ನವದೆಹಲಿ:ಪಕ್ಷದ ವರಿಷ್ಠರು ಹಸಿರು ನಿಶಾನೆ ತೋರಿದ ದಿನ ಮಂತ್ರಿಮಂಡಲ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿ ಸಂಪುಟ ವಿಸ್ತರಣೆ ಕಸರತ್ತು ಪೂರ್ಣಗೊಳಿಸಿದ ನಂತರ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪ್ರವಾಸದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿಂತಿರುಗಿದ ನಂತರ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಜೊತೆ ಸಮಾಲೋಚಿಸಿ ನಮಗೆ ಪಟ್ಟಿ ರವಾನಿಸುತ್ತಾರೆ ಎಂದರು.
ವರಿಷ್ಠರ ಮುಂದೆ ಅಭಿಪ್ರಾಯ
ಮಂತ್ರಿಮಂಡಲ ವಿಸ್ತರಣೆಗೆ ಸಂಬಂಧಿಸಿದಂತೆ ನಾನು, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಅಭಿಪ್ರಾಯಗಳನ್ನು ವರಿಷ್ಠರ ಮುಂದೆ ಇಟ್ಟಿದ್ದೇವೆ.
ಖರ್ಗೆ ಜೊತೆ ನಮ್ಮ ದೆಹಲಿ ನಾಯಕರು ಚರ್ಚಿಸಿ, ನಮಗೆ ಸಂದೇಶ ನೀಡಲಿದ್ದಾರೆ.
ವಿಸ್ತರಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ, ಅನುಮತಿ ದೊರೆಯುತ್ತಿದ್ದಂತೆ ಮಂತ್ರಿಮಂಡಲ ವಿಸ್ತರಿಸುವುದಾಗಿ ತಿಳಿಸಿದರು.
ಕಳೆದ ಗುರುವಾರ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದ ರಾಜ್ಯ ನಾಯಕರು, ಇಂದು ಬೆಳಗ್ಗೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಮಂತ್ರಿಮಂಡಲ ವಿಸ್ತರಣೆಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.

ತಡರಾತ್ರಿವರೆಗೂ ಚರ್ಚೆ
ಇದಕ್ಕೂ ಮುನ್ನವೇ ತಡರಾತ್ರಿವರೆಗೂ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆಯೂ ಈ ಸಂಬಂಧ ಸುದೀರ್ಘ ಚರ್ಚೆ ನಡೆಯಿತು.
ರಾಹುಲ್ ಸಲಹೆಯಂತೆ ಯುವಪೀಳಿಗೆಗೆ ಮಂತ್ರಿಮಂಡಲದಲ್ಲಿ ಹೆಚ್ಚು ಸ್ಥಾನ ದೊರೆಯಲಿದೆ, ಆದರೆ, ಮೊದಲ ಬಾರಿ ಶಾಸಕರಾದವರಿಗೆ ಅವಕಾಶ ಇಲ್ಲ.
ಎರಡು ಹಾಗೂ ಅದಕ್ಕಿಂತ ಹೆಚ್ಚು ಬಾರಿ ಆಯ್ಕೆಗೊಂಡವರಿಗೆ ಅವಕಾಶ ದೊರೆಯಲಿದೆ, ಆದರೆ, ತುಂಬಾ ಹಿರಿಯರಿಗೆ ಮಂತ್ರಿಗಿರಿ ಇಲ್ಲ.
ಹಿರಿಯರಿಗೆ ಅವಕಾಶ ಇಲ್ಲ
ಸಿದ್ದರಾಮಯ್ಯ ಮತ್ತು ಹರಿಪ್ರಸಾದ್, ಹಿರಿಯರಿಗೆ ಅವಕಾಶ ನೀಡುವಂತೆ ಮಾಡಿದ ಶಿಫಾರಸ್ಸನ್ನು ರಾಹುಲ್ ತಳ್ಳಿಹಾಕಿ, ನಿಮ್ಮ ಸಂಪುಟದಲ್ಲಿ ಅವರೇ ತುಂಬಿದ್ದರು, ಆ ವಿಚಾರ ಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡೋಣ ಎಂದು ಖಂಡತುಂಡವಾಗಿ ತಿಳಿಸಿದರು.
ರಾಹುಲ್ ಸೂಚನೆ ಮೇರೆಗೆ ವೇಣುಗೋಪಾಲ್ ಜೊತೆ ಚರ್ಚೆ ನಡೆದು, ಪಟ್ಟಿ ಅಂತಿಮಗೊಂಡಿದೆ, ಅದಕ್ಕೆ ಖರ್ಗೆ ಅನುಮೋದನೆ ದೊರೆಯುತ್ತಿದ್ದಂತೆ ಶಿವಕುಮಾರ್ ತಮ್ಮ ಮಂತ್ರಿಮಂಡಲ ವಿಸ್ತರಿಸಿಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಿ.ಕೆ.ಹರಿಪ್ರಸಾದ್, ಎ.ಎಸ್.ಪೊನ್ನಣ್ಣ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಲಕ್ಷ್ಮಣ ಸವದಿ ಅವರ ಸಂಪುಟ ಸೇರ್ಪಡೆ ವಿಚಾರ ಗೊಂದಲಕ್ಕೆ ಎಡೆ ಮಾಡಿತ್ತು.
ಒಬ್ಬರಿಗೆ ಒಂದೇ ಹುದ್ದೆ
ಇದರ ಬಗ್ಗೆ ಸುರ್ಜೇವಾಲ ಇಂದು ಬೆಳಗ್ಗೆ ಮಾತುಕತೆ ನಡೆಸಿ, ಮೊದಲ ಬಾರಿಗೆ ಆಯ್ಕೆಗೊಂಡಿರುವ ಪೊನ್ನಣ್ಣ ಅವರಿಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ, ಪಕ್ಷದ ಸಿದ್ಧಾಂತದ ಪ್ರಕಾರ ಒಬ್ಬರಿಗೆ ಒಂದೇ ಹುದ್ದೆ, ಹರಿಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ನೀಡಲು ಆಗದು.
ಅವರಿಗೆ ಅಧಿಕಾರ ನೀಡುವುದಿದ್ದರೆ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಹಾಗೂ ಶರಣಪ್ರಕಾಶ್ ಪಾಟೀಲ್ ಅವರ ಹೆಸರೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುನ್ನೆಲೆಗೆ ಬಂದಿತ್ತು.
ಆದರೆ, ಅವರುಗಳು ಮಂತ್ರಿ ಸ್ಥಾನವೂ ಬೇಕು ಎಂದ ಕಾರಣಕ್ಕೆ ಅಧ್ಯಕ್ಷ ಹುದ್ದೆ ನೀಡಲಿಲ್ಲ, ಈಗ ಅದೇ ನಿಯಮ ಇವರಿಗೂ ಅನ್ವಯ ಆಗುತ್ತದೆ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.
ಜಾರಕಿಹೊಳಿ ಅಸಮಾಧಾನ
ಹೆಬ್ಬಾಳ್ಕರ್ ಹಾಗೂ ಸವದಿ ಸೇರ್ಪಡೆಗೆ ಸಚಿವ ಸತೀಶ್ ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇವರೊಂದಿಗೆ ಶಿವಕುಮಾರ್ ಚರ್ಚೆ ನಡೆಸಿ ತಿಳಿಸುವಂತೆ ಸೂಚಿಸಿದ್ದರು.
ಈ ಸೂಚನೆ ಮೇರೆಗೆ ಶಿವಕುಮಾರ್ ದೆಹಲಿಯ ಹಳೇ ಕಾಂಗ್ರೆಸ್ ಭವನದಲ್ಲೇ ಸತೀಶ್ ಅವರೊಂದಿಗೆ ಮುಖಾಮುಖಿ ಚರ್ಚೆ ಮಾಡಿ ಮಾಹಿತಿ ತಲುಪಿಸಿದ್ದಾರೆ.
ಸಂಪುಟ ವಿಸ್ತರಣೆ ಕುರಿತಂತೆ ದೆಹಲಿ ಮುಖಂಡರೊಂದಿಗೆ ಚರ್ಚೆ ನಡೆಸಿದ ನಂತರ ಶಿವಕುಮಾರ್ ಮತ್ತಿತರ ನಾಯಕರು ನಗರಕ್ಕೆ ಹಿಂತಿರುಗಿದರು.


