವರಿಷ್ಟರಿಂದ ಸೂಚನೆ ಬಂದ ಕೂಡಲೇ ತಮ್ಮ ಇಪ್ಪತ್ತೈದಕ್ಕೂ ಹೆಚ್ಚು ಬೆಂಬಲಿಗ ಶಾಸಕರ ಜತೆ ಕಮಲ ಪಾಳಯದ ಕಡೆ ವಲಸೆ ಹೋಗಲಿದ್ದಾರೆ ಎಂಬ ಮಾತುಗಳು ತೇಲಿ ಬಂದವು.

ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರ ಸಂಪುಟದಲಿ ಮಂತ್ರಿಗಿರಿ ಸಿಗದೆ ಹತಾಶರಾಗಿರುವ ಕಾರವಾರ ಭಾಗದ ನಾಯಕರೊಬ್ಬರು ಗೋವಾ ಮುಖ್ಯಮಂತ್ರಿ ಸಾವಂತ್ ಅವರ ಜತೆ ಮಾತುಕತೆ ನಡೆಸುತ್ತಾ ಒಳಗಿಂದೊಳಗೇ ಸೆಟ್ಲಾಗಿದ್ದಾರೆ. ಹೀಗಾಗಿ ಅವರೂ ಟೈಮು ನೋಡಿ ರಾಜ್ಯ ಕಾಂಗ್ರೆಸ್ಸಿಗೆ ಷಾಕ್ ಕೊಡಲಿದ್ದಾರೆ ಅಂತ ಬಿಜೆಪಿಯ ಕೆಲ ಹಿರಿಯ ನಾಯಕರೇ ಪಿಸುಗುಟ್ಟತೊಡಗಿದರು.

ಆದರೆ ಕಳೆದ ಶನಿವಾರ, ಭಾನುವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ದಿಲ್ಲಿಗೆ ಹೋದ ರಾಜ್ಯದ ಪ್ರಮುಖ ನಾಯಕರಿಗೆ ಒಂದು ಮೆಸೇಜು ಸ್ಪಷ್ಟವಾಗಿ ತಲುಪಿದೆ. ಅದೆಂದರೆ, ಅಗತ್ಯ ಬಿದ್ದರೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ಹೋಗೋಣ. ಆದರೆ ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರ ಸರ್ಕಾರವನ್ನು ಅಸ್ಥಿರಗೊಳಿಸಿ ಉರುಳಿಸುವುದು ಬೇಡ ಎಂಬುದು ಈ ಸಂದೇಶ.

ಮೂಲಗಳ ಪ್ರಕಾರ, ಈ ನಾಯಕರಿಗೆ ಇಂತಹದೊಂದು ಸಂದೇಶವನ್ನು ರವಾನಿಸಿದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ. ಹೀಗೆ ನಡ್ಡಾ ಅವರು ರವಾನಿಸಿದ ಸಂದೇಶವೆಂದರೆ ನೋ ಡೌಟ್, ಇದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಇಶಾರೆ.

ಮೋದಿ ಚಿಂತೆ ಏನು?

ಅಂದ ಹಾಗೆ ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಕ್ಕಿದ್ದಂತೆ ಯಾಕೆ ಆಸಕ್ತಿ ಕಳೆದುಕೊಂಡರು ಅಂತ ರಾಜ್ಯ ಬಿಜೆಪಿಯ ಈ ಹಿರಿಯ ನಾಯಕರು ಕೌಂಟರ್ ಚೆಕ್ ಮಾಡಿಕೊಂಡಿದ್ದಾರೆ. ಅವರಿಗಿರುವ ತಕ್ಷಣದ ಮಾಹಿತಿ ಎಂದರೆ, ಸಿದ್ದರಾಮಯ್ಯ ಅವರ ಸರ್ಕಾರವನ್ನು ಉರುಳಿಸಲು ಕೈ ಹಾಕುವುದು ಎಂದರೆ ಅನಗತ್ಯ ತಲೆನೋವನ್ನು ಎಳೆದುಕೊಂಡಂತೆ ಅಂತ ಮೋದಿ ಭಾವಿಸಿದ್ದಾರೆ.

ಕಾರಣ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಇವತ್ತು ನೂರಾ ಮೂವತ್ತೈದು ಶಾಸಕರ ಬಲವಿದೆ. ಪಕ್ಷಾಂತರ ನಿಷೇಧ ಕಾಯ್ದೆಯ ಹೊಡೆತವಿಲ್ಲದಂತೆ ನೋಡಿಕೊಳ್ಳಬೇಕು ಎಂದರೆ ಈ ಶಾಸಕರ ಪೈಕಿ ಮೂರನೇ ಎರಡು ಭಾಗದಷ್ಟು ಶಾಸಕರನ್ನು ಸೆಳೆದುಕೊಳ್ಳಬೇಕು. ಆದರೆ ಸದದ ಸ್ಥಿತಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಶಾಸಕರನ್ನು ಸೆಳೆಯುವುದು ಕಷ್ಟದ ಕೆಲಸ.

ಒಂದು ವೇಳೆ ಸರ್ಕಾರ ಬೀಳಿಸಿದರೆ ಸಾಕು ಎನ್ನುವುದಾದರೆ ನಲವತ್ತೈದರಿಂದ ಐವತ್ತು ಶಾಸಕರನ್ನು ಸೆಳೆಯಬೇಕು. ವಿವಿಧ ಶಕ್ತಿಯ ಮೂಲಕ ಇಷ್ಟು ಶಾಸಕರನ್ನೇನೋ ಸೆಳೆಯಬಹುದು. ಆದರೆ ಅವರನ್ನು ಉಪಚುನಾವಣೆಯ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಬೇಕು.

ಒಂದು ವೇಳೆ ಉಪಚುನಾವಣೆಯ ಕಣಕ್ಕಿಳಿಯುವ ಶಾಸಕರ ಪೈಕಿ ಅರ್ಧದಷ್ಟು ಮಂದಿ ಶಾಸಕರು ಸೋತರೂ ಮುಖಭಂಗವಾಗುವುದು ತಮಗೆ. ಯಾಕೆಂದರೆ, ಬಿಜೆಪಿ ಈ ಪ್ರಮಾಣದಲ್ಲಿ ಸೋಲು ಅನುಭವಿಸಿದರೆ ಪುನಃ ಕಾಂಗ್ರೆಸ್ ಸರ್ಕಾರವೇ ಸೆಟ್ಲಾಗುತ್ತದೆ.

ಈ ಮಧ್ಯೆ ಕಾಂಗ್ರೆಸ್ ಪಕ್ಷದಿಂದ ದೊಡ್ಡ ಸಂಖ್ಯೆಯ ಶಾಸಕರನ್ನು ಸೆಳೆಯುತ್ತೇವಲ್ಲ, ಹೀಗೆ ಸೆಳೆದವರ ಪೈಕಿ ಬಹುತೇಕರು ಬಿಜೆಪಿ ನೇತೃತ್ವದ ಸರ್ಕಾರ ಬಂದರೆ ಮಂತ್ರಿಮಂಡಲ ಸೇರಲು ಹವಣಿಸುತ್ತಾರೆ. 2019 ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಫಲವಾಗಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸಂಪುಟದಲ್ಲಿ ವಲಸಿಗರೇ ದೊಡ್ಡ ಮಟ್ಟದಲ್ಲಿ ಮಂತ್ರಿಗಳಾಗಿದ್ದರು.

ಹೀಗೆ ಹೊರಗಿನಿಂದ ಬಂದವರಿಗೇ ಹೆಚ್ಚಿನ ಆದ್ಯತೆ ಸಿಕ್ಕ ಪರಿಣಾಮವಾಗಿ 2023 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸ್ವಪಕ್ಷೀಯರು ಬೇಸತ್ತು ಕುಳಿತಿದ್ದರು. ನಾಳೆ ಸಿದ್ದರಾಮಯ್ಯ ಅವರ ಸರ್ಕಾರವನ್ನು ಉರುಳಿಸಿ ಪರ್ಯಾಯ ಸರ್ಕಾರವನ್ನು ರಚಿಸಿದರೂ ಇದು ತಪ್ಪದ ತಲೆ ನೋವು. ಹೀಗಾಗಿ ಇಂತಹ ತಲೆ ನೋವಿಗೆ ಕೈ ಹಾಕುವ ಬದಲು ಸೂಕ್ತ ಕಾಲ ಬರುವವರೆಗೆ ಕಾಯುವುದು ಒಳ್ಳೆಯದು.

ಸದದ ಪರಿಸ್ಥಿತಿಯನ್ನು ನೋಡಿದರೆ ಸಿದ್ದರಾಮಯ್ಯ ಅವರ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಅದು ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸಲು ಈ ವರ್ಷವೂ ಪರದಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಹಣಕಾಸಿನ ವಿಷಯದಲ್ಲಿ ಕೇಂದ್ರದ ವಿರುದ್ಧ ತಕರಾರು ಎತ್ತುವ ಸ್ಥಿತಿಗೆ ಬಂದಿದೆ ಎಂದರೆ, ಮುಂದಿನ ದಿನಗಳಲ್ಲಿ ಅದರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ಹೀಗೆ ಅದರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದರೆ ಕಾಂಗ್ರೆಸ್ ಪಕ್ಷದ ಶಾಸಕರೇ ಕಿಡಿಕಿಡಿಯಾಗುತ್ತಾರೆ. ಅಷ್ಟೇ ಅಲ್ಲ, ತಮ್ಮ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ ಎಂಬ ಕಾರಣಕ್ಕಾಗಿ ಪರ್ಯಾಯ ಮಾರ್ಗಗಳ ಕಡೆ ಹೊರಳಿ ನೋಡುವ ಸ್ಥಿತಿಗೆ ಬರುತ್ತಾರೆ. ಈ ಮಧ್ಯೆ ಮುಖ್ಯಮಂತ್ರಿ ಹುದ್ದೆಯ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಸಂಘರ್ಷ ಇನ್ನೊಂದು ವರ್ಷ ಕಳೆಯುವುದರೊಳಗಾಗಿ ವಿಕೋಪಕ್ಕೆ ತಲುಪಿರುತ್ತದೆ. ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ನಡೆಸಲು ಇದೇ ಪಕ್ವ ಕಾಲ.

ಇದೇ ರೀತಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಹಾಕಿ ಪರ್ಯಾಯ ಸರ್ಕಾರ ರಚಿಸಬೇಕೆಂದರೆ ಇಲ್ಲಿ ತಮ್ಮ ಸ್ಥಿತಿಯೂ ಸರಿ ಇಲ್ಲ. ಅರ್ಥಾತ್, ತಮಗಿರುವ ಅರವತ್ತಾರು ಶಾಸಕ ಬಲದ ಜತೆ ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲವನ್ನೂ ನೆಚ್ಚಿಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಿಂದ ಶಾಸಕರನ್ನು ಸೆಳೆದು ಸರ್ಕಾರ ರಚನೆಗೆ ಕೈ ಹಾಕುವುದು ಎಂದರೆ ಕಿಚಡಿ ಮಾಡಿದಂತೆ.

ಯಾಕೆಂದರೆ ಸರ್ಕಾರದಲ್ಲಿ ಭಾಗಿಯಾಗುವ ಎಲ್ಲರೂ ತಮಗೆ ಇಷ್ಟು ಆದ್ಯತೆ ಸಿಗಬೇಕು ಅಂತ ಪಟ್ಟು ಹಿಡಿಯುತ್ತಾರೆ. ನಾವು ಬರದೆ ಇದ್ದರೆ ಸರ್ಕಾರ ಮಾಡಲು ಸಾಧ್ಯವೇ ಇರಲಿಲ್ಲ ಎನ್ನುತ್ತಾರೆ. ಹೀಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಉರುಳಿಸಿ ಪರ್ಯಾಯ ಸರ್ಕಾರ ರಚನೆಗೆ ಕೈ ಹಾಕುವುದು ಯಾವ ಕಾರಣಕ್ಕೂ ಪ್ರಾಕ್ಟಿಕಲ್ ಅಲ್ಲ ಎಂಬುದು ಮೋದಿ ಲೆಕ್ಕಾಚಾರ.

ಯಾವಾಗ ರಾಜ್ಯ ಬಿಜೆಪಿಯ ಟಾಪ್ ಲೀಡರುಗಳಿಗೆ ಈ ಮೆಸೇಜು ಸಿಕ್ಕಿತೋ ಇದಾದ ನಂತರ ಕೆಲವರಿಗೆ ಬೇಸರವಾಗಿದೆ. ಯಾಕೆಂದರೆ, ಸಿದ್ದರಾಮಯ್ಯ ಸರ್ಕಾರ ಉರುಳಿದರೆ ತಾವು ಸಿಎಂ ಆಗುವುದು ಗ್ಯಾರಂಟಿ ಅಂತ ಈ ನಾಯಕರು ಲೆಕ್ಕ ಹಾಕಿದ್ದರು. ಕೆಲ ದಿನಗಳ ಹಿಂದೆ ಈ ನಾಯಕರ ಲೆಕ್ಕಾಚಾರದ ವಿವರ ಸಿಕ್ಕಾಗ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಧಿಘ್ಮೂಢರಾಗಿದ್ದರಂತೆ.

ಅದೇನೇ ಇರಲಿ, ಆದರೆ ಪ್ರಧಾನಿ ನರೇಂದ್ರ ಮೋದಿಯವರ ಲೆಕ್ಕಾಚಾರ ಬದಲಾಗಿರುವುದರಿಂದ, ಸಿದ್ದರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ಬದಲು ಇನ್ನಷ್ಟು ಕಾಲ ಮೌನವಾಗಿರೋಣ ಎಂಬ ತೀರ್ಮಾನಕ್ಕೆ ಬಂದಿರುವುದರಿಂದ ರಾಜ್ಯ ಬಿಜೆಪಿಯ ಸೇನಾನಿಗಳು ಲೋಕಸಭೆ ಚುನಾವಣೆಯ ಮೇಲೆ ಗಮನ ಕೇಂದ್ರೀಕರಿಸುವ ಅನಿವಾರ್ಯತೆ ಎದುರಾಗಿದೆ. ಮುಂದೇನು ಕತೆಯೋ?

ಯೋಗಿಯ ಹೊಸ ಸ್ಟೋರಿ

ಈ ಮಧ್ಯೆ ಬಿಜೆಪಿಯ ನಾಯಕ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ಮೊನ್ನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದರಂತೆ.

ಈ ಭೇಟಿಯ ಸಂದರ್ಭದಲ್ಲಿ ನೇರವಾಗಿ ವಿಷಯ ಪ್ರಸ್ತಾಪಿಸಿದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಣಕ್ಕೆ ಬಿಜೆಪಿ ವತಿಯಿಂದ ನಿಮ್ಮ ಅಳಿಯ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸಿದರೆ ಡಿ.ಕೆ.ಸುರೇಶ್ ವಿರುದ್ಧ ಮಿನಿಮಮ್ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಸಾರ್ ಎಂದಿದ್ದಾರೆ.

ಯೋಗೀಶ್ವರ್ ಅವರ ಮಾತು ಕೇಳಿದ ದೇವೇಗೌಡರು ಹಸನ್ಮುಖಿಯಾಗಿ, ಹೌದು, ಈಗ ಡಾ.ಮಂಜುನಾಥ್ ಅವರ ಜಾತಕವೂ ತುಂಬ ಚೆನ್ನಾಗಿದೆ. ನೋಡೋಣ, ಬಿಜೆಪಿ ವರಿಷ್ಟರು ಏನು ಹೇಳುತ್ತಾರೋ ಎಂದಿದ್ದಾರೆ.

ಗೌಡರ ಮಾತು ಕೇಳಿ ಉತ್ತೇಜಿತರಾದ ಯೋಗೀಶ್ವರ್, ಬಿಜೆಪಿ ವತಿಯಿಂದ ಡಾ.ಮಂಜುನಾಥ್ ನಿಲ್ಲಲು ರೆಡಿ ಅಂದ್ರೆ ಬಿಜೆಪಿಯಲ್ಲಿ ವಿರೋಧ ಮಾಡುವವರೇ ಇಲ್ಲ ಸಾರ್, ನಾನೂ ಈ ಕುರಿತು ಪಕ್ಷದ ಪ್ರಮುಖರ ಮುಂದೆ ಪ್ರಸ್ತಾಪಿಸಿದ್ದೇನೆ. ನೀವು ಯಸ್ ಎಂದರೆ ಸಾಕು ಎಂದಿದ್ದಾರೆ.

ಅಂದ ಹಾಗೆ ಈ ಹಿಂದೆ ಯೋಗೀಶ್ವರ್ ಅವರಿಗೆ ಸಂಸದರಾಗುವ ಇಚ್ಚೆ ಇತ್ತು. ಆದರೆ ಕೆಲ ದಿನಗಳಿಂದ ಈ ವಿಷಯದಲ್ಲಿ ಆಸಕ್ತಿ ಕಳೆದುಕೊಂಡಿರುವ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕುಮಾರಣ್ಣ ನಿಂತ್ರೆ ಗೆಲ್ಲಿಸಿ ಕಳಿಸ್ತೀವಿ ಅನ್ನತೊಡಗಿದರು.

ಆದರೆ ಈ ವಿಷಯದಲ್ಲಿ ಕುಮಾರಸ್ವಾಮಿ ಆಸಕ್ತಿ ತೋರದ ಪರಿಣಾಮವಾಗಿ ಯೋಗೀಶ್ವರ್ ಅವರಿಗೆ ಡಾ.ಮಂಜುನಾಥ್ ಡಾರ್ಕ್ ಹಾರ್ಸ್ ಆಗಿ ಕಾಣತೊಡಗಿದ್ದಾರೆ.

ಸುರ್ಜೇವಾಲ ಹುಡುಕಿದ ಅಸ್ತ್ರ

ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಬಳಸಬೇಕು ಅಂತ ಪಟ್ಟು ಹಿಡಿದಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಒಂದು ಅಸ್ತ್ರ ಹುಡುಕಿದ್ದಾರೆ. ಈ ಅಸ್ತ್ರದ ಹೆಸರು ಎನ್.ಆರ್.ರಮೇಶ್.

ಈ ಹಿಂದೆ ಬಿಬಿಎಂಪಿಯ ಸದಸ್ಯರಾಗಿದ್ದ ಎನ್.ಆರ್.ರಮೇಶ್ ಹಿಂದೆಯೇ ಶಾಸಕರಾಗಬೇಕಿತ್ತಾದರೂ ಯಡಿಯೂರಪ್ಪ ಕ್ಯಾಂಪಿನ ಹೊಡೆತಕ್ಕೆ ಟಿಕೆಟ್ ವಂಚಿತರಾಗುತ್ತಿದ್ದಾರೆ. ಭ್ರಷ್ಟಾಚಾರದ ಎಪಿಸೋಡುಗಳನ್ನು ಹೊರತೆಗೆಯುವ ವಿಷಯದಲ್ಲಿ ಮಾಸ್ಟರ್ ಆಗಿರುವ ಎನ್.ಆರ್.ರಮೇಶ್ ಕಾಂಗ್ರೆಸ್ ವಿರುದ್ಧ 122 ಭ್ರಷ್ಟಾಚಾರದ ಆರೋಪಗಳನ್ನು ಮಾಡಿ ನಡುಗಿಸಿದವರು.

ಹೀಗೆ ಕಾಂಗ್ರೆಸ್ ವಿರುದ್ಧ ಹೋರಾಡಿರುವ ರಮೇಶ್ ಅವರನ್ನು ಕೈ ಪಾಳಯಕ್ಕೆ ಎಳೆದುಕೊಂಡರೆ ಬಿಜೆಪಿಯ ಶಿಬಿರ ನಡುಗುವಂತೆ ಮಾಡಬಹುದು ಎಂಬುದು ಸುರ್ಜೇವಾಲ ಯೋಚನೆ. ಹಾಗಂತಲೇ ಮೊನ್ನೆ ರಮೇಶ್ ಅವರಿಗೆ ಫೋನು ಮಾಡಿದ ಸುರ್ಜೇವಾಲ, ನೀವು ಕಾಂಗ್ರೆಸ್ಸಿಗೆ ಬನ್ನಿ. ತುಂಬ ಎತ್ತರಕ್ಕೆ ಏರುತ್ತೀರಿ ಎಂದಿದ್ದಾರೆ.

ಅವರ ಮಾತು ಎನ್.ಆರ್.ರಮೇಶ್ ಅವರಿಗೆ ಹಿತವೆನ್ನಿಸಿದೆಯಾದರೂ ಸಂಘ ಪರಿವಾರದ ನಾಯಕರಾದ ಬಿ.ಎಲ್.ಸಂತೋಷ್, ಮುಕುಂದ್, ಸುಧೀರ್ ಮತ್ತು ತಿಪ್ಪೇಸ್ವಾಮಿಯವರನ್ನು ನೆನಪಿಸಿಕೊಂಡು ನಾನು ಕಾಂಗ್ರೆಸ್ಸಿಗೆ ಬರಲ್ಲ ಸಾರ್ ಅಂತ ಪ್ರತಿಯುತ್ತರಿಸಿದ್ದಾರೆ.

ಆದರೆ ಸುರ್ಜೇವಾಲ ಅವರು ರಮೇಶ್ ಬೆನ್ನಿಗೆ ಬಿದ್ದ ವಿಷಯ ತಿಳಿಯುತ್ತಲೇ ಬಿಜೆಪಿಯ ಹಲ ಮಾಜಿ ಸಚಿವರಿಗೆ ಆತಂಕ ಶುರುವಾಗಿರುವುದು ಮಾತ್ರ ಗುಟ್ಟಾಗಿ ಉಳಿದಿಲ್ಲ.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
bjp top leadersdelhi bjp national conventiondevendra phadnavisno operation lotus in karnatakapramod savantsiddaramaiah govt.
3 FacebookTwitterPinterestEmail
admin

previous post
2,300 ಕೋಟಿ ರೂ. ಯೋಜನೆಗೆ ಅಸ್ತು
next post
ಬೆಂಗಳೂರು ಬಿಡಿ: ಚುನಾವಣೆಗೆ ಸಿದ್ಧರಾಗಿ

You may also like

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026

ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

September 4, 2026

ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

September 3, 2026

ಸಚಿವ ಜಮೀರ್ ಅಹಮದ್ ತಲೆದಂಡ ಸನ್ನಿಹಿತ !

September 2, 2026

ಶಿವಕುಮಾರ್ ಸರ್ಕಾರ ಕಿತ್ತೊಗೆಯುಲು ಬಿಜೆಪಿ ಶಪಥ

September 1, 2026

‘ಇವರಲ್ಲಿ ಯಾರಿಗೆ ಕೊಕ್ , ನೀವೇ ನಿರ್ಧರಿಸಿ ಡಿಕೆಶಿ’

August 31, 2026

ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ

August 29, 2026

ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

August 28, 2026

ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

August 27, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (559)
  • ಅಂಕಣ (109)
  • ಉದ್ಯೋಗ (346)
  • ದಿನ ಭವಿಷ್ಯ (110)
  • ರಾಜಕೀಯ (2,052)
  • ರಾಜ್ಯ (2,367)
  • ರಾಷ್ಟ್ರ (2,332)
  • ವಿಶ್ಲೇಷಣೆ (202)
  • ಶಿಕ್ಷಣ (408)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026

KMS Special

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ