ಬೆಂಗಳೂರು:ಗ್ರಾಮೀಣ ಬಡವರು, ಕೃಷಿ ಕೂಲಿಕಾರ್ಮಿಕರಿಗೆ ಅನುಕೂಲ ಮಾಡಿಕೊಡಲೆಂದು ಜಾರಿಗೆ ತಂದಿದ್ದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುತ್ತಿದ್ದ ಭ್ರಮ್ಮಾಂಡ ಭ್ರಷ್ಟಾಚಾರ ತಡೆಗಟ್ಟಿ, ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜ್ಯ ಸರ್ಕಾರಗಳ ಜವಾಬ್ದಾರಿ ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಮನರೇಗಾ ಯೋಜನೆಗೆ ಹೊಸ ರೂಪ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೊಳಗೊಂಡ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಯೋಜನೆಯನ್ನು ವಿರೋಧಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಯಾವುದೇ ಬದಲಾವಣೆ ಆಗದು
ವಿಧಾನಮಂಡಲದ ಅಧಿವೇಶನ ನಡೆಸಿ, ಕೇಂದ್ರ ಸರ್ಕಾರ ಜಾರಿ ತಂದಿರುವ ನೂತನ ಉದ್ಯೋಗ ಖಾತ್ರಿ ಯೋಜನೆ ’ವಿಬಿ-ಜಿ-ರಾಮ್-ಜಿ’ ವಿರುದ್ಧ ನಿರ್ಣಯ ಕೈಗೊಳ್ಳುವುದರಿಂದ ಯಾವುದೇ ಬದಲಾವಣೆ ಆಗದು, ಇದು ವ್ಯರ್ಥ ಕಸರತ್ತು ಎಂದು ಟೀಕಿಸಿದ್ದಾರೆ.
ನರೇಗಾ ಯೋಜನೆಯಡಿ 11,000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗಿದೆ, ಆದರೆ, ಅಭಿವೃದ್ಧಿಗೂ, ವೆಚ್ಚವಾಗಿರುವ ಹಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಈ ಯೋಜನೆಯಲ್ಲಿ ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಇಲ್ಲದಿರುವುದರಿಂದಲೇ ಭ್ರಷ್ಟಾಚಾರ ತಾಂಡವ ಆಡುತ್ತಿದ್ದರೂ ಅದನ್ನು ನಿಯಂತ್ರಿಸುವ ಕೆಲಸ ಆಗಲಿಲ್ಲ.
ಸುಧಾರಣೆಗಳೊಂದಿಗೆ ಹೊಸ ರೂಪ
ಇದೆಲ್ಲವನ್ನು ಮನಗಂಡ ಪ್ರಧಾನಿ ಮೋದಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರದ್ದುಪಡಿಸದೆ, ಕೆಲವು ಸುಧಾರಣೆಗಳೊಂದಿಗೆ ಹೊಸ ರೂಪ ನೀಡಿದ್ದಾರೆ.
ಇನ್ನು ಮುಂದೆ ಈ ಯೋಜನೆಯಡಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರಗಳು ಶೇಕಡಾ 40ರಷ್ಟು ಹಾಗೂ ಉಳಿದ ಶೇಕಡ 60 ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಲಿದೆ.
ನರೇಗಾ ಯೋಜನೆಯಡಿ ನಡೆಯುತ್ತಿದ್ದ ಭ್ರಷ್ಟಾಚಾರ ಹತ್ತಿಕ್ಕಲು ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜ್ಯ ಸರ್ಕಾರಗಳಿಗೂ ಹೊಣೆಗಾರಿಕೆ ನೀಡಲಾಗಿದೆ ಎಂದು ವಿವರಿಸಿದರು.
ವಿಕಸಿತ ಭಾರತ ಮಿಷನ್
’ವಿಬಿ-ಜಿ-ರಾಮ್-ಜಿ’ ಎಂದರೆ ’ವಿಕಸಿತ ಭಾರತ-ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ)’ ಎಂಬುದಾಗಿದೆ.
ನೂತನ ಯೋಜನೆಯಿಂದ ಗ್ರಾಮ ಪಂಚಾಯತ್ಗಳಿಗೆ ಅನ್ಯಾಯವಾಗಿದೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಗ್ಯತೆಗೆ, ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸಲಾಗದೆ ಮುಂದೂಡುತ್ತಿದ್ದು ನಾಚಿಕೆ ಆಗಬೇಕು.
ವಾತಾವರಣ ಕೆಡಿಸುವ ಉದ್ದೇಶ
ರಾಜ್ಯದಲ್ಲಿನ ಶಾಂತ ವಾತಾವರಣ ಕೆಡಿಸಬೇಕೆಂಬುದಷ್ಟೇ ಸರ್ಕಾರದ ಉದ್ದೇಶ, ಮಾತೆತ್ತಿದರೆ ಕೋಟಿ ಕೋಟಿ ರೂ. ತೆರಿಗೆ ಎನ್ನುತ್ತೀರಲ್ಲಾ, ರಾಜ್ಯ ಸರ್ಕಾರದ ವತಿಯಿಂದಲೇ ನರೇಗಾ ಕೂಲಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.
ಯೋಜನೆಗೆ ಸಂಬಂಧಿಸಿದಂತೆ ಇಲ್ಲಸಲ್ಲದ ಆರೋಪ ಮಾಡುವ ಬದಲು ಮುಕ್ತ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಅವರಿಗೆ ಆಹ್ವಾನ ನೀಡಿದರು.

