ಬೆಂಗಳೂರು:ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ದೇಶದ ಜನರಿಗೆ ಆಹಾರ ಭದ್ರತೆ ಒದಗಿಸಿದ ಮಹಾನ್ ವ್ಯಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಗುಣಗಾನ ಮಾಡಿದರು.
ಡಾ.ಬಾಬು ಜಗಜೀವನರಾಂ ಪುಣ್ಯತಿಥಿ ಅಂಗವಾಗಿ ವಿಧಾನಸೌಧ ಪಶ್ಚಿಮ ದ್ವಾರದ ಬಳಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ತೀವ್ರ ಆಹಾರ ಕೊರತೆ ಎದುರಾಗಿತ್ತು, ಬೇರೆ ರಾಷ್ಟ್ರಗಳ ಮುಂದೆ ಬೇಡಬೇಕಾದ ಪರಿಸ್ಥಿತಿ ಇತ್ತು, ಈ ಸಂದರ್ಭದಲ್ಲಿ ಹೊಸ ತಳಿಗಳ ಅಭಿವೃದ್ಧಿ ಹಾಗೂ ಕೃಷಿ ಸುಧಾರಣಾ ಕ್ರಮಗಳಿಂದ ಆಹಾರ ಭದ್ರತೆ ಸಾಧಿಸಲಾಯಿತು.
ಕಾರ್ಮಿಕರ ಪರ ಕಾಯ್ದೆ
ಜಗಜೀವನರಾಂ ಅವರು ರಕ್ಷಣಾ ಇಲಾಖೆ ಸೇರಿದಂತೆ ಕಾರ್ಯನಿರ್ವಹಿಸಿದ ಇಲಾಖೆಗಳಲ್ಲಿ ದಕ್ಷ ಆಡಳಿತ ನೀಡಿದ್ದಾರೆ, ಕಾರ್ಮಿಕರ ಪರ ಅನೇಕ ಕಾಯ್ದೆಗಳನ್ನು ರಚಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಬಡವರು, ರೈತರು, ಕೂಲಿ ಕಾರ್ಮಿಕರ ಪರವಾಗಿ ನಿರಂತರ ಹೋರಾಟ ನಡೆಸಿದ್ದು, ಅವರು ತೋರಿದ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡಬೇಕಿದೆ ಎಂದರು.
ಸುಮಾರು 3ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ.ಬಾಬು ಜಗಜೀವನರಾಂ ಭವನವನ್ನು ಜುಲೈ 13ರಂದು ಲೋಕಾರ್ಪಣೆ ಮಾಡಲಾಗುವುದು, ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ಕೌಶಲ್ಯಾಭಿವೃದ್ಧಿ ತರಬೇತಿ
ಈ ಭವನದಲ್ಲಿ ಅರ್ಹ ಅಭ್ಯರ್ಥಿಗಳಿಗೆ ವಿಜ್ಞಾನ, ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸಲಾಗುವುದು ಎಂದರು.
ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಭಾರತ್ ಅಕ್ಕಿ ಯೋಜನೆ ಆರಂಭಿಸಿತ್ತು, ನಾವು ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೇಳಿದಾಗ, ಭಾರತೀಯ ಆಹಾರ ನಿಗಮದಲ್ಲಿ ದಾಸ್ತಾನಿದ್ದರೂ ನೀಡಲಿಲ್ಲ ಎಂದು ಟೀಕಿಸಿದರು.