ಬೆಂಗಳೂರು:ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂಬ ಆರೋಪದಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಮಂಗಳವಾರ ರಾತ್ರಿ ತಮ್ಮ ಕಾವೇರಿ ನಿವಾಸಕ್ಕೆ ಜಮೀರ್ ಅವರನ್ನು ಕರೆಸಿಕೊಂಡ ಮುಖ್ಯಮಂತ್ರಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೀರಿ ಎಂಬ ದೂರಿನ ಹಿನ್ನೆಲೆಯಲ್ಲಿ ನಿಮ್ಮನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಎಐಸಿಸಿಯಿಂದ ನನಗೆ ಸೂಚನೆ ಬಂದಿದೆ.
ಎಐಸಿಸಿ ಆದೇಶ ಪಾಲನೆ ಮಾಡಬೇಕು
ಎಐಸಿಸಿ ಆದೇಶವನ್ನು ನಾನು ಪಾಲನೆ ಮಾಡಬೇಕು, ಈಗಾಗಲೇ ಕಾರ್ಯದರ್ಶಿ ಸ್ಥಾನದ ಕರ್ತವ್ಯದಿಂದ ನಸೀರ್ ಅವರನ್ನು ಮುಕ್ತಗೊಳಿಸಲಾಗಿದೆ.
ರಾಜೀನಾಮೆ ನೀಡಲು ಎರಡು ದಿನ ಕಾಲಾವಕಾಶ ನೀಡುತ್ತೇನೆ, ಅಷ್ಟರಲ್ಲಿ ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ, ಅಥವಾ ಸಂಪರ್ಕಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ ಎಂಬುದಾಗಿ ಮನವರಿಕೆ ಮಾಡಿ, ಅವರು ಏನು ಹೇಳುವರೋ ನೋಡೋಣ ಎಂದಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ನೀವು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಹಾಗೂ ಎಸ್ಡಿಪಿಐ ಅಭ್ಯರ್ಥಿಯನ್ನು ಬೆಂಬಲಿಸಿದ್ದೀರಿ ಎಂಬುದಕ್ಕೆ ದಾಖಲೆ ಸಹಿತ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಗೆ ವರದಿ
ಇವರ ದೂರು ಆಧರಿಸಿ ಸುರ್ಜೇವಾಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಿದ್ದಾರೆ.
ರಾಜ್ಯ ಉಸ್ತುವಾರಿ ಅವರ ವರದಿ ಆಧಾರದ ಮೇಲೆ ನನ್ನನ್ನು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಂಪರ್ಕಿಸಿ ನಿಮ್ಮನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅವರನ್ನು ಕರ್ತವ್ಯ ಮುಕ್ತಗೊಳಿಸಿ, ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಆದೇಶ ಮಾಡಿದ್ದಾರೆ.
ಪಕ್ಷದ ಆದೇಶವನ್ನು ನಾನು ಪಾಲನೆ ಮಾಡಬೇಕು, ಈಗಾಗಲೇ ಇಬ್ಬರ ಮೇಲೆ ಕ್ರಮ ಕೈಗೊಳ್ಳಲಾಗಿದೆ, ನಿಮಗೆ ಎರಡು ದಿನ ಅವಕಾಶ ಕೊಡುತ್ತೇನೆ, ಅಷ್ಟರಲ್ಲಿ ವರಿಷ್ಠರ ಮನವೊಲಿಸಿಕೊಳ್ಳಿ ಎಂಬ ಸಲಹೆ ನೀಡಿ ಕಳುಹಿಸಿದ್ದಾರೆ.
ಮೋಜು-ಮಸ್ತಿಗೆ ಹೋಗಿರಲಿಲ್ಲ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮದ್ ಖಾನ್, ತಮ್ಮ ವಿರುದ್ಧ ಕೇಳಿ ಬಂದಿರುವ ಪಕ್ಷ ವಿರೋಧಿ ಚಟುವಟಿಕೆ ಆರೋಪಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೇರಳಕ್ಕೆ ತಾವು ಮೋಜು-ಮಸ್ತಿ ಮಾಡಲು ಹೋಗಿರಲಿಲ್ಲ, ಪಕ್ಷದ ಕೆಲಸಕ್ಕಾಗಿಯೇ ಅಲ್ಲಿಗೆ ಹೋಗಿದ್ದೆ ಎಂದರು.
ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪ್ರವಾಸಕ್ಕೆ ಹೋಗಿದ್ದರೆ ಅದು ತಪ್ಪು, ಕೇರಳಕ್ಕೆ ಕಳ್ಳಾಟ ಆಡಲು, ಮೋಜು ಮಸ್ತಿ ಮಾಡಲು ಹೋಗಿರಲಿಲ್ಲ, ನಾನು ಪಕ್ಷದ ಸೂಚನೆ ಮೇರೆಗೆ ಅಲ್ಲಿಗೆ ಹೋಗಿದ್ದೆ, ಅಲ್ಲಿ ಹಗಲು-ರಾತ್ರಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ.
ಕೇರಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದೇನೆ, ದಿನಕ್ಕೆ 350 ರಿಂದ 400 ಕಿಲೋಮೀಟರ್ ಪ್ರವಾಸ ಮಾಡಿದ್ದೇನೆ, ಹೀಗಿದ್ದರೂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ, ಮುಂದಿನ ಟಾರ್ಗೆಟ್ ನಾನೇ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ ಏಕೆ ಈ ರೀತಿ ಎಂದು ಪ್ರಶ್ನಿಸಿದರು.
ನನ್ನನ್ನು ಏಕೆ ಟಾರ್ಗೆಟ್ ಮಾಡುತ್ತಾರೆ
ನನ್ನನ್ನು ಟಾರ್ಗೆಟ್ ಯಾರು ಮಾಡಬೇಕು, ಮಾಡಿದರೆ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಬೇಕು, ಅವರು ಏಕೆ ಮಾಡುತ್ತಾರೆ, ನಿನ್ನೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ, ನಾಳೆ ಉಪಮುಖ್ಯಮಂತ್ರಿ ಭೇಟಿ ಮಾಡುತ್ತೇನೆ, ಏನಾದರೂ ಹೇಳಿದರೆ, ಅವರು ಹೇಳಬೇಕು, ಬೇರೆ ಯಾರ ಮಾತಿಗೂ ಅರ್ಥ ಇಲ್ಲ ಎಂದರು.
ನಸೀರ್ ಅಹ್ಮದ್ ಪಕ್ಷದಲ್ಲಿ ತುಂಬಾ ಹಿರಿಯರು, ನಮ್ಮ ಸಮುದಾಯದ ನಾಯಕರು, ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಿದ್ದು ನನಗೂ ಬೇಸರ ತಂದಿದೆ, ಅವರಿಗೂ ನೋವಾಗಿದೆ, ಹೀಗಾಗಿ ಅವರನ್ನು ಭೇಟಿ ಮಾಡಿ ಸಮಾಧಾನ ಮಾಡಿದ್ದೇನೆ, ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ, ನಾನು ನಾಯಕ ಅಲ್ಲ, ಪಕ್ಷದ ಸೇವಕ, ಬಹಳ ಚಿಕ್ಕವನು ಎಂದರು.


