ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಭಾನುವಾರ ನಡೆದ ಅಹಿಂದ ಸಮಾವೇಶ ಸರ್ಕಾರ ಮತ್ತು ಕಾಂಗ್ರೆಸ್ನಲ್ಲಿ ಬಿರುಕು ಮೂಡಿಸಿದೆ.
ಸಿದ್ದರಾಮಯ್ಯ ಬಣಕ್ಕೆ ಸೇರಿದ ಪ್ರಮುಖ ನಾಯಕರೇ ಸಮಾವೇಶದಿಂದ ದೂರ ಉಳಿದಿದ್ದು, ಸದಾ ಈ ವರ್ಗಗಳ ಪರ ನಿಲ್ಲುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಹಾ ಗೈರಾಗಿದ್ದರು.
ಪಕ್ಷದ ವಿರುದ್ಧ ಸಮಾವೇಶ
ಪಕ್ಷದ ವಿರುದ್ಧ ಸಮಾವೇಶ ನಡೆದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಇಂದು ಬೆಳಗ್ಗೆ ಕರೆಸಿಕೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸುಮಾರು ಒಂದು ಗಂಟೆ ಚರ್ಚೆ ಮಾಡಿ, ಸರ್ಕಾರ ಮತ್ತು ಪಕ್ಷದ ವಿರುದ್ಧದ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಸಲಹೆ ಮಾಡಿದ್ದಾರೆ.
ಈ ಮಧ್ಯೆ, ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಭಾನುವಾರದ ಅಹಿಂದ ಸಮಾವೇಶ ಹಾಗೂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ವೇದಿಕೆ ಮೇಲೆ ಬರೀ ಭಾಷಣ ಮಾಡುವುದರಿಂದ ಅಹಿಂದ ನಾಯಕರಾಗಲು ಸಾಧ್ಯವಿಲ್ಲ, ರಾಷ್ಟ್ರ ಕಟ್ಟಲೂ ಆಗದು ಎಂದಿದ್ದಾರೆ.
ಇವೆಲ್ಲಾ ನಡೆಯುವುದಿಲ್ಲ
ಸಭೆ ಸೇರಿ ನಿರ್ಣಯಗಳನ್ನು ಮಾಡುವುದರಿಂದ ಅಹಿಂದ ಉದ್ದೇಶ ಈಡೇರುವುದಿಲ್ಲ, ಪ್ರಜಾಪ್ರಭುತ್ವದಲ್ಲಿ ಇವೆಲ್ಲಾ ನಡೆಯುವುದಿಲ್ಲ, ಸಿದ್ದರಾಮಯ್ಯ ಅವರನ್ನು ಇಷ್ಟು ದಿನ ಎಲ್ಡರ್ ಬ್ರದರ್ ಎಂಬುದಾಗಿ ಹಾಡಿಹೊಗಳಿ, ಈಗ ಬೇರೆ ಮಾತನಾಡುವುದು ಸರಿಯಲ್ಲ.
ಕಳೆದ ಭಾನುವಾರ ನಗರದ ಅರಮನೆ ಆವರಣದಲ್ಲಿ ಜರುಗಿದ ಅಹಿಂದದ 25ನೇ ವರ್ಷದ ರಜತ ಮಹೋತ್ಸವಕ್ಕೆ ಆಯೋಜಕರು ನಮಗೆ ಆಹ್ವಾನ ನೀಡಿರಲಿಲ್ಲ.
ಅಹಿಂದ ಒಬ್ಬರಿಂದಲೇ ಬೆಳೆದಿಲ್ಲ, ಮೊದಲು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ನಡೆಸಲು ನಾನು ಕಾರಣ ಎಂದು ತಿಳಿಸಿದ ಡಾ.ಮಹದೇವಪ್ಪ, ಅಂದು ಲಕ್ಷಾಂತರ ಜನ ಸೇರಿದ್ದರು.
ದೇಶ ಕಟ್ಟಲು ಆಗದು
ಭಾನುವಾರದ ಸಮಾವೇಶ ಸೀಮಿತವಾಗಿತ್ತು, ಒಬ್ಬರಿಂದಲೇ ಇಂತಹ ಸಮಾವೇಶ ಯಶಸ್ವಿಗೊಳಿಸಲು ಸಾಧ್ಯವಿಲ್ಲ, ಬರೀ ಭಾಷಣ ಮಾಡಿ ದೇಶ ಕಟ್ಟಲು ಆಗದು ಎಂದು ವ್ಯಂಗ್ಯವಾಡಿದರು.
ಮುಂದಿನ ಅಹಿಂದ ನಾಯಕರು ಯಾರು ಎಂಬುದನ್ನು ಜನ ತೀರ್ಮಾನಿಸುತ್ತಾರೆಯೇ ಹೊರತು ವೇದಿಕೆಗಳಲ್ಲಿ ನಿರ್ಣಯ ಕೈಗೊಳ್ಳುವುದರಿಂದ ಅಲ್ಲ ಎಂದರು.
ಜನ ಒಪ್ಪುವವರು ಅಹಿಂದ ನಾಯಕರಾಗಬೇಕು, ಸಿದ್ದರಾಮಯ್ಯ ಒಬ್ಬರೇ ಅಲ್ಲ, ನಾನು, ಮಹದೇವಪ್ಪ ಎಲ್ಲರೂ ಅಹಿಂದ ನಾಯಕರೇ ಎಂದು ಜಾರಕಿಹೊಳಿ ತಿಳಿಸಿದರು.
ಕಾದು ನೋಡೋಣ
ಅರಮನೆ ಆವರಣದಲ್ಲಿ ನಡೆದ ಸಭೆ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡೋಣ.
ನಾವು ಸಮಾಜದ ಪರವಾಗಿದ್ದೇವೆ, ನಮ್ಮ ಹೋರಾಟ ಮತ್ತು ಸಂಘಟನೆ ಎಂದಿಗೂ ಇರುತ್ತದೆ, ಯಾರೋ ಕರೆಯದ ಮಾತ್ರಕ್ಕೆ ನಾವು ಹಿಂದೆ ಸರಿಯುವುದಿಲ್ಲ, ನಮ್ಮ ಉದ್ದೇಶ ಗುರಿ ಏನಿದೆಯೋ ಅದನ್ನು ಭವಿಷ್ಯದಲ್ಲಿ ಮಾಡಿ ತೋರಿಸುತ್ತೇವೆ ಎಂದರು.


