ಬೆಂಗಳೂರು:ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಸ್ತಕ್ಷೇಪ ಮಾಡಿ ಮತದಾರರಲ್ಲದವರನ್ನು ಉಳಿಸಿಕೊಳ್ಳಲು ಮುಂದಾಗಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಇಂದಿಲ್ಲಿ ಆರೋಪ ಮಾಡಿವೆ.
ಬೂತ್ ಮಟ್ಟದ ಅಧಿಕಾರಗಳ ಮೇಲೆ ಒತ್ತಡ ಹೇರಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನಮೂದಿಸುವ ಕಾರ್ಯ ನಡೆಯುತ್ತಿದೆ ಎಂದು ದೂರಿವೆ.
ದಾಖಲೆಗಳ ಸಮೇತ ಬಹಿರಂಗ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೆಲವು ದಾಖಲೆಗಳ ಸಮೇತ ರಾಜ್ಯ ಸರ್ಕಾರದ ಕುತಂತ್ರ ಬಹಿರಂಗಗೊಳಿಸಿದರೆ, ಕೇಂದ್ರದ ಮತ್ತೊಬ್ಬ ಸಚಿವ ಶೋಭಾ ಕರದ್ಲಾಜೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತ್ಯೇಕ ಸುದ್ದಿಗೋಷ್ಠಿಗಳನ್ನು ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ರಮ ಮತದಾರರ ಪಟ್ಟಿ ತಯಾರಿಗೆ ಕಿಡಿಕಾರಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲೇ ಹಲವೆಡೆ ಪ್ರಕ್ರಿಯೆಯಲ್ಲಿ ಲೋಪಗಳು ಆಗುತ್ತಿದ್ದು, ಮುಖ್ಯಮಂತ್ರಿಗಳ ಮೂಗಿನಡಿಯೇ ಕೃತ್ಯಗಳು ನಡೆಯುತ್ತವೆ ಎಂದು ದೂರಿದ್ದಾರೆ.
ಕುಮಾರಸ್ವಾಮಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಅಧಿಕಾರಿಗಳು ರಾಜ್ಯ ಸರ್ಕಾರದ ಗುಲಾಮರಂತೆ ವರ್ತಿಸುತ್ತಿದ್ದು, ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ರಾಮ ಮಂದಿರದ ಬಗ್ಗೆ ಮಾತನಾಡುತ್ತಾರೆ, ಆದರೆ, ಎಸ್ಐಆರ್ ಹೆಸರಿನಲ್ಲಿ ಮತದಾರರ ಹುಂಡಿಯನ್ನೇ ಲೂಟಿ ಮಾಡಲು ಸರ್ಕಾರ ಹೊರಟಿದೆ.
ಸಂವಿಧಾನ ಆಶಯ ಬುಡಮೇಲು
ಇಂತಹ ಕೃತ್ಯಗಳಿಂದ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಕಾರ್ಯ ನಡೆದಿದೆ ಎಂದು ಟೀಕಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನಡೆಯುತ್ತಿರುವ ಅಕ್ರಮಗಳ ವರದಿಗಳು ಬರುತ್ತಿವೆ, ಇದನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತಂದು ದೂರು ಸಲ್ಲಿಸಲಾಗುವುದು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಐಆರ್ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಓ)ಗಳ ದುರುಪಯೋಗ ಆಗುತ್ತಿದೆ, ಅಧಿಕಾರಿಗಳನ್ನು ಮಸೀದಿಯಲ್ಲಿ ಕೂರಿಸಿ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತಿದೆ, ರಾಜ್ಯ ಸರ್ಕಾರ ಹಿಂದೂ ಮತದಾರರ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ.
ಕಾಂಗ್ರೆಸ್ ಪರ ಬಿಎಲ್ಓಗಳ ಪ್ರಚಾರ
ಸಾಗರದಲ್ಲಿ ಬಿಎಲ್ಓಗಳನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ, ಚಾಮರಾಜಪೇಟೆ ಸೇರಿದಂತೆ ಮುಂತಾದ ಕಡೆಗಳಲ್ಲಿ ಎಸ್ಐಆರ್ ವಿಚಾರದಲ್ಲಿ ಉಂಟಾಗಿರುವ ಗೊಂದಲ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಚುನಾವಣಾಧಿಕಾರಿಗಳು ಸಮಸ್ಯೆ ಪರಿಹರಿಸಬೇಕು ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತ್ಯೇಕವಾಗಿ ಮಾತನಾಡಿ, ಜಿಬಿಎ ವ್ಯಾಪ್ತಿಯ 27 ವಾರ್ಡ್ಗಳಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಸಮಾನಾಂತರ ಎಸ್ಐಆರ್ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಚುನಾವಣಾ ಆಯೋಗ ರಾಜ್ಯದಾದ್ಯಂತ ಎಸ್ಐಆರ್ ನಡೆಸುತ್ತಿದೆ, ಈ ನಡುವೆ ಜಿಬಿಎ ವಾರ್ಡ್ಗಳಲ್ಲಿ ರಾಜ್ಯ ಚುನಾವಣಾ ಆಯೋಗ ಮತ್ತೊಂದು ಎಸ್ಐಆರ್ ನಡೆಸುತ್ತಿದೆ, ಇದು ಮತದಾರರನ್ನು ಗೊಂದಲಕ್ಕೀಡು ಮಾಡಿದೆ.
ರಾಹುಲ್ ಗಾಂಧಿ ತೃಪ್ತಿಪಡಿಸಲು ಕೃತ್ಯ
ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ತೃಪ್ತಿಪಡಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಇಂತಹ ಕೆಲಸ ಮಾಡುತ್ತಿದೆ, 20 ವರ್ಷಗಳ ನಂತರ ಎಸ್ಐಆರ್ ನಡೆಯುತ್ತಿದ್ದು, ದೇಶದಲ್ಲಿ ಅಕ್ರಮ ವಲಸಿಗ ಮತದಾರರ ಗುರುತಿಸಲು, ಮೃತಪಟ್ಟವರ ಹೆಸರು ಹಾಗೂ ಎರಡು ಕಡೆ ಇರುವ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯಲು ಎಸ್ಐಆರ್ ನಡೆಯುತ್ತಿದೆ.
ಹಲವು ವರ್ಷಗಳಿಂದ ಅಲ್ಪಸಂಖ್ಯಾತ ನಾಯಕರು ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯಕ್ಕೆ ಕರೆತಂದಿದ್ದು, ಇವರನ್ನು ಕರ್ನಾಟಕದ ನಿವಾಸಿಗಳಾಗಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಸೇರಿಸುವ ಷಡ್ಯಂತ್ರ ನಡೆಯುತ್ತಿದೆ.
ರಾಜ್ಯದ ವಿವಿಧ ಭಾಗದಲ್ಲಿ ನಲೆಸಿರುವ ಅಕ್ರಮ ಬಾಂಗ್ಲಾದೇಶಿಗರನ್ನು ಮತಪಟ್ಟಿಗೆ ಸೇರಿಸಿ ಭಾರತದ ಪ್ರಜೆಗಳನ್ನಾಗಿ ಸಕ್ರಮಗೊಳಿಸುವ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಾಂಗ್ಲಾ ಅಕ್ರಮ ವಲಸಿಗರು
ಬಿಹಾರ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಂತರ ಮತದಾರರ ಪಟ್ಟಿಯಿಂದ ಕೈಬಿಟ್ಟ ಬಾಂಗ್ಲಾ ಅಕ್ರಮ ವಲಸಿಗರು ರಾಜ್ಯಕ್ಕೆ ಬಂದಿದ್ದು, ಇವರಲ್ಲಿ ಕೆಲವರು ಸಿಕ್ಕಿ ಬಿದ್ದಿದ್ದಾರೆ.
ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇಲೆ ಬಿಎಲ್ಓಗಳು ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ಅಕ್ರಮ ನಿವಾಸಿಗಳನ್ನು ಮತಪಟ್ಟಿಗೆ ಸೇರಿಸಲಾಗುತ್ತಿದೆ.
ಮಸೀದಿಗಳು, ಶಾದಿ ಮಹಲ್ಗಳು, ಕಲ್ಯಾಣ ಮಂಟಪಗಳಲ್ಲಿ ಎನ್ನೂಮರೇಷನ್ ಫಾರಂಗಳನ್ನು ಭರ್ತಿ ಮಾಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ, ಅಕ್ರಮ ವಲಸಿಗರಿಗೆ ವಿಳಾಸ ಇಲ್ಲ, ಮನೆ ಸಂಖ್ಯೆ ಇಲ್ಲ, ಆದರೂ ಕಾನೂನು ಉಲ್ಲಂಘಿಸಿ ಅವರ ಹೆಸರನ್ನು ಸೇರಿಸಲಾಗುತ್ತಿದೆ.
ನಿಯಮ ಗಾಳಿಗೆ ತೂರಲಾಗಿದೆ
ಎಸ್ಐಆರ್ ಫಾರಂಗಳನ್ನು ಬಿಎಲ್ಓಗಳು ಮನೆಗಳಿಗೆ ಖುದ್ದಾಗಿ ಹೋಗಿ ಕೊಡಬೇಕು ಎಂಬ ನಿಯಮವಿದೆ, ಆದರೂ, ಎಲ್ಲ ನಿಯಮ ಗಾಳಿಗೆ ತೂರಿ ಬಿಎಲ್ಓಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದ ಸೈಬರ್ ಕೇಂದ್ರಗಳಲ್ಲಿ ಅಕ್ರಮವಾಗಿ ಜನನ ಪ್ರಮಾಣ ಪತ್ರ ಕೊಡಲಾಗುತ್ತಿದೆ, ಎಸ್ಐಆರ್ ಪ್ರಕ್ರಿಯೆ ಆರಂಭದ ನಂತರ ಜನನ ಪ್ರಮಾಣಪತ್ರ ಕೊಡುವ ಕಾರ್ಯದಲ್ಲಿ ಹೆಚ್ಚಳ ಕಂಡುಬಂದಿದೆ.
ರಾಜ್ಯದಲ್ಲಿ ಹುಟ್ಟಿದವರಿಗೆ, ಬದುಕಿದವರಿಗೆ ಪ್ರಮಾಣಪತ್ರ ಕೊಡಬೇಕಿಲ್ಲ, ನಮ್ಮ ಮನೆ ಇದೆ, ಮತಪಟ್ಟಿಯಲ್ಲಿ ಹೆಸರಿದೆ, ಅಕ್ರಮ ಬಾಂಗ್ಲಾ ವಲಸಿಗರನ್ನು ಕರೆತಂದು ನಿವಾಸಿ ಪ್ರಮಾಣಪತ್ರ ನೀಡಲಾಗುತ್ತಿದೆ.
ಅಕ್ರಮವಾಗಿ ಚುನಾವಣೆ ಗೆಲ್ಲುವುದೇ ಉದ್ದೇಶ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವಾಗಿ ಗೆಲ್ಲುವುದೇ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಉದ್ದೇಶವಾಗಿದ್ದು, ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು.
ಜಿಬಿಎ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಒಂದು ಸಮುದಾಯದ ಮತದಾರರನ್ನು ಸೇರಿಸಲು ವ್ಯವಸ್ಥಿತ ಷಡ್ಯಂತ್ರ ನಡೆದಿದೆ, ಅಲ್ಪಸಂಖ್ಯಾತರನ್ನು ಮತಪಟ್ಟಿಗೆ ಸೇರಿಸುವುದು ಸರ್ಕಾರದ ಆದ್ಯತೆಯಾದರೆ ಬಹುಸಂಖ್ಯಾತರ ಮತ ಬೇಡವೇ ಎಂದರು.
ಬಿಎಲ್ಓಗಳಿಗೆ ತರಬೇತಿ ನೀಡಿಲ್ಲ
ಬಿಎಲ್ಓಗಳು ಗುಂಪಾಗಿ ಜನರನ್ನು ಸೇರಿಸಿ ಎಸ್ಐಆರ್ ಮಾಡುವುದು ಸರಿಯಲ್ಲ, ಬಿಎಲ್ಓಗಳಿಗೆ ಸೂಕ್ತ ತರಬೇತಿ ನೀಡಿಲ್ಲ, ಮ್ಯಾಪಿಂಗ್ ಮಾಡುತ್ತಿಲ್ಲ, ಅರ್ಜಿಯನ್ನು ಮನೆಗೆ ಬಿಸಾಕಿ ಬರುತ್ತಿದ್ದಾರೆ, ಬಿಎಲ್ಓಗಳ ಮೇಲೆ ಒತ್ತಡ ಹೇರಲಾಗುತ್ತಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿನ ಕಾನೂನು ವಿರೋಧಿ ಕ್ರಮಗಳನ್ನು ರಾಜ್ಯ ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.


