ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸದಸ್ಯರಿಂದ ವಿಧಾನಮಂಡಲದಲ್ಲಿ ಗದ್ದಲ, ಕೋಲಾಹಲ
ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣದ ಆರೋಪಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ಚಾಮರಾಜನಗರ ಅರಣ್ಯದಲ್ಲಿ ಮೂವರು ಬೇಟೆಗಾರರ ಎನ್ಕೌಂಟರ್ ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ವಿಧಾನಮಂಡಲದಲ್ಲಿಂದು ಕೋಲಾಹಲ ಎಬ್ಬಿಸಿತು.
ನಾಗೇಂದ್ರ ರಾಜೀನಾಮೆ ನೀಡದೆ ಸದನ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಕಾರಣ ಉಭಯ ಸದನಗಳ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು.
ಆಡಳಿತ-ಪ್ರತಿಪಕ್ಷ ಸದಸ್ಯರ ಚಕಮಕಿ
ಬಿಜೆಪಿ ಆರೋಪವನ್ನು ಸರ್ಕಾರ ಮತ್ತು ಆಡಳಿತ ಪಕ್ಷದ ಸದಸ್ಯರು ತಳ್ಳಿಹಾಕಿ, ಪ್ರತಿಪಕ್ಷ ಸದಸ್ಯರ ಮೇಲೆ ಹರಿಹಾಯ್ದಿದ್ದರಿಂದ ಸದನಗಳಲ್ಲಿ ಭಾರೀ ಗದ್ದಲ, ಕೋಲಾಹಲ, ಗೊಂದಲ ಉಂಟಾಯಿತು.
ವಿ.ಸುನೀಲ್ಕುಮಾರ್ ಮಾತನಾಡಿ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರನ್ನು ಸದನದಲ್ಲಿ ಕೂರಿಸಿಕೊಂಡು ಪ್ರಶ್ನೋತ್ತರ ಕಲಾಪ ಹೇಗೆ ನಡೆಸಲಾಗುತ್ತದೆ, ಮೊದಲು ಸಚಿವರ ರಾಜೀನಾಮೆ ಪಡೆಯಿರಿ ಎಂದರು.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಹಲವು ಸದಸ್ಯರು ದನಿಗೂಡಿಸಿ ಮಾತನಾಡಿದರು.
ಆರೋಪ-ಪ್ರತ್ಯಾರೋಪ
ಜೆಡಿಎಸ್ ಸದಸ್ಯರೂ ಬೆಂಬಲ ವ್ಯಕ್ತಪಡಿಸಿದಾಗ ಆಡಳಿತ ಪಕ್ಷದ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದು ಸದನ ಗೊಂದಲಮಯವಾಯಿತು.
ಅಶೋಕ್ ಮಾತನಾಡಿ, ಈ ಹಿಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇದೇ ಸದನದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ರಾಜೀನಾಮೆ ಪಡೆದಿದ್ದರು, ಮತ್ತೆ ಸೇರ್ಪಡೆ ಮಾಡಿಕೊಂಡಿರುವುದು ಏಕೆ ಎಂಬುದನ್ನು ಸರ್ಕಾರ ಸದನಕ್ಕೆ ತಿಳಿಸಬೇಕು, ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ಸದನ ನಡೆಯಲು ಬಿಡುವುದಿಲ್ಲ ಎಂದರು.
ಸಭಾಧ್ಯಕ್ಷ ಜಿ.ಎಸ್.ಪಾಟೀಲ್ ಮಧ್ಯಪ್ರವೇಶಿಸಿ, ನೋಟೀಸ್ ನೀಡಿ ವಿಷಯ ಪ್ರಸ್ತಾಪಿಸಿ, ಏಕಾಏಕಿ ವಿಚಾರ ಪ್ರಸ್ತಾಪಿಸಿದರೆ ಹೇಗೆ, ನಿಯಮಾವಳಿಗಳ ಪ್ರಕಾರ ಸದನ ನಡೆಯಬೇಕಲ್ಲವೇ ಎಂದರು.
ಪಟ್ಟು ಹಿಡಿದು ಘೋಷಣೆ
ಇದನ್ನು ಒಪ್ಪದ ಬಿಜೆಪಿ, ಜೆಡಿಎಸ್ ಸದಸ್ಯರು ಒಮ್ಮೆಲೇ ಎದ್ದುನಿಂತು ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿದರು.
ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕು, ಹಗರಣದ ಆರೋಪ ಪಟ್ಟಿಯಲ್ಲಿ ಸಚಿವರು ನಂ.1 ಆರೋಪಿ ಆಗಿದ್ದಾರೆ ಎಂದರು.
ಸಚಿವ ಕೃಷ್ಣಬೈರೇಗೌಡ, ಸದನ ನಿಯಮಾವಳಿ ಓದಿ ಸಚಿವರ ವಿರುದ್ಧ ಆರೋಪ ಮಾಡುವುದಕ್ಕೆ ಅವಕಾಶ ಕೊಡಬಾರದು, ಈ ವಿಚಾರದಲ್ಲಿ ಸಭಾಧ್ಯಕ್ಷರು ರೂಲಿಂಗ್ ನೀಡಬೇಕು, ಗೂಂಡಾ ವರ್ತನೆ ನಡೆಸಲು ಅವಕಾಶ ಕೊಡಬಾರದು, ಸದನದ ಮೇಲೆ ದಬ್ಬಾಳಿಕೆಗೆ ಅವಕಾಶ ನೀಡದೇ ಕಡಿವಾಣ ಹಾಕಬೇಕು ಎಂದರು.
ಸದಸ್ಯರ ಮಾತಿನ ಗದ್ದಲ
ಆಡಳಿತ ಪಕ್ಷದ ಹಲವು ಸದಸ್ಯರು ಬಿಜೆಪಿ ನಿಲುವು ವಿರೋಧಿಸಿ ಮಾತನಾಡಲು ಮುಂದಾದಾಗ ಗದ್ದಲದಲ್ಲಿ ಏನೂ ಕೇಳದಂತಾಯಿತು.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಮಾತನಾಡಿ, ಪ್ರತಿಪಕ್ಷಗಳಿಗೆ ಸದನ ನಡೆಸಲು ಇಷ್ಟವಿಲ್ಲ ಎಂದು ಛೇಡಿಸಿದರು.
ಅಶೋಕ್ ಮಾತನಾಡಿ, ರಾಜೀನಾಮೆ ಕೊಟ್ಟ ನಂತರವೇ ಚರ್ಚೆ ನಡೆಸೋಣ ಎಂದರು.
ಕಲಾಪ ಕೆಲಕಾಲ ಮುಂದೂಡಿಕೆ
ಸಭಾಧ್ಯಕ್ಷರ ಮನವಿಗೆ ಯಾರೂ ಕಿವಿಗೊಡದಿದ್ದಾಗ ಸದನ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.
ಇದಕ್ಕೂ ಮುನ್ನ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಚಾಮರಾಜನಗರ ಜಿಲ್ಲೆ ಹನೂರು ಬಳಿ ಎನ್ಕೌಂಟರ್ಗೆ ಮೂವರು ಮೃತಪಟ್ಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ತನಿಖಾ ವರದಿ ಬರಲಿ, ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು, ಮೃತಪಟ್ಟವರು ಬೇಟೆಗಾರರೇ ಆಗಿದ್ದರೆ ಅವರ ವಿರುದ್ಧವೂ ಕ್ರಮ ಆಗಲಿದೆ, ಪರಿಹಾರದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು, ವರದಿ ನಂತರ ಸತ್ಯಾಂಶ ಹೊರಬರಲಿದೆ ಎಂದರು.
ರಾಜಕೀಯ ಮಾಡಲು ಬಂದಿದ್ದೀರಾ
ಪೌರಾಡಳಿತ ಸಚಿವ ಸಿ.ಎನ್.ಬಾಲಕೃಷ್ಣ ಮಧ್ಯಪ್ರವೇಶಿಸಿ, ಘಟನೆ ಕುರಿತು ಸ್ಪಷ್ಪೀಕರಣ ಕೇಳುವ ಬದಲು ರಾಜಕೀಯ ಮಾಡಲು ಬಂದಿದ್ದೀರಾ, ತಪ್ಪು ಮಾಡಿದರೆ ಶಿಕ್ಷೆಯಾಗಲಿದೆ, ಪ್ರಶ್ನೋತ್ತರ ಕಲಾಪ ನಡೆಯಬೇಕಲ್ಲವೇ ಎಂದರು.
ಪುಟ್ಟರಂಗಶೆಟ್ಟಿ ಮಾತನಾಡಿ, ಘಟನೆಯ ಗಾಯಾಳುಗಳು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ, ಅರಣ್ಯ ಇಲಾಖೆ ಸಿಬ್ಬಂದಿ ಹೇಳಿಕೆ ಸರಿಯಲ್ಲ ಎನ್ನುತ್ತಿಲ್ಲ, ನ್ಯಾಯಾಂಗ ತನಿಖೆ ನಂತರ ಸತ್ಯಾಂಶ ಹೊರಬರಲಿದೆ ಎಂದರು.
ಸಿ.ಬಿ.ಸುರೇಶ್ಬಾಬು ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದರೆ, ಮಂಡಿ ಕೆಳಗೆ ಹೊಡೆಯಬೇಕಿತ್ತು, ಹತ್ತಿರದಿಂದ ಗುಂಡು ಹಾರಿಸಿದ್ದಾರೆ, ಗಾಯಾಳು ಮಹಿಮಾ ದಾಸ್ ಆಸ್ಪತ್ರೆಯಿಂದ ಎಲ್ಲಿಗೆ ಹೋದರು ಎಂಬುದು ಗೊತ್ತಿಲ್ಲ, ಅರಣ್ಯ ಇಲಾಖೆಯವರೇ ಬೇರೆಡೆ ಇಟ್ಟಿರುವ ಅನುಮಾನವಿದೆ, ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು ಎಂದರು.
ನಾಲ್ಕನೇ ವ್ಯಕ್ತಿ ಎಲ್ಲಿ
ಅರಗ ಜ್ಞಾನೇಂದ್ರ ಮಾತನಾಡಿ, ಕಾಡಿನಲ್ಲಿ ಸಿಸಿ ಟಿವಿಗಳಿವೆ, ಬಂದೂಕಿನಿಂದ ಕಾಡಿಗೆ ಹೋಗಿದ್ದರೆ ಅವರನ್ನು ಪತ್ತೆ ಹಚ್ಚಬಹುದಿತ್ತು, ಮೂವರು ಮೃತಪಟ್ಟಿದ್ದರೆ ನಾಲ್ಕನೇ ವ್ಯಕ್ತಿ ಎಲ್ಲಿಗೆ ಹೋದರು, ಮಲಗಿದ್ದವರನ್ನು ಎತ್ತಿಕೊಂಡು ಹೋಗಿ ಶೂಟೌಟ್ ಮಾಡಲಾಗಿದೆ ಎಂಬ ಆರೋಪವಿದೆ, ಎನ್ಕೌಂಟರ್ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದರು.
ಬಿ.ವೈ.ವಿಜಯೇಂದ್ರ ಮಾತನಾಡಿ, ಕಾಡಂಚಿನ ಜನರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ಸಂಘರ್ಷ ನಡೆಯುತ್ತಿರುತ್ತದೆ, ಹನೂರು ಎನ್ಕೌಂಟರ್ ಘಟನೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ, ನ್ಯಾಯಾಂಗ ತನಿಖೆ ಆಗಬೇಕು, ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಆಗಬೇಕು, ಪರಿಹಾರ ನೀಡಬೇಕು ಎಂದರು.
ಎಂ.ಟಿ.ಕೃಷ್ಣಪ್ಪ ಮಾತನಾಡಿ, ಯಾವ ಆಧಾರದ ಮೇಲೆ ಕಾಡುಗಳ್ಳರು ಎನ್ನುತ್ತೀರಿ, ೩೪ ಕೆ.ಜಿ. ಜಿಂಕೆ ಮಾಂಸ ಸಿಕ್ಕಿದೆ ಎಂದಾದರೆ, ಪ್ರಾಣಿಚರ್ಮ ಎಲ್ಲಿಹೋಯಿತು, ಇದು ಸತ್ಯವಲ್ಲ, ಬೇಟೆಗಾರರನ್ನು ಜೀವಂತವಾಗಿ ಹಿಡಿದುತರಬೇಕಿತ್ತು, ಸತ್ತವರು ರೈತರು ಎಂದರು.
ನೋಟಿಸ್ ಇಲ್ಲದೆ ವಿಷಯ ಪ್ರಸ್ತಾಪ
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಮೃತಪಟ್ಟವರ ಕುಟುಂಬಗಳ ಬಗ್ಗೆ ಸರ್ಕಾರಕ್ಕೂ ಅನುಕಂಪವಿದೆ, ಸರ್ಕಾರ ಉತ್ತರ ನೀಡಲು ಸಿದ್ಧವಿದೆ, ನಾವು ಓಡಿ ಹೋಗುತ್ತಿಲ್ಲ, ಯಾವುದೇ ನೋಟಿಸ್ ಇಲ್ಲದೆ ಏಕಾಏಕಿ ವಿಷಯ ಪ್ರಸ್ತಾಪಿಸುವುದು ಸರಿಯಲ್ಲ, ಮೊದಲು ಪ್ರಶ್ನೋತ್ತರ ಅವಧಿ ನಡೆಯಲಿ ಎಂದರು.
ಸರ್ಕಾರದ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದಾಗ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಸದನ ನಿಯಂತ್ರಣಕ್ಕೆ ಬಾರದಿದ್ದಾಗ, ಎರಡು ಬಾರಿ ಸದನ ಮುಂದೂಡಿ ವಾತಾವರಣ ತಿಳಿಗೊಳಿಸಲು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ.
ಸದನ ಮತ್ತೆ ಸಮಾವೇಶಗೊಂಡಾಗ ಪ್ರತಿಪಕ್ಷ ಬಿಜೆಪಿ ಸದಸ್ಯರು ಧರಣಿ ನಡೆಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.


