ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸವಾಲಾಗಿರುವ ದಲಿತರಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಮಹತ್ವದ ತೀರ್ಮಾನ ಕೈಗೊಳ್ಳಲು ಏಪ್ರಿಲ್ 24ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.
ಮೀಸಲಾತಿ ಪ್ರಮಾಣ ಶೇಕಡ 50 ಮೀರದಂತೆ, ಅದರ ವ್ಯಾಪ್ತಿಯೊಳಗೆ ದಲಿತರಿಗೆ ಒಳ ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಿದೆ.
ಎಡಗೈ ಗುಂಪು ಪಟ್ಟು
ಎಡಗೈ ಗುಂಪು ತಮಗೆ ಶೇಕಡ 6ರಷ್ಟು ಒಳಮೀಸಲಾತಿ ಕಲ್ಪಿಸಬೇಕೆಂಬ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಒಳಗೊಂಡಂತೆ ತಜ್ಞರ ತಂಡ ರಚಿಸಲಾಗಿತ್ತು.
ಈ ತಂಡದ ವರದಿ ಆಧಾರವಾಗಿ ಇಟ್ಟುಕೊಂಡು ಎಡಗೈ-ಬಲಗೈ ಸೇರಿದಂತೆ ದಲಿತ ಸಮುದಾಯದ 101 ಉಪಜಾತಿಗಳಿಗೆ ಶೇಕಡಾ 15 ಮೀಸಲಾತಿಯಲ್ಲೇ ಹಂಚಿಕೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದರನ್ವಯ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ತಲಾ ಶೇ.5.29, ಬೋವಿ, ಲಂಬಾಣಿ, ಕೊರವ, ಕೊರಮ ಸಮಾಜದವರಿಗೆ ಶೇ.4.42 ಮೀಸಲಾತಿ ನಿಗದಿಪಡಿಸಿದೆ.
ವರದಿ ಆಧಾರಿಸಿ ಅನುಷ್ಟಾನ
ವರದಿ ಆಧಾರದ ಮೇಲೆ ವಿಶೇಷ ಸಂಪುಟಯಲ್ಲಿ ಸಭೆ ಚರ್ಚೆ ನಡೆಸಿ ಅನುಷ್ಟಾನಕ್ಕೆ ತರಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂಬುದಾಗಿ ಯುನಜನರು ಪ್ರತಿಭಟನೆ ನಡೆಸಿದ ವೇಳೆ, 56,432 ಹುದ್ದೆಗಳನ್ನು ಮೊದಲ ಹಂತದಲ್ಲಿ ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು.
ಒಳ ಮೀಸಲಾತಿ ಸಮಸ್ಯೆ ಬಗೆಹರಿಯದೆ ನೇಮಕಾತಿ ಹಾಗೂ ಬಡ್ತಿ ಹಾಗೆಯೇ ಉಳಿದಿತ್ತು.
ಉಪಚುನಾವಣೆ ಹಿನ್ನೆಲೆ ಮುಂದೂಡಿಕೆ
ಕಳೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಸಂಬಂಧ ಸುದೀರ್ಘ ಚರ್ಚೆ ನಡೆಸಲಾಯಿತಾದರೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.
ಅಂದಿನ ಸಭೆಯಲ್ಲಿ ಎಡಗೈ ಸಮುದಾಯಕ್ಕೆ ಸೇರಿದ ಸಚಿವ ಮುನಿಯಪ್ಪ, ಸರ್ಕಾರ ಮೊದಲು ಒಳ ಮೀಸಳಾತಿ ಬಗ್ಗೆ ನಿರ್ಧರಿಸಲಿ, ನಮ್ಮ ಸಮುದಾಯಕ್ಕೆ ಎಷ್ಟು ಮೀಸಲಾತಿ ನೀಡುವಿರೋ ಅಷ್ಟು ನಿಗದಿಪಡಿಸಿ ಆದೇಶ ಮಾಡಿ.
ಈ ಸಮಸ್ಯೆ ಬಗೆಹರಿಯದೆ ನೇಮಕಾತಿ ಮತ್ತು ಬಡ್ತಿ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತಿಲ್ಲ, ಎಲ್ಲದಕ್ಕೂ ಮಿಗಿಲಾಗಿ ನಮ್ಮ ಸಮುದಾಯದವರು, ತೀರ್ಮಾನ ಕೈಗೊಳ್ಳಲಾಗದಿದ್ದರೆ, ಸರ್ಕಾರದಿಂದ ಹೊರಬನ್ನಿ ಎಂಬ ಪಟ್ಟು ಹಿಡಿದಿದ್ದಾರೆ.
ನಿರ್ಧಾರದ ಭರವಸೆ
ಮುಖ್ಯಮಂತ್ರಿ ಅವರು, ತಕ್ಷಣ ಒಂದು ತೀರ್ಮಾನ ಕೈಗೊಂಡು ಸರ್ಕಾರದ ನಿಲುವು ಪ್ರಕಟಿಸಬೇಕು ಎಂಬುದಾಗಿ ಸಭೆಯಲ್ಲಿ ಆಗ್ರಹಿಸಿದಾಗ, ಉಪಚುನಾವಣೆ ನಂತರ ವಿಶೇಷ ಸಂಪುಟ ಸಭೆ ಕರೆದು ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ದಲಿತರಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸಲಾಗಿತ್ತು, ಮೀಸಲಾತಿಯನ್ನು ಶೇಕಡ 56ಕ್ಕೆ ಹೆಚ್ಚಿಸಿ ದಲಿತರಿಗೆ ಶೇ.17ರಷ್ಟು ಕಲ್ಪಿಸುವಂತೆ ಶಿಫಾರಸು ಮಾಡಿತ್ತು.
ಮೀಸಲಾತಿ ಪ್ರಮಾಣ ಶೇ.50 ಮೀರದಂತೆ ತೀರ್ಮಾನ ಕೈಗೊಳ್ಳಬೇಕು ಎಂಬ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಕಸರತ್ತು ನಡೆಸಿದೆ.


