ಬೆಂಗಳೂರು:ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿಶೇಷ ಅನುದಾನ ದುರ್ಬಳಕೆ ಮಾಡಿಕೊಂಡು ಪಕ್ಷದ ಹೈಕಮಾಂಡ್ಗೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಗುರುತರ ಆರೋಪ ಮಾಡಿದ್ದಾರೆ.
ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಿಕೊಂಡ ಸಿದ್ದರಾಮಯ್ಯ ಸರ್ಕಾರ, ಈಗ ಗೃಹಲಕ್ಷ್ಮಿ ಯೋಜನೆಯ ೫,೦೦೦ ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ವಿತರಿಸದೆ ಲಪಟಾಯಿಸಿದೆ.
ಕಾಂಗ್ರೆಸ್ ವರಿಷ್ಠರ ಓಲೈಕೆ
ವಿವಿಧ ಇಲಾಖೆಗಳಿಗೆ ನೀಡಿದ ಅನುದಾನವನ್ನು ಉದ್ದೇಶಿತ ಕಾರ್ಯಗಳಿಗೆ ಬಳಕೆ ಮಾಡದೆ, ಕಾಂಗ್ರೆಸ್ ವರಿಷ್ಠರ ಓಲೈಕೆಗೆ ದುರುಪಯೋಗ ಪಡಿಸಿಕೊಂಡಿದೆ ಎಂದರು.
ತಮ್ಮ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಕೆಲವು ದಾಖಲೆಗಳನ್ನು ಬಹಿರಂಗಪಡಿಸಿದ ವಿಜಯೇಂದ್ರ, ಕರ್ನಾಟಕ ಸರ್ಕಾರ ಇಡೀ ದೇಶದಲ್ಲಿ ಭ್ರಷ್ಟಾಚಾರಕ್ಕೆ ಮಾದರಿಯಾಗಿದೆ ಎಂದರು.
ವಿಶೇಷ ಅನುದಾನವಾಗಿ ಕೇಂದ್ರ ಸರ್ಕಾರ ನೀಡಿದ 1,323 ಕೋಟಿ ರೂ.ಗಳನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ, ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ, ಸಂಬಂಧಪಟ್ಟ ಇಲಾಖೆಗಳಿಂದ ಹಣ ಬಳಸಿದ ದೃಢೀಕರಣ ಪಡೆದುಕೊಂಡಿದೆ.
ಹಣ ಬಳಕೆ ದೃಢೀಕರಣ
ಒತ್ತಡಕ್ಕೆ ಮಣಿದ ನೀರಾವರಿ ಇಲಾಖೆ 132 ಕೋಟಿ ರೂ.ಗಳನ್ನು ಬಳಕೆ ಮಾಡಲಾಗಿದೆ ಎಂಬ ದೃಢೀಕರಣ ನೀಡಿದೆ.
ನಂತರವೂ ಹಣ ಬಿಡುಗಡೆ ಆಗಿಲ್ಲ, ತಕ್ಷಣ ನೀಡಿ ಎಂದು ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎಲ್) ಹಣಕಾಸು ಇಲಾಖೆಗೆ ಪತ್ರ ಬರೆದಿರುವುದನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಇದೇ ರೀತಿ ಹಲವು ಇಲಾಖೆಗಳಲ್ಲಿ ಹಣ ದುರುಪಯೋಗ ಮಾಡಲಾಗಿದೆ, ಈ ಬಗ್ಗೆ ಮುಖ್ಯಮಂತ್ರಿ ಬಾಯಿ ಬಿಡುತ್ತಿಲ್ಲ.
ಅಧಿಕಾರಕ್ಕೆ ದುರ್ಬಳಕೆ
ಈ ದುರ್ಬಳಕೆ ಹಣವನ್ನು ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ಬಡವರು, ರೈತರು, ಮಹಿಳೆಯರು ಮತ್ತು ಯುವಜನರ ಬದುಕು ಕಟ್ಟಿಕೊಡುವ ಕೆಲಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡುತ್ತಿದ್ದರೆ ನಮ್ಮ ರಾಜ್ಯದ ಅನುಭವಿ ಮುಖ್ಯಮಂತ್ರಿ, ಜನರಿಗೆ ಕಾಯುವುದೇ ಕೈಲಾಸ ಎಂಬಂತೆ ಸತಾಯಿಸುತ್ತಿದ್ದಾರೆ.
ಒಂದೆಡೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 1,000 ದಿನ ಪೂರೈಸಿ ಹಾವೇರಿಯಲ್ಲಿ ಬೃಹತ್ ಸಂಭ್ರಮ ಆಚರಿಸುತ್ತಿದೆ, ಇನ್ನೊಂದೆಡೆ ರಾಜ್ಯದಲ್ಲಿ ಅರಾಜಕತೆ ಹಾಗೂ ಕುಡುಕರ ಸೃಷ್ಟಿಗೆ ಹೊರಟಿದ್ದಾರೆ.
ಜನರಿಗೆ ದ್ರೋಹ
ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗದು ಎಂಬ ಗಾದೆಯಂತೆ ಕಾಂಗ್ರೆಸ್ ಸರ್ಕಾರ ಜನರಿಗೆ ದ್ರೋಹ ಬಗೆಯುತ್ತಿದೆ.
ನೂರು ಸುಳ್ಳು ಹೇಳಿ ಮದುವೆ ಮಾಡು ಎಂಬ ಗಾದೆಯಂತೆ ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರು ಸಾವಿರ ಸುಳ್ಳು ಹೇಳಿ ರಾಜ್ಯದ ಜನರಿಗೆ, ಬಡವರು, ರೈತರು, ಮಹಿಳೆಯರು ಮತ್ತು ಯುವಜನತೆಗೆ ಅನ್ಯಾಯ ಎಸಗಿದ್ದಾರೆ.
ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ನಡೆಸುವ ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗಷ್ಟೇ ನ್ಯಾಯ ಕೊಟ್ಟು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ, ಒಕ್ಕಲಿಗರು, ವೀರಶೈವ/ಲಿಂಗಾಯತ ಸಮುದಾಯಕ್ಕೂ ಅನ್ಯಾಯ ಮಾಡಿದ್ದಾರೆ.
ಜಾತಿಗಣತಿ ವ್ಯರ್ಥ
ರಾಹುಲ್ ಗಾಂಧಿ ಆದೇಶ ಮಾಡಿದರೆಂಬ ಕಾರಣಕ್ಕೆ 170 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ನಡೆಸಿ, ವರದಿಯನ್ನು ತಿಪ್ಪೆಗೆಸೆದರು, ಈಗ ಎರಡನೇ ಬಾರಿ 450 ಕೋಟಿ ರೂ. ವೆಚ್ಚ ಮಾಡಿ ವ್ಯರ್ಥ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರವು ಕಳೆದ ಎರಡೂಮುಕ್ಕಾಲು ವರ್ಷದ ಆಡಳಿತದಲ್ಲಿ ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡು ಹಿಂದೂಗಳನ್ನು ಅಪಮಾನ ಮಾಡುತ್ತಿದೆ, ಯುವಜನತೆಗೂ ಅನ್ಯಾಯ ಮಾಡುತ್ತಿದೆ.
ಆರ್ಥಿಕ ಪರಿಸ್ಥಿತಿ ವಿಷಯದಲ್ಲಿ ರಾಜ್ಯವನ್ನು ದಿವಾಳಿ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ.
ಭರವಸೆ ಈಡೇರಿಸಿಲ್ಲ
೨೦೦೬ರಿಂದ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಸ್ಕೀಂ (ಒಪಿಎಸ್) ವಿಸ್ತರಿಸುವುದಾಗಿ ಹೇಳಿದ್ದರು, ಅದನ್ನೂ ಈಡೇರಿಸಿಲ್ಲ, ಅಂಗನವಾಡಿ ಕಾರ್ಯಕರ್ತರ ಗೌರವಧನ 15,000 ರೂ.ಗೆ ಏರಿಸುವುದಾಗಿ ಹೇಳಿದ್ದರು, ಆಶಾ ಕಾರ್ಯಕರ್ತೆಯರ ಗೌರವಧನವನ್ನೂ ಹೆಚ್ಚಿಸಿಲ್ಲ, ಬಿಸಿಯೂಟ ತಯಾರಕರ ಗೌರವಧನದ ಕುರಿತು ಚಕಾರ ಎತ್ತುತ್ತಿಲ್ಲ ಎಂದರು.
ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 1.50 ಲಕ್ಷ ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿದ್ದರು, ಮೈಸೂರು-ಮಂಗಳೂರು-ಹುಬ್ಬಳ್ಳಿಗಳಲ್ಲಿ ಟೆಕ್ಪಾರ್ಕ್ ನಿರ್ಮಾಣ ಆಗಿಲ್ಲ.
ಉಚಿತವಾಗಿ 10 ಕೆ.ಜಿ. ಅಕ್ಕಿ ಕೊಡುವ ಜಾಹೀರಾತು ನೀಡಿ, ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆ.ಜಿ.ಯನ್ನೂ ಸಮರ್ಪಕ ವಿತರಣೆ ಮಾಡುತ್ತಿಲ್ಲ ಎಂದರು.

