’ನನಗೂ ಇದು ಸಾಕಾಗಿದೆ, ನಡಿಯಪ್ಪ ಹೋಗೋಣ, ದೆಹಲಿಗೆ ಇನ್ನು ಎಷ್ಟು ಬಾರಿ ಬರುವುದು’
ನವದೆಹಲಿ:ನೀಟ್ ಪರೀಕ್ಷೆ ಅಕ್ರಮ ಕುರಿತು ಕಾಂಗ್ರೆಸ್ ನಡೆಸಿರುವ ಹೋರಾಟದಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೆ ನೆನೆಗುದಿಗೆ ಬಿದ್ದಿದೆ.
ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವರಿಷ್ಠರ ಅನುಮತಿ ದೊರೆಯದೆ, ಬರಿಗೈಯಲ್ಲಿ ಹಿಂತಿರುಗಿದ್ದಾರೆ.
ಕಾಂಗ್ರೆಸ್ ಸಂಸದರ ಪ್ರತಿಭಟನೆ
ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ, ಸಂಸತ್ ಭವನ ಹಾಗೂ ಪ್ರಧಾನಿ ನಿವಾಸದ ಎದುರು ಕಾಂಗ್ರೆಸ್ ಸಂಸದರು ನಡೆಸಿದ ಪ್ರತಿಭಟನೆ ನಂತರ ಮುಖ್ಯಮಂತ್ರಿ ಅವರು ರಾಹುಲ್ ಜೊತೆ ಸಂಪುಟ ವಿಸ್ತರಣೆ ಕುರಿತು ಚರ್ಚೆಗೆ ಮುಂದಾದರು.
ಮುಖ್ಯಮಂತ್ರಿ ಮಾತು ಆಲಿಸಿದ ರಾಹುಲ್, ಇಷ್ಟೆಲ್ಲಾ ನಡೆಯುತ್ತಿದೆ, ನಿಮಗೆ ಅಧಿಕಾರದ್ದೇ ಚಿಂತೆಯೇ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಮಾತಿಗೆ ಮರು ಉತ್ತರ ನೀಡದೆ, ಪ್ರತಿಭಟನೆ ನಂತರ ಕರ್ನಾಟಕ ಭವನಕ್ಕೆ ಹಿಂತಿರುಗಿದ ಶಿವಕುಮಾರ್, ತಮ್ಮ ಆಪ್ತ ಶಾಸಕರ ಜೊತೆ ಚರ್ಚೆ ನಡೆಸಿ, ಬುಧವಾರ ಬೆಳಿಗ್ಗೆಯೇ ಬೆಂಗಳೂರಿಗೆ ಹಿಂತಿರುಗುವ ತೀರ್ಮಾನ ಕೈಗೊಂಡರು.
ಸಚಿವ ಆಕಾಂಕ್ಷಿಗಳಿಗೆ ರಾಹುಲ್ ಸಂದೇಶ
ಸಚಿವ ಆಕಾಂಕ್ಷಿಗಳಿಗೆ ರಾಹುಲ್ ಸಂದೇಶ ತಿಳಿಸಿದ್ದಲ್ಲದೆ, ಅಲ್ಲೇ ಇದ್ದ ಹಿರಿಯ ಶಾಸಕ ಜಯಚಂದ್ರ ಅವರಿಗೆ ’ನಡಿಯಪ್ಪ, ನನಗೂ ಇದು ಸಾಕಾಗಿದೆ, ಹೋಗೋಣ’ ಎಂದಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಿಸುವ ಉದ್ದೇಶದಿಂದ ನಾನು ದೆಹಲಿಗೆ ಎರಡು-ಮೂರು ಬಾರಿ ಬಂದಿದ್ದೇನೆ, ಇನ್ನು ಎಷ್ಟು ಬಾರಿ ಬರುವುದು.
ಪ್ರವಾಸಕ್ಕೆ ತೆರಳಿದ್ದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಸಂಪರ್ಕಿಸಿ, ಬುಧವಾರವೇ ಸಂಪುಟ ವಿಸ್ತರಣೆಗೆ ಅವಕಾಶ ಮಾಡಿಕೊಡುವಂತೆ ಕೋರಿಕೊಂಡಿದ್ದೆ, ನನ್ನ ಮನವಿಗೆ ಸ್ಪಂದಿಸಿ, ಅವರು ತಮ್ಮ ಪ್ರವಾಸ ಮೊಟಕುಗೊಳಿಸಿದ್ದರು, ಆದರೆ ಇಲ್ಲಿ ನಡೆದಿದ್ದೇ ಬೇರೆ ಎಂದರು.

ನಮ್ಮ ಕೆಲಸ ಮಾಡೋಣ ಬನ್ನಿ
ವರಿಷ್ಠರು ಕರೆದರೆ ಮಾತ್ರ ದೆಹಲಿಗೆ ಬರುತ್ತೇನೆ, ಇಲ್ಲದಿದ್ದರೆ, ನಮ್ಮ ಕೆಲಸ ಮಾಡೋಣ ಬನ್ನಿ ಎಂದು ಸಚಿವ ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿ, ತಮ್ಮ ಕೊಠಡಿಗೆ ತೆರಳಿದರು.
ಕೊಠಡಿಗೆ ತೆರಳವುದಕ್ಕೂ ಮುನ್ನ ತಡರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ಸಚಿವ ಸಂಪುಟದ ಬಗ್ಗೆ ನಮ್ಮ ನಾಯಕರ ತೀರ್ಮಾನವೇ ಅಂತಿಮ ಎಂದಿದ್ದಾರೆ.
ಅವರ ನಿರ್ಧಾರದಂತೆ ಮುಂದೆ ನಡೆಯುತ್ತೇನೆ, ಸಚಿವ ಸ್ಥಾನ ಖಾಲಿ ಬಿಡಲು ಇಷ್ಟವಿಲ್ಲ, ಅದರಲ್ಲಿ ಅರ್ಥವೂ ಇಲ್ಲ, ಆದರೆ, ಮಂಗಳವಾರ ನಿಗದಿಯಾಗಿದ್ದ ಸಭೆ ನಡೆಯಲಿಲ್ಲ, ನಾನೇನು ಮಾಡಲಿ ಎಂದರು.
ನಾಯಕರ ಹೋರಾಟ ಶ್ಲಾಘನೀಯ
ವಿದ್ಯಾರ್ಥಿಗಳ ಭಾವನೆಗೆ ಕಾಂಗ್ರೆಸ್ ಸ್ಪಂದಿಸಿದೆ, ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು, ವಿದ್ಯಾರ್ಥಿಗಳಿಗೆ ನ್ಯಾಯಕೊಡಬೇಕು, ಈ ವಿಷಯದಲ್ಲಿ ನಮ್ಮ ನಾಯಕರು ನಡೆಸುತ್ತಿರುವ ಹೋರಾಟ ಶ್ಲಾಘನೀಯ ಎಂದು ಬಣ್ಣಿಸಿದರು.
ಸಂಪುಟ ವಿಚಾರಕ್ಕೆ ಮತ್ತೆ ದೆಹಲಿಗೆ ಬರುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ, ಕರೆದಾಗ ಬರುತ್ತೇನೆ, ಚರ್ಚೆ ಮಾಡುತ್ತೇನೆ, ಈಗಾಗಲೇ ನಾನು, ಸಿದ್ದರಾಮಯ್ಯ, ಹರಿಪ್ರಸಾದ್ ಸೇರಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚಿಸಿ ನಮ್ಮ ಅಭಿಪ್ರಾಯ ತಿಳಿಸಿ ಸಂಭಾವ್ಯ ಸಚಿವರ ಪಟ್ಟಿಗೆ ಒಂದು ಸ್ವರೂಪ ನೀಡಿದ್ದೇವೆ.
ರಾಹುಲ್ ಗಾಂಧಿ ಜೊತೆ ಖರ್ಗೆ ಚರ್ಚಿಸಿ ಅನುಮೋದನೆ ನೀಡುವುದಷ್ಟೇ ಬಾಕಿ, ಒಂದು ವೇಳೆ ವಿಷಯ ಪ್ರಸ್ತಾಪಿಸಿದರೆ ನಾವು, ನಮ್ಮ ಅಭಿಪ್ರಾಯ ಹೇಳಬೇಕಾಗುತ್ತದೆ, ಅವರು ನೀಡುವ ಪಟ್ಟಿಯಂತೆ ನಾನು ಮಂತ್ರಿಮಂಡಲ ವಿಸ್ತರಿಸುತ್ತೇನೆ ಎಂದರು.
ಪಟ್ಟಿ ಅಂತಿಮಗೊಳಿಸಲು ಸಿದ್ಧ
ನನಗಂತೂ ಸಚಿವ ಸ್ಥಾನ ಖಾಲಿ ಬಿಡಲು ಇಷ್ಟವಿಲ್ಲ, ನನಗೆ ಇಂದೇ ಅವಕಾಶ ನೀಡಿದರೆ, ಪಟ್ಟಿ ಅಂತಿಮಗೊಳಿಸಲು ಸಿದ್ಧ.
ಸೋಮವಾರವೇ ದೆಹಲಿಗೆ ಬರುವಂತೆ ವರಿಷ್ಠರು ಆಹ್ವಾನ ನೀಡಿದ್ದರು, ಆದರೆ, ಹಾಸನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದರಿಂದ ನಾನು ರಾಜಧಾನಿಗೆ ಬರಲು ಆಗಲಿಲ್ಲ, ಮಂಗಳವಾರ ನೀಟ್ ಕುರಿತು ಶಾಂತ ಹೋರಾಟಕ್ಕೆ ದೆಹಲಿ ಪೊಲೀಸರು ಅವಕಾಶ ನೀಡದೆ, ನಾಯಕರುಗಳನ್ನು ಬಂಧಿಸಿದ್ದರಿಂದ, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಂಪುಟ ವಿಸ್ತರಣೆ ಮಾತುಕತೆ ಸಂಪೂರ್ಣವಾಗಲಿಲ್ಲ ಎಂದರು.


