ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ
ಬೆಂಗಳೂರು:ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಗುರು ಮಂದಿರವನ್ನು ಲೋಕಾರ್ಪಣೆ ಮಾಡಲು ಒಂದು ದಿನದ ರಾಜ್ಯ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಖುದ್ದು ಬರಮಾಡಿಕೊಂಡರು.
ಇತ್ತೀಚಿನ ದಿನಗಳಲ್ಲಿ ಪ್ರಧಾನಿ ರಾಜ್ಯ ಪ್ರವಾಸ ಕೈಗೊಂಡರೆ ಮುಖ್ಯಮಂತ್ರಿ ದೂರ ಉಳಿಯುತ್ತಿದ್ದರು, ಆದರೆ, ಇಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಜೊತೆಗೂಡಿ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡಿದ್ದಲ್ಲದೆ, ರಾಜ್ಯಕ್ಕೆ ಸಂಬಂಧಿಸಿದ 18 ಬೇಡಿಕೆಗಳ ನಾಲ್ಕು ಪುಟಗಳ ಮನವಿಪತ್ರ ಸಲ್ಲಿಸಿದರು.
ಸಂಕ್ಷಿಪ್ತ ವಿವರ
ಮನವಿಪತ್ರ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲೇ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಕ್ಷಿಪ್ತವಾಗಿ ವಿವರಿಸಿದರು.
ಮನವಿ ಸ್ವೀಕರಿಸಿದ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಯಲ್ಲಿ ಪಿಸುಧನಿಯಲ್ಲಿ ಮಾತನಾಡಿದರು, ಇದಕ್ಕೆ ಪರಸ್ಪರ ಇಬ್ಬರೂ ನಕ್ಕು ಪ್ರತಿಕ್ರಿಯಿಸಿದರು.
ಎಚ್ಎಎಲ್ ವಿಮಾನ ನಿಲ್ದಾಣದಿಂದಲೇ ಪ್ರಧಾನಿ ಮೋದಿ ವಿಶೇಷ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಿದರು.
ಅಭಿವೃದ್ಧಿಯ ಪ್ರಮುಖ ಸ್ತಂಭ
ಮುಖ್ಯಮಂತ್ರಿ, ಪ್ರಧಾನಿ ಅವರಿಗೆ ಸಲ್ಲಿಸಿದ ಪತ್ರದಲ್ಲಿ ಕರ್ನಾಟಕ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಾವೀನ್ಯತೆಯ ಮನೋಭಾವದೊಂದಿಗೆ ರಾಷ್ಟ್ರೀಯ ಅಭಿವೃದ್ಧಿಯ ಪ್ರಮುಖ ಸ್ತಂಭವಾಗಿ ಮುಂದುವರೆದಿದೆ.
ಮಾಹಿತಿ ತಂತ್ರಜ್ಞಾನ, ಕೈಗಾರಿಕಾ ಉತ್ಪಾದನೆ, ಕೃಷಿ ಮತ್ತು ಸೇವಾ ವಲಯಗಳಲ್ಲಿ ರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದೆ.
ರಾಷ್ಟ್ರದ ಬೊಕ್ಕಸಕ್ಕೆ ಅತಿಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಕೆಲವು ದೀರ್ಘ ಕಾಲದ ಬಾಕಿ ಉಳಿದಿರುವ ಯೋಜನೆಗಳಿಗೆ ಕೇಂದ್ರ ಸರ್ಕಾರ ತುರ್ತು ಗಮನ ಹರಿಸಬೇಕೆಂದು ಕೋರಿದ್ದಾರೆ.
ಬಾಕಿ ಯೋಜನೆಗಳಿಗೆ ಅನುಮತಿ ನೀಡಿ
ನನೆಗುದಿಗೆ ಬಿದ್ದಿರುವ ರಾಜ್ಯದ ಯೋಜನೆಗಳಿಗೆ ಅನುಮತಿ ನೀಡುವುದರಿಂದ ಕರ್ನಾಟಕದ ಪ್ರಗತಿ ಮತ್ತಷ್ಟು ವೇಗಗೊಂಡು ರಾಷ್ಟ್ರದ ಬೊಕ್ಕಸಕ್ಕೆ ಹೆಚ್ಚು ಹಣ ಹರಿಯಲಿದೆ.
ಅನುಮೋದನೆಗಳು ಮತ್ತು ಹಣಕಾಸು ಬಿಡುಗಡೆಯಲ್ಲಿನ ವಿಳಂಬದಿಂದ ವ್ಯವಸ್ಥಿತ ಅಸಮಾನತೆ ಭಾವನೆ ಮೂಡಿಸಿದೆ.
ಈ ಸಮಸ್ಯೆಗಳನ್ನು ಪರಿಹರಿಸುವುದರಿಂದ ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಪೂರ್ತಿಯನ್ನು ಪುನರ್ ಉಚ್ಛರಿಸಿದಂತೆ ಆಗುತ್ತದೆ.
ಸಮಸ್ಯೆಗಳನ್ನು ಬಗೆಹರಿಸಿ
ಕೇಂದ್ರ ಸಮಸ್ಯೆಗಳನ್ನು ಬಗೆಹರಿಸಿದರೆ ರಾಷ್ಟ್ರದ ಅಭಿವೃದ್ಧಿಯ ಹಂಚಿಕೆಯ ದೃಷ್ಟಿಕೋನವನ್ನು ಬಲಪಡಿಸುತ್ತದೆ.
ನಮ್ಮ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಮ್ಮ ಸಹಕಾರವನ್ನು ಕರ್ನಾಟಕದ ಜನತೆ ಭರವಸೆ ಮತ್ತು ವಿಶ್ವಾಸದಿಂದ ಎದುರು ನೋಡುತ್ತಿದ್ದಾರೆ ಎಂದಿದ್ದಾರೆ.
ಮುಖ್ಯಮಂತ್ರಿ ಸಲ್ಲಿಸಿರುವ 18 ಬೇಡಿಕೆಗಳ ಪ್ರಸ್ತಾವದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ನಲ್ಲಿ ಬೆಂಗಳೂರು-ಮೈಸೂರು ವಿಭಾಗ ಒಳಗೊಂಡಿದೆ.
ಮೇಕೆದಾಟು ಯೋಜನೆ
ಬೆಂಗಳೂರು ಮತ್ತು ಸುತ್ತಮುತ್ತಲ ನಗರಗಳಿಗೆ ಕುಡಿಯುವ ನೀರಿನ ಅಗತ್ಯಕ್ಕಾಗಿ ಕೈಗೆತ್ತಿಕೊಳ್ಳುತ್ತಿರುವ ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿ.
ಕಾವೇರಿ-ಗೋದಾವರಿ ಹಾಗೂ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗಳಲ್ಲಿ ರಾಜ್ಯಕ್ಕೆ ಕನಿಷ್ಠ 40 ರಿಂದ 45 ಟಿಎಂಸಿ ನೀರು ಹಂಚಿಕೆ ಮಾಡಲು ಮನವಿ ಮಾಡಿದ್ದಾರೆ.
ರಾಜ್ಯ ಶಿಫಾರಸು ಮಾಡಿರುವ ಕೆಲವು ಹಿಂದುಳಿದ ಜಾತಿಗಳನ್ನು ಕೇಂದ್ರದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವಂತೆ ಹಾಗೂ ರಾಜ್ಯದ ಶೇ.56 ಮೀಸಲಾತಿ ನೀತಿಯನ್ನು ಸಂವಿಧಾನದ 9ನೇ ಪರಿಚ್ಛೇಧಕ್ಕೆ ಸೇರಿಸಲು ಕೋರಿದ್ದಾರೆ.
ರೈಲ್ವೆ ಕೋಚ್ ಫ್ಯಾಕ್ಟರಿ
ರಾಜ್ಯ ಸರ್ಕಾರ ಅಗತ್ಯ ಭೂಮಿ ನೀಡಿದ್ದರೂ ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ಇನ್ನೂ ಅನುಮತಿ ನೀಡಿಲ್ಲ.
ಬೆಂಗಳೂರು ಉಪನಗರ ರೈಲು ಯೋಜನೆಗೆ ಹಣ ಬಿಡುಗಡೆ ಹಾಗೂ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಸಂಪರ್ಕಿಸುವ ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್ ಆರಂಭಿಸಲು ಮನವಿ ಮಾಡಿದ್ದಾರೆ.
ಜಲಜೀವನ್ ಮಿಷನ್ ಯೋಜನೆಯಡಿ ಕೇಂದ್ರದಿಂದ 17,554 ಹಾಗೂ ಗ್ರಾಮ ಪಂಚಾಯತ್ಗಳ ಬಾಕಿ 2,860 ಕೋಟಿ ರೂ. ಅನುದಾನ ಬಿಡುಗಡೆಗೆ ಕೋರಿದ್ದಾರೆ.
ಪ್ರಮುಖ ಹೆದ್ದಾರಿ ಯೋಜನೆ
ಕಳೆದ 12 ವರ್ಷಗಳಿಂದ ಯಾವುದೇ ಪ್ರಮುಖ ಹೆದ್ದಾರಿ ಯೋಜನೆಗೆ ಮಂಜೂರಾತಿ ನೀಡಿಲ್ಲ ಎಂಬುದನ್ನು ಮನವರಿಕೆ ಮಾಡಿದ್ದಾರೆ.
15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ 5,495 ಕೋಟಿ ರೂ. ಬಿಡುಗಡೆ ಮಾಡಿ, ಬೆಂಗಳೂರು ನಗರ ಮೂಲಸೌಕರ್ಯ ಅಭಿವೃದ್ಧಿಗೆ 26,000 ಕೋಟಿ ರೂ. ವಿಶೇಷ ಅನುದಾನ ನೀಡಿ.
ಸಹಾಯಧನ ಬಿಡುಗಡೆ ಮಾಡಿ
ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಿ ಹಾಗೂ ಕೇಂದ್ರ ಪ್ರಕಟಿಸಿರುವಂತೆ 5,300 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡಿ.
ಕೃಷ್ಣ ಜಲ ವಿವಾದದ ನ್ಯಾಯಾಧಿಕರಣ ತೀರ್ಪನ್ನು ಗೆಜೆಟ್ನಲ್ಲಿ ಪ್ರಕಟಿಸುವುದೂ ಸೇರಿದಂತೆ 18 ಯೋಜನೆಗಳಿಗೆ ಅನಮೋದನೆ ನೀಡುವಂತೆ ಮುಖ್ಯಮಂತ್ರಿ ಮನವಿ ಪತ್ರದಲ್ಲಿ ಕೋರಿದ್ದಾರೆ.


