ಬಾಗಲಕೋಟೆಯಲ್ಲಿ ಜಮೀರ್ ವಿರುದ್ಧ ’ಗೋ ಬ್ಯಾಕ್’ ಘೋಷಣೆ
ಬೆಂಗಳೂರು:ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಿಂದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ದೂರ ಇಡುವಂತೆ ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕ್ಷೇತ್ರಗಳಲ್ಲಿ ಸತತ 8 ದಿನ ಪ್ರಚಾರ ಕೈಗೊಳ್ಳಲಿದ್ದಾರೆ.
ಮಾರ್ಚ್ 30ರಿಂದ ಏಪ್ರಿಲ್ 7 ರವರೆಗೆ ಬಿಡುವಿಲ್ಲದೆ, ಈ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳುವ ಮುಖ್ಯಮಂತ್ರಿ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮೂರು ದಿನ ಹಾಗೂ ಬಾಗಲಕೋಟೆಯಲ್ಲಿ ಐದು ದಿನ ಪ್ರಚಾರ ನಡೆಸಲು ಕೆಪಿಸಿಸಿ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸಿದೆ.
ಮುಖ್ಯಮಂತ್ರಿ ಚುನಾವಣಾ ಸಾರಥ್ಯ
ಸರ್ಕಾರದ ವಿರುದ್ಧ ಜನ ವಿರೋಧಿ ಅಲೆ ಇದೆ, ಪಕ್ಷದ ಅಭ್ಯರ್ಥಿಗಳಿಗೆ ಗೆಲುವು ಕ್ಲಿಷ್ಟವಾಗಬಹುದು ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರೇ ಸ್ವತಃ ಚುನಾವಣಾ ಪ್ರಚಾರ ಸಾರಥ್ಯ ವಹಿಸಿಕೊಂಡಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ಹಿರಿಯ ನಾಯಕ ಸಾಧಿಕ್ ಪೈಲ್ವಾನ್ ನಾಮಪತ್ರ ನಿಗದಿತ ಸಮಯದೊಳಗೆ ಹಿಂದೆ ಪಡೆಯುವಲ್ಲಿ ಜಮೀರ್ ಕರ್ತವ್ಯ ನಿರ್ವಹಿಸಲಿಲ್ಲ ಎಂಬ ಕೋಪ ಮುಖ್ಯಮಂತ್ರಿ ಅವರಲ್ಲಿದೆ.
ಜಮೀರ್ ಅವರಿಗೆ ಇದರ ಹೊಣೆ ವಹಿಸಿಕೊಟ್ಟಿದ್ದರೂ, ನಾಮಪತ್ರ ಹಿಂಪಡೆಯುವ ದಿನದಂದು ದಾವಣಗೆರೆಗೆ ಭೇಟಿ ನೀಡದೆ, ಕೇರಳ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು.
ರಿಜ್ವಾನ್, ಸಲೀಂಗೆ ಹೊಣೆಗಾರಿಕೆ
ಈ ಮಾಹಿತಿ ತಿಳಿಯುತ್ತಿದ್ದಂತೆ ಕೊನೆ ಗಳಿಗೆಯಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮದ್ ಅವರುಗಳಿಗೆ ಹೊಣೆಗಾರಿಕೆ ವಹಿಸಲಾಯಿತು.
ಇವರು ದಾವಣಗೆರೆ ತಲುಪುವ ವೇಳೆಗೆ ನಾಮಪತ್ರ ಹಿಂಪಡೆಯುವ ಸಮಯ ಕೊನೆಗೊಂಡಿತ್ತು.
ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ವಿರೋಧದ ನಡುವೆಯೂ ಉಭಯ ಶಾಸಕರು, ಸಾಧಿಕ್ ಮನವೊಲಿಸಿ ನಗರಕ್ಕೆ ಕರೆತಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಿ, ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದರು.
ಸಿದ್ದರಾಮಯ್ಯ ಕೋಪ
ಜಮೀರ್ ಚಿತಾವಣೆಯಿಂದಲೇ ಸಾಧಿಕ್ ನಾಮಪತ್ರ ಹಿಂಪಡೆಯಲಿಲ್ಲ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಕೋಪಗೊಂಡಿದ್ದಲ್ಲದೆ, ಪಕ್ಷದ ಕಚೇರಿಯಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲೇ ಸಾಧಿಕ್ ಅವರಿಂದ ನಿವೃತ್ತಿ ಘೋಷಿಸುವ ಜೊತೆಗೆ ಸಲೀಂ ಹಾಗೂ ರಿಜ್ವಾನ್ ಅವರ ಪ್ರಯತ್ನದಿಂದಲೇ ಇದು ಸಾಧ್ಯವಾಯಿತು ಎಂಬ ಪ್ರಶಂಸೆ ವ್ಯಕ್ತಪಡಿಸಿದರು.
ಸಾಧಿಕ್ ಅವರನ್ನು ಪರಿಚಯಿಸುವ ಸಂದರ್ಭದಲ್ಲಿಯೂ ಜಮೀರ್ ಹೆಸರನ್ನೂ ಪ್ರಸ್ತಾಪಿಸಲಿಲ್ಲ, ಅಲ್ಲದೆ, ಅವರನ್ನು ದೂರವಿಟ್ಟು ಚುನಾವಣೆ ಗೆಲ್ಲೋಣ ಎಂಬುದಾಗಿ ಮುಖಂಡರಿಗೆ ಸಂದೇಶ ರವಾನಿಸಿದರು.
ಇದರ ಪರಿಣಾಮವಾಗಿ ಬಾಗಲಕೋಟೆ ಪ್ರಚಾರಕ್ಕೆ ತೆರಳಿದ್ದ ಜಮೀರ್ ವಿರುದ್ಧ ಅಲ್ಲಿನ ಅಲ್ಪಸಂಖ್ಯಾತ ಮುಖಂಡರುಗಳೇ ’ಗೋ ಬ್ಯಾಕ್’ ಘೋಷಣೆ ಕೂಗಿದ್ದಾರೆ.


