ಬೆಂಗಳೂರು:ಭ್ರಷ್ಟಾಚಾರ ತಡೆಯಲು ಸರ್ಕಾರಿ ನೇಮಕಾತಿ ಹಾಗೂ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದ್ದಾರೆ.
ಈಗಾಗಲೇ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೌನ್ಸಿಲಿಂಗ್ ಮೂಲಕವೇ ನೇಮಕಾತಿ ಮತ್ತು ವರ್ಗಾವಣೆ ನಡೆಯುತ್ತದೆ, ಇದನ್ನು ಇತರೆ ಇಲಾಖೆಗಳಿಗೂ ವಿಸ್ತರಿಸಲಾಗುವುದು.
ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ
ವರ್ಗಾವಣೆ ಆರಂಭವಾಗುತ್ತಿದ್ದಂತೆಯೇ ಎಲ್ಲಿಂದಲೋ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ, ನಮಗೆ ಯಾರು ಹತ್ತಿರ ಇರುತ್ತಾರೋ ಅಂತಹವರನ್ನು ಹಿಡಿದುಕೊಂಡು ಕೆಲಸ ಮಾಡಿಸಿಕೊಳ್ಳುತ್ತಾರೆ.
ಫಲಾನುಭವಿ ಮಧ್ಯವರ್ತಿಗಳೂ ಹಾಗೂ ಅಧಿಕಾರಿಗಳಿಗೆ ಹಣ ನಿಡಿ ವರ್ಗಾವಣೆ ಪಡೆಯುತ್ತಾರೆ, ಇಂತಹ ದಂಧೆಗೆ ಕಡಿವಾಣ ಹಾಕಲು ಕೌನ್ಸಿಲಿಂಗ್ ಒಂದೇ ಅಸ್ತ್ರವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಅಭಯ ಹಸ್ತ ಆರೋಗ್ಯ ಮತ್ತು ಆಹಾರ ಸುರಕ್ಷತೆ, ಔಷಧ ಆಡಳಿತದ ವೃಂದಗಳ ನೇಮಕಾತಿ ಆದೇಶಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದರು.
ನಿರುದ್ಯೋಗಿಗಳಿಗೆ ಉದ್ಯೋಗ
ಕೆಲವು ಸಮಸ್ಯೆಗಳಿಂದ ಈ ನೇಮಕಾತಿ ನಡೆದಿರಲಿಲ್ಲ, ಆ ಸಮಸ್ಯೆಗಳು ಬಗೆಹರಿದಿವೆ, ಇನ್ನು ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತೇವೆ ಎಂದರು.
ನೇಮಕಾತಿ ಇಲ್ಲವೇ ವರ್ಗಾವಣೆ ವಿಷಯದಲ್ಲಿ ಇನ್ನು ಮುಂದೆ ನೀವು ಯಾರಿಗೂ ಲಂಚ ನೀಡಬೇಡಿ, ಹೊಸ ಪದ್ಧತಿ ಭ್ರಷ್ಟಾಚಾರದಿಂದ ಮುಕ್ತವಾಗಿರುತ್ತದೆ ಎಂದರು.
ನಮ್ಮ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದೆ, ಸಮಾಜದ ಸ್ವಾಸ್ಥ್ಯ ಕಾಪಾಡುವ ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದೆ, ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡುತ್ತದೆ ಎಂದರು.
ಮಾನವೀಯತೆಯಿಂದ ಸೇವೆ
ವೈದ್ಯಕೀಯೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು, ಆರೋಗ್ಯ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಜಾತಿ-ಧರ್ಮಗಳ ಎಲ್ಲೆ ಮೀರಿ, ಮಾನವೀಯತೆಯಿಂದ ಸೇವೆ ಸಲ್ಲಿಸಬೇಕು.
ವೈದ್ಯಕೀಯ ಸೇವೆ ಕೇವಲ ವೃತ್ತಿಯಲ್ಲ, ಜೀವ ಉಳಿಸುವ ಜೊತೆಗೆ ರೋಗ ತಡೆಯುವ ಸಾರ್ಥಕ ಕಾರ್ಯವನ್ನೂ ಒಳಗೊಂಡಿದೆ.
ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಕಾರ್ಯಗತ ಮಾಡಿದೆ.
ರೋಗಿಗಳ ಚಿಕಿತ್ಸೆ ವೇಳೆ ರಕ್ತ ಪಡೆಯಲು ಯಾವುದೇ ಜಾತಿ-ಧರ್ಮ ಪರಿಗಣಿಸುವುದಿಲ್ಲ, ಗುಣಮುಖರಾದ ತಕ್ಷಣ ಪುನಃ ಅದೇ ಸುಳಿಗೆ ಬೀಳುತ್ತಾರೆ ಎಂದರು.

