ಬೆಂಗಳೂರು : ಸರ್ವಧರ್ಮ ಗುರುಗಳು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರ ಸಮ್ಮುಖದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಲೋಕಭವನದ ಗಾಜಿನ ಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸಂಜೆ 4 ಗಂಟೆ 5 ನಿಮಿಷಕ್ಕೆ ಶಿವಕುಮಾರ್ ಅವರಿಗೆ ಪ್ರಮಾಣವಚನ ಭೋದಿಸಲಿದ್ದಾರೆ.
ಶಿವಕುಮಾರ್ ತಾವು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲೇ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಕೆಲವರನ್ನೂ ಸೇರಿದಂತೆ ಹೊಸ ಮುಖಗಳನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ಜೂನ್ 3 ರಿಂದಲೇ ಆಡಳಿತ ನಡೆಸಲಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಪೂಜೆ ಹಾಗೂ ಅಜ್ಜಯ್ಯ ಅವರ ಪೂಜೆ ಸಲ್ಲಿಸಲಿದ್ದಾರೆ. ಅನಂತರ ಸಚಿವ ಸಂಪುಟಸಭೆ ನಡೆಸಲಿದ್ದಾರೆ.
ಧರ್ಮಗುರುಗಳು, ಗಣ್ಯರ ಜೊತೆಗೆ ರಾಜ್ಯದ ಪ್ರಮುಖ ರಾಜಕಾರಣಿಗಳು, ಸಂಸದರು, ಶಾಸಕರು, ಆಯ್ದ ಪ್ರಮುಖ ಅಧಿಕಾರಿಗಳು ಸೇರಿದಂತೆ 1200 ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಗಾಜಿನ ಮನೆ ಒಳಗೆ ಹಾಗೂ ಹೊರಭಾಗದಲ್ಲಿ ಹುಲ್ಲು ಹಾಸಿನಮೇಲೆ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ.
ಜನಪ್ರತಿನಿಧಿಗಳು, ಸಚಿವರಾಗುವವರ ಕುಟುಂಬ ವರ್ಗ, ಅಧಿಕಾರಿಗಳು ಒಂದಡೆಯಾದರೆ, ಮತ್ತೊಂದಡೆ ಧರ್ಮಗುರುಗಳು ಮತ್ತು ವಿಶೇಷ ಆಹ್ವಾನಿತ ಗಣ್ಯರಿಗೆ ಸ್ಥಳ ಕಾಯ್ದಿರಿಸಲಾಗಿದೆ.
ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜಭವನದಿಂದ ವಿಧಾನಸೌಧದವರೆಗೂ ತೆರೆದ ಜೀಪ್ನಲ್ಲಿ ಬರಲಿದ್ದಾರೆ.
ಈ ಸಲುವಾಗಿ ವಿಧಾನಸೌಧ ಹಾಗೂ ಲೋಕಭವನದ ಪ್ರಮುಖ ಮಾರ್ಗಗಳಲ್ಲಿ ಸಂಚಾರ ನಿಷೇಧ ಮಾಡುವುದರ ಜೊತೆಗೆ ಇಲ್ಲಿನ ಆಸುಪಾಸಿನ ಸರ್ಕಾರಿ ಕಚೇರಿಗಳಿಗೆ ಮಧ್ಯಾಹ್ನದ ನಂತರ ರಜೆ ಘೋಷಣೆ ಮಾಡಿದೆ.
ಅಭಿಮಾನಿಗಳು ಮತ್ತು ಕಾರ್ಯಕರ್ತರು ಪ್ರಮಾಣವಚನದ ಕಾರ್ಯಕ್ರಮ ವೀಕ್ಷಿಸಲು ರಾಜಭವನದಿಂದ ಕೆ.ಆರ್. ವೃತ್ತದವರೆಗೂ ದೊಡ್ಡ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ಗಣ್ಯರಿಗೆ ಹೊರತುಪಡಿಸಿ, ಉಳಿದ ಪಕ್ಷದ ಕಾರ್ಯಕರ್ತರಿಗಾಗಲಿ, ಸಾರ್ವಜನಿಕರಿಗಾಗಲೀ ಲೋಕಭವನದಲ್ಲಿ ಪ್ರವೇಶವಿರುವುದಿಲ್ಲ.
ವಿಧಾನಸೌಧ ಮತ್ತು ಲೋಕಭವನ ಸರಹದ್ದಿನಲ್ಲಿ ಮೆರವಣಿಗೆ ಮಾಡುವುದನ್ನು ನಿಷೇಧಿಸಲಾಗಿದೆ.
ಪ್ರಮಾಣವಚನ ಸುಲಲಿತವಾಗಿ ನಡೆಸುವ ದೃಷ್ಟಿಯಿಂದ ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಸಿದ್ಧತೆಗಳ ಉಸ್ತುವಾರಿ ವಹಿಸಿಕೊಂಡು ಕಾರ್ಯಕ್ರಮ ಸಿದ್ದತೆ ನಡೆಸಿದ್ದಾರೆ. ಅವರ ಸಲಹೆ ಮೇರೆಗೆ ಅಧಿಕಾರಿಗಳು, ಅತ್ಯಂತ ಬಿಗಿ ಕ್ರಮಗಳನ್ನು ಕೈಗೊಂಡಿರುವುದಲ್ಲದೆ, ಪ್ರವೇಶ ಪತ್ರ ಹೊಂದಿರುವವರಿಗೆ ಮಾತ್ರ ಲೋಕಭವನಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ.
ಎಐಸಿಸಿಯ ಮಾರ್ಗದರ್ಶನದಂತೆ ಸುರೇಶ್ ಅವರು ಎಲ್ಲಾ ಪೂರ್ವ ಸಿದ್ದತೆ ಮಾಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂದು ಬಂದೋಬಸ್ತ್ಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನೇ ನಿಯೋಜಿಸಲಾಗಿದೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಸರ್ಕಾರದ ಮಟ್ಟದಲ್ಲಿ ಕೆಲವು ಬದಲಾವಣೆಗಳನ್ನು ತರಲು ಐಎಎಸ್/ಐಪಿಎಸ್ ಅಧಿಕಾರಿಗಳನ್ನು ಬದಲಾವಣೆ ಮಾಡಲಿದ್ದಾರೆ.
ಮುಖ್ಯಮಂತ್ರಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರೂ ಸೇರಿದಂತೆ ಕೆಲವು ಪ್ರಮುಖ ಹುದ್ದೆಗಳಿಗೆ ಯಾವ ಅಧಿಕಾರಿಗಳನ್ನು ನೇಮಕ ಮಾಡಬೇಕೆಂಬುದನ್ನು ಪಟ್ಟಿ ಸಿದ್ದಗೊಂಡಿದೆ. ಸಿಬಿಐನಲ್ಲಿ ಸೇವೆ ಸಲ್ಲಿಸಿದ್ದ ಎಡಿಜಿಪಿ ಹಿತೇಂದ್ರ ಅವರನ್ನು ಶಿವಕುಮಾರ್, ಗುಪ್ತಚರದ ಮುಖ್ಯಸ್ಥರಾಗಿ ನೇಮಕ ಮಾಡಿಕೊಳ್ಳುತ್ತಿದ್ದು, ಅವರು ಈಗಾಗಲೇ ಬಾಹ್ಯವಾಗಿ ತಮ್ಮ ಕೆಲಸ ಆರಂಭಿಸಿದ್ದಾರೆ.
ಪ್ರಮಾಣ ವಚನ ಸಿದ್ದತೆ ಜೊತೆಗೆ ಸುರೇಶ್ ಆಯಕಟ್ಟಿನ ಜಾಗದಲ್ಲಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡುವ ಸಂಬಂಧ ಆಡಳಿತ ಸೇವೆಯಲ್ಲಿ ನುರಿತ ಅಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.


