ಬೆಂಗಳೂರು:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಬೇಕೆಂದರೆ ಕ್ಷೇತ್ರದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ನಿಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೈಗೊಳ್ಳಲು ಅನುದಾನ ಬಿಡುಗಡೆ ಮಾಡುತ್ತೇನೆ.
ಅಭಿವೃದ್ಧಿ ಕೆಲಸಗಳು ಆಗಿಲ್ಲ
ಅನುದಾನ ಕೊರೆತೆಯಿಂದ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂಬುದು ನನಗೆ ತಿಳಿದಿದೆ, ನೀವು ಚಿಂತಿಸಬೇಡಿ, ನಿಮ್ಮ ಊಹೆಗೂ ಮೀರಿ ಅನುದಾನ ಕೊಡುತ್ತೇನೆ, ಸರ್ಕಾರಕ್ಕೆ ಹಣಕಾಸಿನ ಕೊರತೆ ಇಲ್ಲ.
ಉಳಿದ ಎರಡು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಜನರ ವಿಶ್ವಾಸ ಗಳಿಸಿ.
ನಿಮ್ಮ ಜನಪ್ರಿಯತೆ ಹೆಚ್ಚಾದರೆ, ಸರ್ಕಾರದ ಜನಪ್ರಿಯತೆಯೂ ಹೆಚ್ಚುತ್ತದೆ, ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸರ್ಕಾರ ಕೆಲವು ಜನಪರ ಯೋಜನೆಗಳನ್ನು ಪ್ರಕಟಿಸಿ ಕೈಗೆತ್ತಿಕೊಳ್ಳಲಿದೆ.

ನಿರೀಕ್ಷೆಗೆ ತಕ್ಕ ಕೆಲಸ ಮಾಡಿ
ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ, ನೀವು ಮತ್ತೆ ವಿಧಾನಸಭೆಗೆ ಆಯ್ಕೆಗೊಳ್ಳಬೇಕು, ಮರು ಆಯ್ಕೆಗೆ ಪೂರಕವಾಗುವಂತಹ ಕಾರ್ಯಗಳನ್ನು ಮಾಡಿಕೊಡುತ್ತೇನೆ.
ಮುಖ್ಯಮಂತ್ರಿ ಆಗಲು, ಸಚಿವರಾಗಲೂ ಅಥವಾ ಇನ್ನಿತರ ಹುದ್ದೆ ಪಡೆಯಲು ನೀವೆಲ್ಲರೂ ಅರ್ಹರಿದ್ದೀರಿ, ಆದರೆ, ಏಕಕಾಲಕ್ಕೆ ಎಲ್ಲರಿಗೂ ಅವಕಾಶ ದೊರೆಯುವುದಿಲ್ಲ.
ಅವಕಾಶ ದೊರೆಯಲಿಲ್ಲ ಎಂದು ಮರುಗುವುದು ಬೇಡ, ಮುಂದೆ ದೊರೆಕಿಸಿಕೊಳ್ಳಲು ಈಗಿನಿಂದಲೇ ಕ್ಷೇತ್ರ ಉಳಿಸಿಕೊಳ್ಳುವತ್ತ ಗಮನ ಹರಿಸಿ.
ಜನ ಹರಸಿದರೆ ಉನ್ನತ ಹುದ್ದೆ
ಕ್ಷೇತ್ರದ ಜನ ನಿಮ್ಮನ್ನು ಹರಸಿದರೆ, ರಾಷ್ಟ್ರದ ಉನ್ನತ ಹುದ್ದೆಯನ್ನೂ ಅಲಂಕರಿಸುವ ಅವಕಾಶ ದೊರೆಯುತ್ತದೆ, ಆದ್ದರಿಂದ ಉಳಿದ ಎರಡು ವರ್ಷಗಳ ಆಡಳಿತಾವಧಿಯಲ್ಲಿ ಜನರ ಸೇವೆ ಮಾಡಿ ಎಂದರು.
ವಿಧಾನಮಂಡಲದ ಮುಂಗಾರು ಅಧಿವೇಶನ ಮುಗಿಯುತ್ತಿದ್ದಂತೆ ಕ್ಷೇತ್ರದ ಕಡೆ ತೆರಳಿ, ನಾನು ಮತ್ತು ನನ್ನ ಸಹೋದ್ಯೋಗಿಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇವೆ, ನಿಮ್ಮ ಬಳಿಯೂ ಬರುತ್ತೇವೆ.
ಅಭಿವೃದ್ಧಿ ಕಾರ್ಯಗಳ ಜೊತೆ ಚುನಾವಣಾ ರಣತಂತ್ರ ಈಗನಿಂದಲೇ ಆರಂಭಿಸಿ ಎಂದು ಕಿವಿಮಾತು ಹೇಳಿದರು.


