ಬೆಂಗಳೂರು:ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದಿದ್ದ ಕಾಂಗ್ರೆಸ್ ಶಾಸಕರ ಬಂಡಾಯ ಶಮನಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವತಃ ಅಖಾಡಕ್ಕೆ ಇಳಿಯಬೇಕಾಯಿತು.
ಅಸಮಾಧಾನಿತ ಶಾಸಕರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟರಲ್ಲದೆ, ಇನ್ನು ಕೆಲವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಮತ್ತೆ ಕೆಲವರನ್ನು ನಾನೇ ನಿಮ್ಮ ಮನೆಗೆ ಬರುವುದಾಗಿ ತಿಳಿಸಿ, ಅಸಂತೃಪ್ತಿ ಶಮನಗೊಳಿಸಲು ನಡೆಸಿದ ಪ್ರಯತ್ನ ಸಫಲವಾದಂತಿದೆ.
ಶಾಸಕರ ಸಂಪರ್ಕ, ಚರ್ಚೆ
ಮುಖ್ಯಮಂತ್ರಿ ಜೊತೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲವು ಶಾಸಕರನ್ನು ಸಂಪರ್ಕಿಸಿ ಅಸಮಾಧಾನ ನಿವಾರಿಸಲು ಯತ್ನಿಸಿದರು.
ಸುರ್ಜೇವಾಲ ಮಾತಿಗೆ ಸೊಪ್ಪು ಹಾಕದ ಸಿದ್ದರಾಮಯ್ಯ, ನೀವು ಕೆಲವು ತಪ್ಪು ನಿರ್ಧಾರಗಳನ್ನು ಮಾಡಿದ್ದೀರಿ, ಇದರಿಂದ ಮುಂದೆ ಸರ್ಕಾರ ಮತ್ತು ಪಕ್ಷ ಸಂಕಷ್ಟ ಎದುರಿಸಬೇಕಾಗುತ್ತದೆ, ಮಂತ್ರಿಗಳ ಆಯ್ಕೆ ವೇಳೆ ನಡೆದ ಚರ್ಚೆಗೂ ನಂತರದ ಪಟ್ಟಿಗೂ ವ್ಯತ್ಯಾಸಗಳಿವೆ.
ಇದರಿಂದ ಕೆಲವು ಶಾಸಕರು ತೀವ್ರ ಅಸಮಾಧಾನ ಹೊಂದಿದ್ದಾರೆ, ಇದನ್ನು ನೀವು ಮತ್ತು ಮುಖ್ಯಮಂತ್ರಿ ಅವರೇ ಸರಿಪಡಿಸಬೇಕು ಎಂದು ಖಾರವಾಗಿ ತಿಳಿಸಿದ್ದಾರೆ.
ಹರಿಪ್ರಸಾದ್ ಪ್ರಯತ್ನ
ಇದರ ನಡುವೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬಂಡಾಯ ಶಾಸಕರನ್ನು ತಮ್ಮ ನಿವಾಸ ಮತ್ತು ಪಕ್ಷದ ಕಚೇರಿಗೆ ಕರೆಸಿಕೊಂಡು ಮುಖಾಮುಖಿ ಚರ್ಚಿಸಿ, ಸಮಾಧಾನ ಮಾಡುವ ಪ್ರಯತ್ನ ನಡೆಸಿದರು.
ಮುಖ್ಯಮಂತ್ರಿ ಸಲಹೆ ಮೇರೆಗೆ ಸಂಪುಟದ ಕೆಲವು ಹಿರಿಯ ಸಚಿವರು, ಖುದ್ದಾಗಿ ಕೆಲವು ಶಾಸಕರ ಮನೆಗಳಿಗೇ ತೆರಳಿ ಮನವೊಲಿಸುವ ಪ್ರಯತ್ನ ಮಾಡಿದರು.
ಈ ಬೆಳವಣಿಗೆ ನಂತರ ಭುಗಿಲೆದ್ದಿದ್ದ ಬಂಡಾಯ ಒಂದು ಹಂತಕ್ಕೆ ತಿಳಿಗೊಂಡಿತಾದರೂ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ತಮ್ಮ ಗಟ್ಟಿ ನಿಲುವನ್ನೇ ಮುಂದುವರೆಸಿದ್ದಾರೆ.
ಸುಧಾಕರ್ ಹೇಳಿಕೆಗೆ ಕೆಂಡ
ಮಾಜಿ ಸಚಿವ ಎಂ.ಸಿ.ಸುಧಾಕರ್ ನೀಡಿದ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೆಂಡ ಕಾರಿದ್ದಾರೆ.
ನಮ್ಮಿಂದ ಪಕ್ಷ ಇದೆಯೇ ಹೊರತು ಪಕ್ಷದಿಂದ ನಾವಿಲ್ಲ ಎಂದು ಸುಧಾಕರ್ ಹೇಳಿಕೆ ನೀಡಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಖರ್ಗೆ, ಪಕ್ಷದ ಕಚೇರಿಗೆ ಅಲೆದಾಡಿ ಚಿನ್ಹೆ ಬಯಸಿದ್ದು ತಾವಲ್ಲವೇ ಎಂದು ತಿರುಗೇಟು ನೀಡಿದ್ದಾರೆ.
ಸಮರ್ಥರನ್ನು ಗುರುತಿಸಿ, ಅಂತಹವರಿಗೆ ಪಕ್ಷ ’ಬಿ’ ಫಾರಂ ನೀಡಿತು, ಚಿನ್ಹೆಯ ಅಡಿ ಗೆದ್ದ ಮೇಲೆ ಇಂತಹ ಮಾತುಗಳು ಸರಿಯಲ್ಲ, ಈಗ ಪಕ್ಷಕ್ಕಿಂತ ದೊಡ್ಡವರು ಎಂದು ಹೇಳಬಾರದು ಎಂದಿದ್ದಾರೆ.


