ಬಿಡದಿ ಟೌನ್ಶಿಪ್ ಯೋಜನೆ ತಾತ್ಕಾಲಿಕ ಮುಂದೂಡಿಕೆ ಘೋಷಣೆ
ಬೆಂಗಳೂರು:ರೈತರ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡದಿ ಟೌನ್ಶಿಪ್ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ಬಿಡದಿ ರೈತರ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಿಧಾಸೌಧದ ಬಳಿ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ ಬೆನ್ನಲ್ಲೇ ತುರ್ತು ಪತ್ರಿಕಾಗೋಷ್ಠಿ ಕರೆದು ಸರ್ಕಾರದ ನಿರ್ಧಾರ ಪ್ರಕಟಿಸಿದರು.
ಬಲವಂತವಾಗಿ ಭೂಮಿ ಪಡೆಯುವುದಿಲ್ಲ
ಟೌನ್ಶಿಪ್ ಯೋಜನೆಗೆ ಬಲವಂತವಾಗಿ ಯಾವ ರೈತರಿಂದಲೂ ಭೂಮಿ ಪಡೆಯುವುದಿಲ್ಲ, ಸ್ವಿಇಚ್ಛೆಯಿಂದ ಭೂಮಿ ನೀಡಿದರೆ ಮಾತ್ರ ಪಡೆಯಲಾಗುವುದು ಎಂದರು.
ನನಗೆ ಈ ಯೋಜನೆಯ ಅಗತ್ಯವಿಲ್ಲ, ಇದು ನನ್ನ ಕನಸೂ ಅಲ್ಲ, ನನಗೆ ಇದರಿಂದ ಏನೂ ಆಗಬೇಕಿಲ್ಲ.
ಯೋಜನೆ ಪಿತಾಮಹಾ ಕುಮಾರಸ್ವಾಮಿ, ಅವರು ಮತ್ತು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಹೊರಟಿದ್ದ ನವನಗರ ನಿರ್ಮಾಣದ ಕನಸನ್ನು ನಾನು ಮುಂದುವರೆಸಲು ಹೋಗಿದ್ದೇನೆಯೇ ಹೊರತು, ಇದು ನನ್ನ ಕನಸಿನ ಯೋಜನೆಯಲ್ಲ.
ಯಾರೂ ಸತ್ಯಾಗ್ರಹ ಮಾಡಬೇಕಿಲ್ಲ
ಯಾವ ನಾಯಕರೂ ಸತ್ಯಾಗ್ರಹ ಮಾಡುವುದು ಬೇಕಾಗಿಲ್ಲ, ರೈತ ಮಹಿಳೆಯರು ಅಧಿಕಾರಿಗಳ ಮೇಲೆ ತೋರಿದ ಆಕ್ರೋಶವನ್ನು ಕಂಡಿದ್ದೇನೆ, ಇದೆಲ್ಲ ಗಮನದಲ್ಲಿ ಇಟ್ಟುಕೊಂಡು ಒಂದು ಉನ್ನತಮಟ್ಟದ ಸಮಿತಿ ರಚಿಸುತ್ತಿದ್ದೇನೆ.
ನಿವೃತ್ತ ನ್ಯಾಯಾಧೀಶರೋ, ಶಾಸಕರೋ ಇಲ್ಲವೇ ಅಧಿಕಾರಿಗಳ ಮಟ್ಟದ ಸಮಿತಿಯೋ ಎಂಬುದನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಎರಡು-ಮೂರು ತಿಂಗಳಲ್ಲಿ ರಚಿಸಲಾಗುವುದು.
ಸಮಿತಿ ನೀಡುವ ವರದಿ ಆಧರಿಸಿ ಸರ್ಕಾರ ಮುಂದಿನ ತೀಮಾನ ಕೈಗೊಳ್ಳಲಿದೆ, ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಘೋಷಿಸಿದರು.
ವಿಟ್ಲೇನಹಳ್ಳಿ ಗೋಲಿಬಾರ್ ಸ್ಮರಣೆ
ಚನ್ನಪಟ್ಟಣದಲ್ಲಿ ನಡೆದ ವಿಟ್ಲೇನಹಳ್ಳಿ ಗೋಲಿಬಾರ್ ಪ್ರಕರಣವನ್ನು ಸ್ಮರಿಸಿದ ಶಿವಕುಮಾರ್, ಅಂತಹ ಘಟನೆ ಮರುಕಳಿಸಲು ಅವಕಾಶ ನೀಡುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು.
ಯೋಜನೆಗೆ ಜಮೀನು ಕೊಡಲು ಇಷ್ಟವಿಲ್ಲದವರು ಕೃಷಿ ಮುಂದುವರೆಸಬಹುದು, ಇಷ್ಟ ಇದ್ದವರು ಸರ್ಕಾರಕ್ಕೆ ಜಮೀನು ಕೊಡಬಹುದು, ಬಲವಂತವಾಗಿ ಒಂದು ಗುಂಟೆ ಜಮೀನನ್ನೂ ಪಡೆಯುವುದಿಲ್ಲ.
ಬಿಡದಿ ಘಟನೆ ಮನಸ್ಸಿಗೆ ನೋವಾಗಿದೆ, ರಾಜಕೀಯ ಪ್ರೇರಿತ ಕುಮ್ಮಕ್ಕಿನಿಂದ ಅಧಿಕಾರಿಗಳಿಗೆ ತೊಂದರೆ ನೀಡಿದ್ದಾರೆ, ರೈತರನ್ನು ತಪ್ಪು ದಾರಿಗೆ ಎಳೆಯುವ ಸಂಚು ನಡೆಯುತ್ತಿದೆ, ಎಲ್ಲರ ಮನಸ್ಸಿಗೆ ನೋವುಂಟು ಮಾಡುವುದು ನನಗೆ ಇಷ್ಟವಿಲ್ಲ.
ರಾಜ್ಯದ ಅಭಿವೃದ್ಧಿ ವಾಗ್ದಾನ
ಮತದಾರರು ನನಗೆ ಪೆನ್ನು, ಪೇಪರ್ ನೀಡಿದ್ದಾರೆ, ಅದನ್ನು ನನ್ನ ಸ್ವಂತಕ್ಕೆ ಬಳಕೆ ಮಾಡಿಕೊಳ್ಳದೆ, ರಾಜ್ಯದ ಅಭಿವೃದ್ಧಿಗೆ ಉಪಯೋಗಿಸುತ್ತೇನೆ ಎಂದು ವಾಗ್ದಾನ ಮಾಡಿದರು.
ನಾನು ಹುಟ್ಟಾ ರೈತನ ಮಗ, ಅವರ ಶ್ರಮಿದ ಬಗ್ಗೆ ನನಗೆ ವೈಯಕ್ತಿಕ ಅನುಭವವಿದೆ, ನಾನು ಮುಖ್ಯಮಂತ್ರಿ ಅಗಿರುವುದು ಕೆಲವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ, ಅವರಿಗೆ ನಿದ್ರೆ ಬರುತ್ತಿಲ್ಲ, ನನ್ನನ್ನು ಜೈಲಿಗೆ ಕಳುಹಿಸಲು ಎಷ್ಟು ವರ್ಷದಿಂದ ಸಂಚು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ.
ಶಿವಕುಮಾರ್ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ ಎಂದು ಕುಮಾರಣ್ಣ ಇಂದೂ ಹೇಳಿದ್ದಾರೆ, ಅವರಿಗೆ ಒಳ್ಳೆಯದಾಗಲಿ, ನನಗೆ ಜೈಲು ಹೊಸದೇನಲ್ಲ.
ಜಮೀನು ಬೆಲೆ ಎಲ್ಲರಿಗೂ ಗೊತ್ತು
ಬೆಂಗಳೂರಿನ ಸುತ್ತಮುತ್ತ ಹಲವು ಸಾವಿರ ಎಕರೆ ಜಮೀನು ವಿವಿಧ ಯೋಜನೆಗಳಿಗೆ ಸ್ವಾಧೀನ ಆಗಿದೆ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಾವಿರಾರು ಎಕರೆ ಸ್ವಾಧೀನ ಮಾಡಲಾಗಿದೆ, ಈ ಜಮೀನುಗಳ ಬೆಲೆ ಏನೆಂದು ಎಲ್ಲರಿಗೂ ಗೊತ್ತು.
2006ರಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಐದು ಉಪನಗರಗಳ ಸಮಗ್ರ ಅಭಿವೃದ್ಧಿ ಯೋಜನೆಗೆ ತೀರ್ಮಾನಿಸಿದ್ದರು, ಅಲ್ಲಿಂದಲೇ ಇದೆಲ್ಲಾ ಆರಂಭವಾಯಿತು.
ನಂತರ ಬಿಎಂಆರ್ಡಿ ವತಿಯಿಂದ ಪಿಪಿಪಿ ಮಾದರಿಯಲ್ಲಿ ಸಮಗ್ರ ಉಪನಗರ ಅಭಿವೃದ್ಧಿಗೆ ಅಧಿಕೃತ ಪಾಲುದಾರರ ಗುರುತಿಸಲು ಜಾಗತಿಕ ಟೆಂಡರ್ಗೆ ತೀರ್ಮಾನ ಕೈಗೊಂಡಿದ್ದರು.
ರೆಡ್ ಝೋನ್ ಗುರುತಿಸಿದ್ದು ಯಾರು
ಅಂದು ಕುಮಾರಸ್ವಾಮಿ, ಈ ಎಲ್ಲಾ ಖಾಸಗಿ ಜಮೀನಿನಲ್ಲಿ, ಯಾವುದೇ ಪ್ರಾಧಿಕಾರವಾಗಲಿ, ವ್ಯಕ್ತಿಯಾಗಲಿ, ಬಿಡಿಎ ವತಿಯಿಂದ ಪೂರ್ವಾನುಮತಿ ಪಡೆಯದೆ ಅಭಿವೃದ್ಧಿಗೆ ಅನುಮತಿ ನೀಡತಕ್ಕದಲ್ಲ ಎಂಬುದಾಗಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ, ರೆಡ್ ಝೋನ್ ಆಗಿ ಗುರುತಿಸಿದ್ದರು ಎಂದು ಶಿವಕುಮಾರ್ ದಾಖಲೆಗಳನ್ನು ಪ್ರದರ್ಶಿಸಿದರು.
ಇಷ್ಟಲ್ಲದೆ, ಗ್ರಾಮಠಾಣಾದಡಿ ಬರುವ ಆಸ್ತಿ, ಮನೆಗಳು ಸೇರಿದಂತೆ ಎಲ್ಲರನ್ನೂ ಒಕ್ಕಲೆಬ್ಬಿಸಲು ಪರಿಹಾರ ಮೊತ್ತ ಘೋಷಿಸಿ ಆದೇಶ ಹೊರಡಿಸಿದ್ದರು.
ಖಾಸಗಿ ಡೆವಲಪರ್ ಡಿಎಲ್ಎಫ್ಗೆ ಪತ್ರ ಬರೆದು 400 ಕೋಟಿ ರೂ. ಭದ್ರತಾ ಠೇವಣಿ ಕಟ್ಟಿಸಿಕೊಂಡು ರಿಯಲ್ ಎಸ್ಟೇಟ್ಗೆ ಅವಕಾಶ ಕೊಟ್ಟಿದ್ದರು.
ರಿಯಲ್ ಎಸ್ಟೇಟ್ ದಂಧೆ ಯಾರದ್ದು
ಈಗ ಹೇಳಿ ಕುಮಾರಣ್ಣಾ, ರಿಯಲ್ ಎಸ್ಟೇಟ್ ದಂಧೆ ಯಾರು ಮಾಡಿದ್ದು, ನಾನು ಮಾಡಿದ್ದಾ ಎಂದು ಪ್ರಶ್ನಿಸಿದರು.
2010ರಲ್ಲಿ ಯಡಿಯೂರಪ್ಪ ಸಮಗ್ರ ಉಪನಗರ ಯೋಜನೆ ಮುಂದುವರೆಸಲು ಎರಡನೇ ಬಾರಿ ಜಾಗತಿಕ ಟೆಂಡರ್ ಕರೆದು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಕ್ಕೆ ಮುಂದಾದರು, ಆಗ ಆರ್.ಅಶೋಕ್ ಸಚಿವರಾಗಿದ್ದರು.
ರೈತರ ಆಸ್ತಿ ಕಬಳಿಸಲು ನೀವು ನಡೆಸಿರುವ ಸಂಚನ್ನು ಎಷ್ಟು ದಿನ ಮುಚ್ಚಿಕೊಳ್ಳಲು ನಿಮಗೆ ಸಾಧ್ಯವಿದೆ ಎಂದು ಪ್ರಶ್ನಿಸಿದರು.


