ಬೆಂಗಳೂರು:ಮುಂದಿನ 500 ದಿನಗಳ ಆಡಳಿತದಲ್ಲಿ ಯುವಸಮುದಾಯಕ್ಕೆ ಒಂದು ಲಕ್ಷ ಸರ್ಕಾರಿ ಉದ್ಯೋಗ, ಅಲ್ಲದೆ, ಖಾಸಗಿ ಕ್ಷೇತ್ರಗಳಲ್ಲಿ ಐದು ಲಕ್ಷ ಕೆಲಸ ಕೊಡಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಘೋಷಿಸಿದರು.
ಮುಖ್ಯಮಂತ್ರಿಯಾಗಿ ತಮ್ಮ 100 ದಿನಗಳ ಆಡಳಿತದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ಹಾಲ್ನಲ್ಲಿ ಆಯೋಜಿಸಿದ್ದ ದೃಢ ಕರ್ನಾಟಕ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳ ಆಡಳಿತಾವಧಿಯಲ್ಲಿ ರಾಜ್ಯದ ಜನರ ಒಳಿತು ಮತ್ತು ಅಭಿವೃದ್ಧಿಗೆ ರೂಪಿಸಿರುವ ಪಟ್ಟಿ ನೀಡಿದರು.
ಟೆಲಿ ಐಸಿಯು ಕೇಂದ್ರ
ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯ ದೊರೆಯುವಂತೆ ಮಾಡುವುದಲ್ಲದೆ, ಟೆಲಿ ಐಸಿಯು ಕೇಂದ್ರ ಆರಂಭಿಸುವುದಾಗಿಯೂ ಪ್ರಕಟಿಸಿದರು.
ಈಗಾಗಲೇ ಘೋಷಿಸಿರುವಂತೆ ಸಣ್ಣ ಹಿಡುವಳಿದಾರರಿಗೆ ನೇಗಿಲ ಯೋಗಿ ಯೋಜನೆಯನ್ನು ಪ್ರತಿ ಜಿಲ್ಲೆಯ ೨ ತಾಲ್ಲೂಕುಗಳಲ್ಲಿ ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ.7.5 ಮೀಸಲಾತಿ, ಪಬ್ಲಿಕ್ ಶಾಲೆಗಳ ಸಂಖ್ಯೆ 1000ಕ್ಕೆ ಏರಿಕೆ ಹಾಗೂ ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ ಜಾರಿಗೆ ತರಲಾಗುವುದು.
ಒಂದು ಟ್ರಿಲಿಯನ್ ಆರ್ಥಿಕತೆ
2037ರ ವೇಳೆಗೆ ರಾಜ್ಯದ ಆರ್ಥಿಕತೆ 1 ಟ್ರಿಲಿಯನ್ಗೆ ಹೆಚ್ಚಿಸುವ ಮಹಾ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದ ಕೈಗಾರಿಕಾ ಪ್ರಗತಿಗೆ ವೇಗ ನೀಡಲು ಆದ್ಯತೆ ನೀಡಲಾಗಿದ್ದು, 100 ದಿನಗಳಲ್ಲಿ 43,214 ಕೋಟಿ ರೂ. ಹೂಡಿಕೆಗೆ ಅನುಮೋದನೆ ನೀಡಲಾಗಿದೆ.
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ನೈಜ ಬದುಕಿನ ಸೊಗಡು ತಿಳಿಸುವ ಪ್ರವಾಸ ಕೈಗೊಳ್ಳಲಾಗುವುದು.
’ರೈಜ್’ ಅಭಿಯಾನ
ರಾಜ್ಯದಲ್ಲಿ ಮಾದಕ ವಸ್ತು ಅಕ್ರಮ ಸಾಗಣೆ ಮತ್ತು ಮಾರಾಟ ತಡೆಗೆ ’ರೈಜ್’ ಅಭಿಯಾನ ಆರಂಭಿಸಲಾಗುವುದು.
ಪ್ರತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ವಿಶೇಷ ದಳ ಸ್ಥಾಪಿಸುವುದಾಗಿ ಘೋಷಿಸಿದ ಮುಖ್ಯಮಂತ್ರಿ, ಇದರಿಂದ ಸಂಘಟಿತ ಅಪರಾಧ, ಗೂಂಡಾಗಿರಿ, ಸುಲಿಗೆ ಮತ್ತು ಚಾಳಿ ಬಿದ್ದ ಅಪರಾಧಿಗಳನ್ನು ಮಟ್ಟಹಾಕಲಾಗುವುದು.
ನಾಗರಿಕರು ಭಯಮುಕ್ತರಾಗಿ ಬದುಕಲು ರೌಡಿಸಂ ಮಟ್ಟ ಹಾಕುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.
ಐದು ಲಕ್ಷ ಸೂರು
ಗ್ರಾಮೀಣ ಕರ್ನಾಟಕದ ಮನೆರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಐದು ಲಕ್ಷ ಕುಟುಂಬಗಳಿಗೆ ಸೂರು ಕಲ್ಪಿಸುವ ಘೋಷಣೆ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ವರ್ಗದವರ ಕಾಲೋನಿಗಳಿಗೆ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುವುದು.
ಬೆಂಗಳೂರು ಗಡಿಯಾಚಿಗಿನ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ ಜಾಗತಿಕ ಮಟ್ಟದ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
1.5 ಲಕ್ಷ ಕೋಟಿ ರೂ. ಬಂಡವಾಳ
ಕರ್ನಾಟಕದ ಬೆಳವಣಿಗೆ ಬಲಪಡಿಸಲು ವಿವಿಧ ವಲಯಗಳಲ್ಲಿ ಮೂಲಸೌಕರ್ಯ ಮತ್ತು ಇತರ ಚಟುವಟಿಕೆ ಕೈಗೊಳ್ಳಲು ತಮ್ಮ ಮುಂದಿನ 500 ದಿನಗಳ ಆಡಳಿತದಲ್ಲಿ 1.5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ತಿಳಿಸಿದರು.
ತಮ್ಮ ಮುಂದಿನ 500 ದಿನಗಳ ಅಧಿಕಾರಾವಧಿಯಲ್ಲಿ ಕರ್ನಾಟಕವನ್ನು ಬಡತನ ಮುಕ್ತಗೊಳಿಸುವ ಹಾಗೂ ಶಾಲೆ ತೊರೆಯುವವರ ಸಂಖ್ಯೆ ಶೂನ್ಯಕ್ಕೆ ತರುವುದಾಗಿ ತಿಳಿಸಿದರು.
ಕರ್ನಾಟಕವನ್ನು ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಜ್ಯವನ್ನಾಗಿಸುವುದಕ್ಕಷ್ಟೇ ನನ್ನ ದೃಷ್ಟಿಕೋನ ಸೀಮಿತವಾಗಿಲ್ಲ, ಬದಲಿಗೆ ನಾಳಿನ ಭಾರತಕ್ಕೆ ನಮ್ಮ ರಾಜ್ಯವನ್ನು ಮಾದರಿಯಾಗಿ ಮಾಡುವುದೇ ಗುರಿ ಎಂದರು.
ಗ್ಯಾರಂಟಿಗಳಿಗೆ 1.45 ಲಕ್ಷ ಕೋಟಿ ರೂ.
ಕಳೆದ ಮೂರು ವರ್ಷಗಳಲ್ಲಿ ಜನ, ನೀತಿ, ಪ್ರಗತಿಯ ಮೂಲ ವಿಚಾರದ ಮೇಲೆ ರಾಜ್ಯವನ್ನು ಕಟ್ಟಿದ್ದು, ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ 1.45 ಲಕ್ಷ ಕೋಟಿ ರೂ. ನೀಡಿದ್ದೇವೆ.
ಮೂರು ವರ್ಷಗಳಲ್ಲಿ 2.53 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ, ವಿದೇಶಿ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯ ದೇಶದಲ್ಲೇ 2ನೇ ಸ್ಥಾನ ಪಡೆದಿದೆ ಎಂದರು.


