ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್ನ 7 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ.
ಜೂನ್ 30ಕ್ಕೆ ತೆರವಾಗುತ್ತಿರುವ 7 ಸ್ಥಾನಗಳಿಗೆ 18ರಂದು ಚುನಾವಣೆ ನಡೆಯಲಿದ್ದು, ಮೂರೂ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಹೆಚ್ಚುವರಿ ಸ್ಥಾನಕ್ಕೆ ಪೈಪೋಟಿ
ಸಂಖ್ಯಾಬಲದ ಕೊರತೆ ಇದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ೭ನೇ ಸ್ಥಾನಕ್ಕಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ವಿಧಾನಸಭೆಯಲ್ಲಿನ ಪಕ್ಷಗಳ ಸಂಖ್ಯಾಬಲದ ಮೇಲೆ ಕಾಂಗ್ರೆಸ್ 4, ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ.
ಉಳಿದ ಒಂದು ಸ್ಥಾನ ಗೆಲ್ಲಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ನಡೆದಿದೆ.
ಗೆಲ್ಲುವ ಅಭ್ಯರ್ಥಿಗಳು
ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ್, ತಿಪ್ಪಣ್ಣಪ್ಪ ಕಾಮಕ್ನೂರ್ ಹಾಗೂ ಮಳವಳ್ಳಿ ಶಿವಣ್ಣ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ, ಬಿಜೆಪಿಯಿಂದ ಲಿಂಗರಾಜು ಪಾಟೀಲ್ ಹಾಗೂ ರಘು ಕೌಟಿಲ್ಯ ಕಣಕ್ಕಿಳಿದಿದ್ದಾರೆ.
7ನೇ ಸ್ಥಾನ ಗಳಿಸಿಕೊಳ್ಳಲು ಕಾಂಗ್ರೆಸ್ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದೆ.
ಇದೇ ಸ್ಥಾನಕ್ಕಾಗಿ ಜೆಡಿಎಸ್ ಕೊನೆ ಗಳಿಗೆಯಲ್ಲಿ ಗೋವಿಂದರಾಜು ಅವರನ್ನು ಚುನಾವಣಾ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದಾದ ಸ್ಥಾನ ಕಸಿದುಕೊಳ್ಳಲು ಯತ್ನಿಸಿದೆ.
ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲದ ಆಧಾರದ ಮೇಲೆ ಗೆಲುವಿಗೆ ಒಬ್ಬ ಅಭ್ಯರ್ಥಿಗೆ 28 ಮೊದಲ ಪ್ರಾಶಸ್ತ್ಯ ಮತಗಳ ಅಗತ್ಯವಿದೆ.
ಕಾಂಗ್ರೆಸ್-ಜೆಡಿಎಸ್ಗೆ ಮತಗಳ ಕೊರತೆ
ಕಾಂಗ್ರೆಸ್ಗೆ ತನ್ನ 5ನೇ ಅಭ್ಯರ್ಥಿ ಗೆಲುವಿಗೆ 4 ಮತಗಳ ಕೊರತೆ ಇದ್ದರೆ, ಜೆಡಿಎಸ್ಗೆ 10 ಮತಗಳ ಅಗತ್ಯವಿದೆ.
ಮಿತ್ರ ಪಕ್ಷ ಬಿಜೆಪಿಯ ಹೆಚ್ಚುವರಿ 4 ಮತಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗೆ ದೊರಕಿಸಿಕೊಳ್ಳಲು, ಕುಮಾರಸ್ವಾಮಿ ನಡೆಸಿದ ಮಾತುಕತೆ ಫಲವಾಗಿ ಹೆಚ್ಚುವರಿ ಮತಗಳ ಜೆಡಿಎಸ್ಗೆ ಬೀಳಲಿವೆ.
ಇದರೊಂದಿಗೆ ಪಕ್ಷೇತರ ಶಾಸಕ ಜನಾರ್ದನ ರೆಡ್ಡಿ, ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತಗಳನ್ನು ತಮ್ಮ ಅಭ್ಯರ್ಥಿಗೆ ಪಡೆದುಕೊಳ್ಳುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.
ಕಚ್ಚಾಟದ ಲಾಭಕ್ಕೆ ಯತ್ನ
ಕಾಂಗ್ರೆಸ್ನಲ್ಲಿನ ಆಂತರಿಕ ಕಚ್ಚಾಟದ ಲಾಭ ಪಡೆಯಲು ಭಾನುವಾರ ರಾತ್ರಿ ಪ್ರಯತ್ನ ನಡೆಸಿದ ನಂತರ ಇಂದು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ.
ಕಾಂಗ್ರೆಸ್ ತನ್ನ 5ನೇ ಅಭ್ಯರ್ಥಿ ಗೆಲುವಿಗೆ 4 ಮತಗಳ ಕೊರತೆ ಇದ್ದು, ಬಿಜೆಪಿಯಿಂದ ಉಚ್ಛಾಟನೆಗೊಂಡ ಇಬ್ಬರು ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಈಗಾಗಲೇ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ.
ಇನ್ನು ಗೆಲುವಿಗೆ ಅಗತ್ಯವಿರುವ 2 ಮತಗಳನ್ನು ಶಿವಕುಮಾರ್, ತಮ್ಮ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರಿಗೆ ತಂದುಕೊಡುವಲ್ಲಿ ಯಶಸ್ವಿಯಾಗುವರೇ ಎಂಬುದನ್ನು ಕಾದು ನೋಡಬೇಕಿದೆ.


