ಮಹಾಬಲಿಪುರಂ (ತಮಿಳುನಾಡು):ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರಕಬೇಕಾದ ಅನುದಾನ ನೀಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಆಗ್ರಹಿಸಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಇಲ್ಲಿಗೆ ದೂರು ನೀಡಲು ಬಂದಿಲ್ಲ, ಆರ್ಥಿಕತೆ ಮುನ್ನಡೆಸುತ್ತಿರುವ ರಾಜ್ಯಗಳಿಗೆ ಸಲ್ಲಬೇಕಾದ ಗೌರವ, ನ್ಯಾಯಯುತ ಅಂಶಗಳನ್ನು ತಿಳಿಸಲು ಬಂದಿದ್ದೇವೆ, ನಮ್ಮೊಂದಿಗೆ ಹೆಜ್ಜೆ ಹಾಕಿ, ನಾವು ಭಾರತದ ಭವಿಷ್ಯ ಬೆಳಗುವ ಅವಕಾಶಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.
ಐಟಿ-ಬಿಟಿ ದೇಶದಲ್ಲೇ ಮೊದಲು
ಐಟಿ-ಬಿಟಿ ರಫ್ತಿನಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ, ಎಲ್ಲ ರಾಜ್ಯಗಳಿಗಿಂತ ಹೆಚ್ಚು ತೆರಿಗೆ ಪಾಲನ್ನು ಕೇಂದ್ರಕ್ಕೆ ನೀಡುತ್ತಿದ್ದೇವೆ.
ನಾವು ಪಾವತಿಸುತ್ತಿರುವ ತೆರಿಗೆಯಲ್ಲಿ ಸೂಕ್ತ ಪ್ರಮಾಣದ ಪಾಲು ನಮಗೆ ದೊರೆಯುತ್ತಿಲ್ಲ.
ಕರ್ನಾಟಕ ಬಲಿಷ್ಠವಾಗಿದ್ದರೆ ದಕ್ಷಿಣ ಭಾರತ ಬಲಿಷ್ಠವಾಗಿರುತ್ತದೆ, ದಕ್ಷಿಣ ಭಾರತ ಬಲಿಷ್ಠವಾದರೆ ರಾಷ್ಟ್ರವೇ ಬಲಿಷ್ಠವಾಗುತ್ತದೆ.
ನಮ್ಮ ಪಾಲಿನ ಅನುದಾನ ಕೊಡಿ
ನಮ್ಮ ಪಾಲಿನ ನ್ಯಾಯಯುತ ಅನುದಾನ ದೊರೆತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯ, ಹೊಸ ಯೋಜನೆಗಳು ಅನುಷ್ಟಾನಗೊಂಡರೆ, ಅದು ರಾಷ್ಟ್ರದ ಭಾಗವಾಗುತ್ತದೆ, ಇದನ್ನು ಗಮನದಲ್ಲಿ ಇಟ್ಟುಕೊಂಡು ದಕ್ಷಿಣ ರಾಜ್ಯಗಳ ಅನುದಾನ ನೀಡಿ ಎಂದರು.
15ನೇ ಹಣಕಾಸು ಆಯೋಗದ ಅವಧಿಯಲ್ಲಿ ವಿಭಜಿಸಬಹುದಾದ ತೆರಿಗೆ ಭಾಗದಲ್ಲಿ ಕರ್ನಾಟಕದ ಪಾಲು ಶೇ.4.7ರಿಂದ ಶೇ.3.6ಕ್ಕೆ ಇಳಿಕೆಯಾಯಿತು, ಇದು ಸುಮಾರು ಶೇ.23ರಷ್ಟು ಕಡಿತವಾಗಿದ್ದು, ಆರು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಅಂದಾಜು 65,000 ಕೋಟಿ ರೂ. ನಷ್ಟ ಉಂಟಾಗಿದೆ.
15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಮತ್ತು 6,000 ಕೋಟಿ ರೂ. ರಾಜ್ಯ ನಿರ್ದಿಷ್ಟ ಅನುದಾನ ಶಿಫಾರಸು ಮಾಡಿತ್ತು, ಆದರೆ, ಎರಡೂ ಶಿಫಾರಸು ಅನುದಾನಗಳು ಬಿಡುಗಡೆಯಾಗಿಲ್ಲ, ಈ ಅನ್ಯಾಯ ಸರಿಪಡಿಸಿ ಎಂದರು.
ನಮ್ಮ ಪಾಲು ಶೇ.4.7ಕ್ಕೆ ಹೆಚ್ಚಿಸಿ
16ನೇ ಹಣಕಾಸು ಆಯೋಗ ನಮ್ಮ ರಾಜ್ಯಕ್ಕೆ ಭಾಗಶಃ ನ್ಯಾಯ ಒದಗಿಸಿದ್ದು, ಕರ್ನಾಟಕದ ಪಾಲನ್ನು ಶೇ.3.64ರಿಂದ ಶೇ.4.131ಕ್ಕೆ ಹೆಚ್ಚಿಸುವ ಮೂಲಕ ಕೆಲವು ಮಟ್ಟಿಗೆ ಮರುಸ್ಥಾಪಿಸಿದೆ, ಆದಾಗ್ಯೂ, ನಮ್ಮ ಪಾಲನ್ನು ಸಂಪೂರ್ಣವಾಗಿ ಶೇ.4.7ಕ್ಕೆ ನಿಲ್ಲಿಸಬೇಕಿದೆ.
ಕರ್ನಾಟಕ ಜಿಎಸ್ಟಿ ಮತ್ತು ಆದಾಯ ತೆರಿಗೆಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ, ಬೆಳವಣಿಗೆ ಮತ್ತು ಆದಾಯದ ವಿಷಯದಲ್ಲಿ ಉತ್ತಮ ಸಾಧನೆ ಮಾಡುವ ರಾಜ್ಯವನ್ನು ಪ್ರೋತ್ಸಾಹಿಸಬೇಕೇ ಹೊರತು, ದಂಡಿಸಬಾರದು.
ರಾಜ್ಯಗಳ ಪಾಲು ಅಂತಿಮಗೊಂಡಿರುವ ಸಂದರ್ಭದಲ್ಲಿ, ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಯೋಜನೆ, ಎಸ್ಟಿಟಿಆರ್ಆರ್ ದಕ್ಷಿಣ ಭಾಗ, ರಾಯಚೂರಿಗೆ ಎಐಐಎಂಎಸ್ ಹಾಗೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ನಂತಹ ಹೆಚ್ಚುವರಿ ಕೇಂದ್ರ ಯೋಜನೆಗಳ ಮೂಲಕ ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕು.

ನದಿ ನೀರಿನ ಹಂಚಿಕೆ ವಿಭಜಿಸಬಾರದು
ನಮ್ಮ ಧ್ವನಿಯಲ್ಲಿ ನ್ಯಾಯಯುತತೆ ಒಂದು ಭಾಗವಾದರೆ, ನಮ್ಮ ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ಇನ್ನೊಂದು ಭಾಗವಾಗಿದೆ, ಈ ಸಭೆಯಲ್ಲಿರುವ ಪ್ರತಿಯೊಂದು ರಾಜ್ಯಕ್ಕೂ ನೀರಿಗಿಂತ ಮಹತ್ವದ ಸಂಪನ್ಮೂಲ ಮತ್ತೊಂದಿಲ್ಲ, ನಮ್ಮ ನದಿಗಳು ರಾಜಕೀಯ ಗಡಿಗಳನ್ನು ಗುರುತಿಸುವುದಿಲ್ಲ, ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳು ದಕ್ಷಿಣ ಪರ್ಯಾಯ ದ್ವೀಪದ ಜೀವನಾಡಿಗಳಾಗಿವೆ, ನೀರು ನಮ್ಮನ್ನು ಒಗ್ಗೂಡಿಸಬೇಕು, ವಿಭಜಿಸಬಾರದು, ನೀರಿನ ಹಂಚಿಕೆಯಿಂದ ನೀರಿನ ಸಹಕಾರದತ್ತ ಸಾಗುವ ಸಮಯ ಈಗ ಬಂದಿದೆ.
ಪ್ರತಿಯೊಂದು ನದಿಪಾತ್ರದ ರಾಜ್ಯಕ್ಕೂ ತನ್ನದೇ ಆದ ನ್ಯಾಯಸಮ್ಮತ ಅಗತ್ಯಗಳಿವೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ ಮತ್ತು ನಮ್ಮ ನಿಲುವು ಮೂರು ತತ್ತ್ವಗಳ ಮೇಲೆ ಆಧಾರಿತವಾಗಿದೆ, ಸಮಾನತೆ, ಪಾರದರ್ಶಕತೆ, ಸಹಕಾರ, ಆದರೆ, ಸಹಕಾರ ಎರಡೂ ದಿಕ್ಕಿನಿಂದ ಇರಬೇಕು.
ಕರ್ನಾಟಕದ ಹಕ್ಕುಗಳನ್ನು ಗೌರವಿಸಿ
ಕರ್ನಾಟಕ ಸದಾ ತನ್ನ ನೆರೆ ರಾಜ್ಯಗಳ ಹಕ್ಕುಗಳನ್ನು ಗೌರವಿಸಿದೆ, ಅದೇ ರೀತಿ ನಮ್ಮ ಹಕ್ಕುಗಳನ್ನೂ ಗೌರವಿಸಬೇಕೆಂದು ಬಯಸುತ್ತೇವೆ, ನ್ಯಾಯಮಂಡಳಿಗಳ ತೀರ್ಪುಗಳಡಿ ನಮಗೆ ಕಾನೂನುಬದ್ಧವಾಗಿ ದೊರೆಯಬೇಕಾದ ನೀರಿನ ಪಾಲು ಹಾಗೂ ನಮ್ಮ ರೈತರಿಗೆ ನೀರನ್ನು ತಲುಪಿಸುವ ಯೋಜನೆಗಳ ಸಮಯೋಚಿತ ಪೂರ್ಣಗೊಳಿಸುವಿಕೆಯನ್ನು ನಾವು ನಿರೀಕ್ಷಿಸುತ್ತೇವೆ.
ಕೇಂದ್ರ ಕಾಯಿದೆಯು ಪ್ರಮುಖ ಖನಿಜಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ, ಈ ಹಕ್ಕನ್ನು ಸುಪ್ರೀಂಕೋರ್ಟ್ನ 9 ನ್ಯಾಯಮೂರ್ತಿಗಳ ಪೀಠ ರಾಜ್ಯಗಳಿಗೆ ನೀಡಿದೆ.
ಹೆಚ್ಚುತ್ತಿರುವ ಮಾದಕ ವಸ್ತುಗಳ ಕಳ್ಳಸಾಗಣೆ ಸವಾಲಾಗಿದೆ, ಇದನ್ನು ತಡೆಯಲು ನಮಗೆ ಬಲಿಷ್ಠ ಕಾನೂನುಗಳು, ಬಲಿಷ್ಠ ಜಾರಿ ವ್ಯವಸ್ಥೆ ಮತ್ತು ಕಳ್ಳಸಾಗಣೆದಾರರ ವಿರುದ್ಧ ಅತ್ಯಂತ ಕಠಿಣ ಕ್ರಮಗಳ ಅಗತ್ಯವಿದೆ ಎಂದರು.


