ಬೆಂಗಳೂರು: ಕಾಂಗ್ರೆಸ್ ವರಿಷ್ಠರ ಸಲಹೆ ಮೇರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಮೇ 28 ಬೆಳಗ್ಗೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಗುರುವಾರ ಬೆಳಗ್ಗೆ 11 ರಿಂದ 11:30ರ ನಡುವೆ ರಾಜ್ಯಪಾಲರ ಭೇಟಿಗೆ ಮುಖ್ಯಮಂತ್ರಿ ಕಾರ್ಯಾಲಯ ಸಮಯ ಪಡೆದುಕೊಂಡಿದೆ.
ರಾಜಭವನಕ್ಕೆ ತೆರಳುವುದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮಂತ್ರಿಮಂಡಲದ ತಮ್ಮ ಎಲ್ಲಾ ಸಹೋದ್ಯೋಗಿಗಳಿಗೆ ಸರ್ಕಾರಿ ನಿವಾಸ ಕಾವೇರಿಯಲ್ಲಿ ಉಪಹಾರ ಕೂಟ ಏರ್ಪಡಿಸಿದ್ದಾರೆ.
ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಸಲಹೆ ಹಾಗೂ ಯುವನಾಯಕತ್ವಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿ ಸ್ಥಾನ ತ್ಯಜಿಸುತ್ತಿರುವುದಾಗಿ ಉಪಹಾರ ಕೂಟದಲ್ಲೇ ತಮ್ಮ ಸಹೋದ್ಯೋಗಿಗಳಿಗೆ ಮಾಹಿತಿ ನೀಡಲಿದ್ದಾರೆ.
ಕಳೆದ ಮೇ 26ರಂದು ಎಐಸಿಸಿ ನಾಯಕರ ಸಮ್ಮುಖದಲ್ಲಿ ನಡೆದ ಮಾತುಕತೆಗಳ ಮಾಹಿತಿ ನೀಡಿ, ಕಳೆದ ಮೂರು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮ ಹೆಗಲಿಗೆ ನಿಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಿದ್ದಾರೆ.
ರಾಜಭವನಕ್ಕೆ ತೆರಳುವ ಮುನ್ನ ಅಥವಾ ನಂತರ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ರಾಜೀನಾಮೆ ನೀಡಬೇಕಾದ ಕುರಿತು ಅಧಿಕೃತ ಮಾಹಿತಿ ನೀಡಲಿದ್ದಾರೆ.
ವಿಧಾನಸೌಧದ ಪ್ರಾಂಗಣದಲ್ಲಿರುವ ಮಾಜಿ ಪ್ರಧಾನಿ ದಿವಂಗತ ಜವಾಹರ ಲಾಲ್ ನೆಹರು ಪ್ರತಿಮೆಗೆ ಮಾಲಾರ್ಪಣೆ ನಂತರ ಮಾಧ್ಯಮದವರು ಸುತ್ತುವರೆದು ರಾಜೀನಾಮೆ ವಿಷಯ ಪ್ರಸ್ತಾಪಿಸಿದ ವೇಳೆ ಏನನ್ನೂ ಪ್ರತಿಕ್ರಿಯಿಸಲು ಅವರು ಇಚ್ಛಿಸಲಿಲ್ಲ. ಆದರೆ, ಕೊನೆಗೆ ಹೊರಡುವ ಮುನ್ನ, ಮೇ 28 ರಂದು ನಿಮ್ಮನ್ನು ಭೇಟಿ ಆಗುತ್ತೇನೆ. ಅಲ್ಲಿ ಎಲ್ಲವನ್ನೂ ಮಾತನಾಡುತ್ತೇನೆ ಎಂದಷ್ಟೇ ತಿಳಿಸಿದರು.
ಕರ್ನಾಟಕ ಕಾಂಗ್ರೆಸ್ನಲ್ಲಿನ ಗೊಂದಲ ನಿವಾರಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇ 26 ರಂದು ಇಡೀ ದಿನ ನಡೆಸಿದ ಸಭೆ ಮತ್ತು ಸಂಧಾನದ ನಂತರ, ನಾಯಕತ್ವ ಬದಲಾವಣೆ ತೀರ್ಮಾನ ಕೈಗೊಳ್ಳಲಾಯಿತು.
ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಹೇಳಿದರೆ ಅಧಿಕಾರ ಬಿಡುವುದಾಗಿ ಹೇಳಿಕೊಂಡೇ ಬಂದಿದ್ದ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ತ್ಯಜಿಸುವಂತೆ ರಾಹುಲ್ ಮೂಲಕವೇ ಖರ್ಗೆ ಹೇಳಿಸಿದರು.
ರಾಹುಲ್ ಸಲಹೆ ಮೇರೆಗೆ ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ನಿರ್ಧಾರ ಕೈಗೊಂಡ ಸಿದ್ದರಾಮಯ್ಯ ಅಂದು ರಾತ್ರಿಯೇ ನಗರಕ್ಕೆ ಹಿಂತಿರುಗಿದರು, ಇಂದು ಜವಾಹರಲಾಲ್ ನೆಹರು ಪುಣ್ಯತಿಥಿ ಹೊರತುಪಡಿಸಿ ಎಲ್ಲಾ ಕಾರ್ಯಕ್ರಮ ರದ್ದು ಮಾಡಿ ಮನೆಯಲ್ಲೇ ಉಳಿದರು.


