ಬೆಂಗಳೂರು:ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಹೊಸದಾಗಿ ನೋಂದಣಿ ಆಗುವ ವಾಹನಗಳ ಮಾಲೀಕರು ಇನ್ನು ಮುಂದೆ ಕಡ್ಡಾಯವಾಗಿ ರಾಜ್ಯ ಸರ್ಕಾರಿ ವಿಮಾ ಸಂಸ್ಥೆಯಿಂದಲೇ ವಿಮೆ ಪಡೆಯಬೇಕೆಂಬ ನೂತನ ನಿಯಮವನ್ನು ಜಾರಿಗೆ ತರಲಾಗುತ್ತಿದೆ.
ಸರ್ಕಾರದ ಈ ನಿರ್ಧಾರದಿಂದ ರಾಜ್ಯ ಬೊಕ್ಕಸಕ್ಕೆ ವಾರ್ಷಿಕ ಒಂದು ಸಾವಿರ ಕೋಟಿ ರೂ. ಆದಾಯ ಬರಲಿದೆ.
ಆಗಸ್ಟ್ 15ರ ನಂತರ ಯೋಜನೆ
ಆಗಸ್ಟ್ 15ರ ನಂತರ ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ನೋಂದಣಿ ಆಗುತ್ತಿದ್ದ ವಾಹನಗಳ ಮಾಲೀಕರು ಖಾಸಗಿ ಕಂಪನಿಗಳಲ್ಲಿ ವಿಮೆ ಪಡೆದುಕೊಳ್ಳುತ್ತಿದ್ದರು.
ಇದರಿಂದ ರಾಜ್ಯ ಸರ್ಕಾರದ ಸಾವಿರಾರು ಕೋಟಿ ರೂ. ವಾರ್ಷಿಕ ಆದಾಯ ಖಾಸಗಿ ವಿಮಾ ಕಂಪನಿಗಳ ಪಾಲಾಗುತ್ತಿತ್ತು.
ಸರ್ಕಾರಿ ವಿಮಾ ಕಂಪನಿ ಪ್ರಾರಂಭ
ಈ ಹಣವನ್ನು ರಾಜ್ಯ ಸರ್ಕಾರ ಪಡೆದು, ಅಭಿವೃದ್ಧಿ ಯೋಜನೆಗಳಿಗೆ ಬಳಸಲು ಸರ್ಕಾರಿ ವಿಮಾ ಕಂಪನಿ ಪ್ರಾರಂಭಿಸುತ್ತಿದೆ.
ರಾಜ್ಯ ಸರ್ಕಾರಿ ನೌಕರರಿಗೆಂದೇ ಇರುವ ಕೆಜಿಐಡಿ-ವಿಮಾ ಕಂಪನಿ ಹೆಸರು ಬದಲಾಯಿಸಿ, ಸಾರ್ವಜನಿಕ ಸೇವೆಗೆ ಪ್ರಾರಂಭಿಸಲು ವೇದಿಕೆ ಸಜ್ಜಾಗಿದೆ.
ಹೊಸ ವಿಮಾ ಕಂಪನಿಗೆ ಹಿರಿಯ ಐಎಎಸ್ ಅಧಿಕಾರಿ ಒಳಗೊಂಡಂತೆ ಪ್ರತ್ಯೇಕ ಅಧಿಕಾರಿಗಳ ತಂಡ ಇರಲಿದೆ.
ಶೇಕಡ 20ರಷ್ಟು ಕಡಿಮೆ ದರ
ಖಾಸಗಿ ಕಂಪನಿಗಳು ಒಂದು ವಾಹನಕ್ಕೆ ವಿಮೆ ನೋಂದಣಿಗೆ ವಿಧಿಸುವ ವಾರ್ಷಿಕ ದರಕ್ಕಿಂತ ರಾಜ್ಯ ಸರ್ಕಾರದ ದರ ಶೇಕಡ 20ರಷ್ಟು ಕಡಿಮೆ ಇರಲಿದೆ.
ಅಪಘಾತ ಸಂದರ್ಭದಲ್ಲಿ ವಾಹನ ಮಾಲಿಕರು ವಿಮೆ ಪರಿಹಾರ ಪಡೆಯಲು ಸರಳ ನಿಯಮಗಳನ್ನು ರೂಪಿಸಿದೆ.
ಈ ನಿರ್ಧಾರದಿಂದ ಕರ್ನಾಟಕದಲ್ಲಿ ನೋಂದಣಿ ಆಗುವ ವಾಹನಗಳ ಶುಲ್ಕ ರಾಜ್ಯ ಸರ್ಕಾರಕ್ಕೆ ಸೇರಲಿದೆ.
ವಾಹನ ವಿಮೆ ನವೀಕರಣ
ರಾಜ್ಯದಲ್ಲಿ ಸುಮಾರು ಒಂದು ಕೋಟಿ ಸಮೀಪ ವಿವಿಧ ಮಾದರಿ ವಾಹನಗಳು ನೋಂದಣಿಯಾಗಿದ್ದು, ಇವು ಪ್ರತೀ ವರ್ಷ ವಿಮೆ ನವೀಕರಿಸಬೇಕು.
ನವೀಕರಣ ವೇಳೆ ಕಂಪನಿಗಳು ನಿಗದಿಪಡಿಸುವ ಮೊತ್ತ ಪಾವತಿಸಬೇಕಿತ್ತು, ಇನ್ನು ಮುಂದೆ ಇಂತಹ ವಾಹನಗಳೂ ಸರ್ಕಾರಿ ವಿಮಾ ಸಂಸ್ಥೆಯಲ್ಲಿ ನವೀಕರಿಸಬಹುದಾಗಿದೆ.
ಇದರಿಂದ ವಾಹನ ಮಾಲೀಕರು ಯಾವುದೇ ವಂಚನೆಗೆ ಒಳಗಾಗದೆ, ಸರ್ಕಾರಿ ವಿಮಾ ಕಂಪನಿಯ ಆಶ್ರಯದಲ್ಲಿ ಸುರಕ್ಷಿತವಾಗಿ ಇರಲಿದ್ದಾರೆ.


