ಬೆಂಗಳೂರು:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ತಿಂಗಳಾಂತ್ಯಕ್ಕೆ ತಮ್ಮ ಮಂತ್ರಿಮಂಡಲ ವಿಸ್ತರಿಸಿ 18 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.
ಈ ತಿಂಗಳ 3ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಶಿವಕುಮಾರ್ ತಮ್ಮ ಜೊತೆ 13 ಮಂದಿಯನ್ನು ಸಂಪುಟಕ್ಕೆ ಮಾಡಿಕೊಂಡಿದ್ದರು.
ಸಂಪುಟದಲ್ಲಿ 34 ಮಂದಿಗೆ ಅವಕಾಶ
ವಿಧಾನಸಭೆಯ ಸದಸ್ಯರ ಸಂಖ್ಯಾಬಲದ ಆಧಾರದ ಮೇಲೆ ಮುಖ್ಯಮಂತ್ರಿ ಸೇರಿದಂತೆ 34 ಮಂದಿಗೆ ಸಂಪುಟದಲ್ಲಿ ಅವಕಾಶ ಇದೆ.
ಈಗಾಗಲೇ 14 ಮಂದಿ ಇದ್ದು, ಇದರೊಂದಿಗೆ ಇನ್ನೂ 18 ಮಂದಿಯನ್ನು ಸೇರ್ಪಡೆಗೊಳಿಸಿ, ಉಳಿದ ಎರಡು ಸ್ಥಾನಗಳನ್ನು ಮುಂದೆ ಭರ್ತಿ ಮಾಡಿಕೊಳ್ಳಲಿದ್ದಾರೆ.
ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿರುವ ಮುಖ್ಯಮಂತ್ರಿ ಅವರು, ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಕೇಂದ್ರದ ಕೆಲವು ಸಚಿವರನ್ನು ಭೇಟಿ ಮಾಡಿ ರಾಜ್ಯದ ಬಾಕಿ ಯೋಜನೆಗಳು ಹಾಗೂ ಅನುದಾನಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.
ಕಾಂಗ್ರೆಸ್ ವರಿಷ್ಠರ ಭೇಟಿ
ಈ ನಡುವೆ ತೆರೆಮರೆಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ, ಸಂಪುಟ ವಿಸ್ತರಣೆ ಹಾಗೂ ಹಾಲಿ ಸಚಿವರ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದಾರೆ.
ಪಕ್ಷದ ಅಧಿನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅಲ್ಲದೆ, ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೂ ಸಮಾಲೋಚನೆ ನಡೆಸಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ಮುಖಾಮುಖಿ ಚರ್ಚಿಸಿ, ಸಂಪುಟಕ್ಕೆ ಸೇರ್ಪಡೆ ಆಗಲಿರುವವರ ಸಂಭಾವ್ಯ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಾಲೋಚನೆ ನಂತರ ಪಟ್ಟಿ
ಸಂಪುಟ ವಿಸ್ತರಣೆ ವೇಳೆ ರಾಹುಲ್ ಗಾಂಧಿ ಸಲಹೆಯಂತೆ ಹೊಸಬರು ಮತ್ತು ಯುವಕರಿಗೆ ಆದ್ಯತೆ ನೀಡಲು ಮುಂದಾಗಿರುವ ಮುಖ್ಯಮಂತ್ರಿ, ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಸಮಾಲೋಚನೆ ನಂತರವಷ್ಟೇ ಪಟ್ಟಿ ಅಂತಿಮಗೊಳ್ಳಲಿದೆ.
ವಿಸ್ತರಣೆ ಸಂದರ್ಭದಲ್ಲಿ ಅವಕಾಶ ಪಡೆದುಕೊಳ್ಳಲು ಸುಮಾರು 70ಕ್ಕೂ ಹೆಚ್ಚು ಶಾಸಕರು ಭಾರೀ ಲಾಬಿ ನಡೆಸುತ್ತಿದ್ದರೆ, ಕೆಲವರಂತೂ ದೆಹಲಿಯಲ್ಲೇ ಟಿಕಾಣಿ ಹೂಡಿದ್ದಾರೆ.
ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಗೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಗರದಲ್ಲೇ ಇದ್ದು, ಅವರ ಸದಾಶಿವನಗರ ನಿವಾಸ ಪಕ್ಷದ ಶಾಸಕರ ಚಟುವಟಿಕೆಯಿಂದ ಕೂಡಿದೆ.
ಪೂರ್ಣ ಸಂಪುಟ ಸಾಧ್ಯವಾಗಿರಲಿಲ್ಲ
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆ ಪೂರ್ಣ ಪ್ರಮಾಣದ ಸಂಪುಟಕ್ಕೆ ಸಲಹೆ ಮಾಡಿದ್ದರು, ಆದರೆ, ರಾಜ್ಯಸಭಾ ಹಾಗೂ ಪರಿಷತ್ ಚುನಾವಣೆಯಿಂದಾಗಿ ಸಾಧ್ಯವಾಗಲಿಲ್ಲ.
ಸಂಭ್ಯಾವ ಸಚಿವರ ಪಟ್ಟಿಯಲ್ಲಿ ಬೆಳಗಾವಿಯ ಲಕ್ಷ್ಮಣ ಸವದಿ, ಬಾಗಲಕೋಟೆಯ ವಿಜಯಾನಂದ ಕಾಶಪ್ಪನವರ್, ವಿಜಯಪುರದ ಯಶವಂತರಾಯ ಗೌಡ ಪಾಟೀಲ್, ಕಲಬುರಗಿಯ ಡಾ.ಅಜಯ್ ಸಿಂಗ್, ಕೊಪ್ಪಳದ ರಾಘವೇಂದ್ರ ಹಿಟ್ನಾಳ್, ಧಾರವಾಡದ ಅಬ್ಬಯ್ಯ ಪ್ರಸಾದ್, ಹಾವೇರಿಯ ಶ್ರೀನಿವಾಸ ಮಾನೆ.
ಚಿತ್ರದುರ್ಗದ ಟಿ.ರಘುಮೂರ್ತಿ, ದಾವಣಗೆರೆಯ ಎಸ್.ಎಸ್.ಮಲ್ಲಿಕಾರ್ಜುನ್, ಶಿವಮೊಗ್ಗದ ಮಧುಬಂಗಾರಪ್ಪ, ಚಿಕ್ಕಬಳ್ಳಾಪುರದ ಎಸ್.ಎನ್.ಸುಬ್ಬಾರೆಡ್ಡಿ, ಕೋಲಾರದ ಎಂ.ರೂಪಕಲಾ.
ಬೆಂಗಳೂರು ಜಿಲ್ಲೆಯಿಂದ ಜಮೀರ್ ಅಹಮದ್ ಖಾನ್, ಮಂಡ್ಯದ ಪಿ.ಎಂ.ನರೇಂದ್ರಸ್ವಾಮಿ, ಮೈಸೂರಿನ ತನ್ವೀರ್ ಸೇಠ್, ಚಾಮರಾಜನಗರ ಟಿ.ಪುಟ್ಟರಂಗ ಶೆಟ್ಟಿ ಹೆಸುರಗಳು ಪ್ರಮುಖವಾಗಿ ಕೇಳಿಬರುತ್ತಿವೆ.


