ಬೆಂಗಳೂರು:ಅಧಿಕಾರ ಹಂಚಿಕೆ ಗೊಂದಲ ಬಗೆಹರಿಸುವಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಗೆ ಬರುವಂತೆ ಎಐಸಿಸಿ ಸಂದೇಶ ನೀಡಿದೆ.
ಈ ತಿಂಗಳ 12ರ ಗುರುವಾರದಂದು ದೆಹಲಿಗೆ ಬರುವಂತೆ ಪಕ್ಷದ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆಹ್ವಾನ ನೀಡಿದ್ದಾರೆ.
ದೆಹಲಿ ಬಿಡಾರ
ಕಳೆದ ಎರಡು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿದ್ದ ಶಿವಕುಮಾರ್ ಇಂದು ಬೆಳಗ್ಗೆಯಷ್ಟೇ ನಗರಕ್ಕೆ ಆಗಮಿಸಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೂಡಿ ಕಲಬುರಗಿಯಿಂದ ದೆಹಲಿಗೆ ತೆರಳಿದ್ದ ಶಿವಕುಮಾರ್, ಸೋಮವಾರ ಬೆಳಗ್ಗೆ ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ಮಾಡಿದ್ದರು.
ವೇಣುಗೋಪಾಲ್ ಭೇಟಿ ನಂತರ ಎಐಸಿಸಿ ಕಚೇರಿಯಲ್ಲಿ ಪಕ್ಷದ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಅವರ ಸಚಿವಾಲಯ, ಶಿವಕುಮಾರ್ ಅವರ ಸುದೀರ್ಘವಾದ ನಾಲ್ಕು ಪುಟಗಳ ವ್ಯಕ್ತಿ ಪರಿಚಯ ವಿವರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿತು.

ವ್ಯಕ್ತಿಪರಿಚಯ ಬಿಡುಗಡೆ
ಪಕ್ಷ ಮತ್ತು ಸರ್ಕಾರದಲ್ಲಿ ಇದುವರೆಗೆ ಶಿವಕುಮಾರ್ ಕಾರ್ಯನಿರ್ವಹಿಸಿದ ಹುದ್ದೆಗಳು ಮತ್ತು ರಾಜಕೀಯ ಪ್ರವೇಶ ಇತ್ಯಾದಿ ವಿವರಗಳನ್ನು ಚಿತ್ರಪಟಗಳ ಸಹಿತ ಬಿಡುಗಡೆ ಮಾಡಿದೆ.
ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ನಾಯಕತ್ವ ಗೊಂದಲ ಪರಿಹರಿಸುವುದಾಗಿ ವರಿಷ್ಠರು ನೀಡಿದ ಭರವಸೆ ಹಿನ್ನೆಲೆಯಲ್ಲೇ ವ್ಯಕ್ತಿ ಪರಿಚಯ ಬಿಡುಗಡೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಶಿವಕುಮಾರ್ ಬೆಂಬಲಿಗ ಶಾಸಕರು ಮಾರ್ಚ್ ಕೊನೆಯಲ್ಲೇ ನಮ್ಮವರಿಗೆ ಒಳ್ಳೆಯ ಸುದ್ದಿ ದೊರೆಯಲಿದೆ ಎಂದು ವಿಧಾನಸಭೆ ಮೊಗಸಾಲೆಯಲ್ಲಿ ಹೇಳಿಕೊಳ್ಳುತ್ತಿದ್ದುದು ಕಂಡುಬಂದಿತು.

ಸಂಜೆ ಔತಣಕೂಟ
ದೆಹಲಿಯಿಂದ ಹಿಂತಿರುಗಿದ ನಂತರ ನೇರವಾಗಿ ವಿಧಾನಸಭೆಗೆ ಆಗಮಿಸಿದ ಶಿವಕುಮಾರ್, ಸದನ ನಡೆಯುವ ಸಂದರ್ಭದಲ್ಲೇ ಪಕ್ಷದ ಎಲ್ಲಾ ಶಾಸಕರನ್ನು ಖುದ್ದಾಗಿ ಮಾತನಾಡಿಸಿ, ಸಂಜೆ ಔತಣಕೂಟಕ್ಕೆ ಆಹ್ವಾನ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ ಆರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪಕ್ಷದ ಸಚಿವರು ಮತ್ತು ಶಾಸಕರಿಗೆ ನಗರದ ಪಂಚತಾರಾ ಹೋಟೆಲೊಂದರಲ್ಲಿ ರಾತ್ರಿ ಔತಣಕೂಟ ಏರ್ಪಡಿಸಿದ್ದರು.

