ನವದೆಹಲಿ:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಮಂತ್ರಿಮಂಡಲ ವಿಸ್ತರಿಸಲು ಅನುಮತಿ ನೀಡಿರುವ ಕಾಂಗ್ರೆಸ್ ವರಿಷ್ಠರು ಯಾರನ್ನು ಸೇರಿಸಿಕೊಳ್ಳಬೇಕೆಂಬ ಸಂಭಾವ್ಯ ಸಚಿವರ ಪಟ್ಟಿಯನ್ನು ನಂತರ ರವಾನಿಸಲಿದ್ದಾರೆ.
ವರಿಷ್ಠರ ಅನುಮತಿ ದೊರೆತಿರುವ ಬೆನ್ನಲ್ಲೇ ಮುಖ್ಯಮಂತ್ರಿ, ಜುಲೈ 20 ಇಲ್ಲವೇ 22ರಂದು ಮಂತ್ರಿಮಂಡಲ ವಿಸ್ತರಿಸಿ 16ರಿಂದ 18 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.
ಸೋನಿಯಾ ನಿವಾಸದಲ್ಲಿ ಚರ್ಚೆ
ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಲು ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಬುಲಾವ್ ಮಾಡಿದ್ದ ವರಿಷ್ಠರು, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದಲ್ಲಿ ಇಂದು ವಿವಿಧ ಹಂತಗಳಲ್ಲಿ ಸುದೀರ್ಘ ಚರ್ಚೆ ನಡೆಸಿ, ವಿಸ್ತರಣೆ ಕಾರ್ಯಕ್ಕೆ ಹಸಿರು ನಿಶಾನೆ ತೋರಿದ್ದಾರೆ.
ದೆಹಲಿಗೆ ತೆರಳಿದ್ದ ಮೂವರು ನಾಯಕರು ತಮ್ಮದೇ ಅಭಿಪ್ರಾಯ ಹಾಗೂ ಬೆಂಬಲಿತ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದರು.
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಭೇಟಿಗೂ ಮುನ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಿವಾಸದಲ್ಲಿ ಪ್ರತ್ಯೇಕ ಭೇಟಿ ಮಾಡಿದ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು.
ರಾಹುಲ್ ಜೊತೆಗೂ ಮಾತುಕತೆ
ನಂತರ ಮಧ್ಯಾನ್ಹ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿದ ಮೂವರೂ ನಾಯಕರು ಸಂಪುಟ ವಿಸ್ತರಣೆ ಮತ್ತು ಇತರ ರಾಜಕೀಯ ನೇಮಕಾತಿ ಕುರಿತಂತೆ ಮೂರು ತಾಸಿಗೂ ಹೆಚ್ಚು ಕಾಲ ರಾಹುಲ್ ಜೊತೆ ಚರ್ಚೆ ಮಾಡಿದರು.
ಸಭೆ ಆರಂಭದಲ್ಲೇ ರಾಹುಲ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹಾಗೂ ಸರ್ಕಾರದ ವರ್ಚಸ್ಸು ಹೆಚ್ಚಿಸುವ ವ್ಯಕ್ತಿಗಳಿಗೆ ಸಂಪುಟದಲ್ಲಿ ಅವಕಾಶ ನೀಡಿ ಎಂದು ರಾಜ್ಯ ನಾಯಕರುಗಳಿಗೆ ಕಟ್ಟಾದೇಶ ಮಾಡಿದರು.
ಒತ್ತಡ ಹಾಗೂ ಕಟ್ಟುಪಾಡುಗಳಿಗೆ ಮಣಿಯದೆ ಯುವ ಸಮುದಾಯಕ್ಕೆ ಅವಕಾಶ ನೀಡಿ, ಜನರ ಸೇವೆ ಮತ್ತು ಪಕ್ಷ ಸಂಘಟನೆಗೆ ಬಳಸಿಕೊಳ್ಳಿ.
ವಿಭಿನ್ನ ಸ್ವರಗಳು ಬೇಡ
ಸಂಪುಟಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ವಿಭಿನ್ನ ಸ್ವರಗಳು ಬೇಡ, ಒಳ್ಳೆಯ ಆಡಳಿತ ನೀಡುವುದಷ್ಟೇ ನಮ್ಮ ಗುರಿಯಾಗಿರಬೇಕು, ಈ ದಿಸೆಯಲ್ಲಿ ಮಂತ್ರಿಮಂಡಲ ವಿಸ್ತರಿಸಿ ಎಂದು ಸೂಚಿಸಿದರು.
ಸಂಪುಟ ವಿಸ್ತರಣೆ, ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ, ವಿಧಾನಮಂಡಲದ ಪೀಠಾಸೀನ ಅಧಿಕಾರಿಗಳ ಆಯ್ಕೆ, ವಿಧಾನ ಪರಿಷತ್ಗೆ ಐವರು ಸದಸ್ಯರ ನಾಮಕರಣ ಸಂಬಂಧ ಸುದೀರ್ಘ ಚರ್ಚೆ ನಡೆಸಿದರು.
ಸಭೆಯಲ್ಲಿ ರಾಜ್ಯ ನಾಯಕರಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲ ಪಾಲ್ಗೊಂಡಿದ್ದರು.
ನಗರಕ್ಕೆ ಖರ್ಗೆ ವಾಪಸ್
ಪುತ್ರನ ಆರೋಗ್ಯ ಏರುಪೇರು ಮಾಹಿತಿ ಹಿನ್ನೆಲೆಯಲ್ಲಿ ಖರ್ಗೆ ಸಭೆ ಮಧ್ಯೆಯೇ ಹೊರಟು ನಗರಕ್ಕೆ ಹಿಂತಿರುಗಿದರು.
ರಾಹುಲ್ ಸಮ್ಮುಖದಲ್ಲೇ ಸಂಭಾವ್ಯ ಸಚಿವರ ಪಟ್ಟಿ ಸಿದ್ಧಗೊಂಡಿದೆ, ಅಲ್ಲದೆ, ನಿಗಮ-ಮಂಡಳಿಗೆ ಹಿರಿಯ ಶಾಸಕರ ನೇಮಕಾತಿ, ಪರಿಷತ್ ಸದಸ್ಯರ ನಾಮಕರಣ ಸದಸ್ಯರ ಆಯ್ಕೆ ಅಂತಿಮಗೊಂಡಿದೆ.
ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ
ಸಂಪುಟ ವಿಸ್ತರಣೆವರೆಗೂ ಸಂಭಾವ್ಯ ಸಚಿವರ ಪಟ್ಟಿ ಗೌಪ್ಯವಾಗಿಡುವಂತೆ ಎಐಸಿಸಿ ಸೂಚಿಸಿದ್ದು, ಮಂತ್ರಿಮಂಡಲ ವಿಸ್ತರಣೆಗೂ ಮುನ್ನವೇ ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.
ಸಂಪುಟ ಸೇರ್ಪಡೆ ಆಗಲು ಸಾಧ್ಯವಾಗದ ಸಚಿವಾಕಾಂಕ್ಷಿಗಳಿಗೆ ಈ ಪಟ್ಟಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ.


