ಬೆಂಗಳೂರು:ಖಾತೆ ಹಂಚಿಕೆ ಅಸಮಾಧಾನದಿಂದ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ವಾಟ್ಸ್ಅಪ್ನಲ್ಲಿ ಕಳುಹಿಸಿದ ರೆಡ್ಡಿ ಅವರ ರಾಜೀನಾಮೆ ಪತ್ರ ಅಂಗೀಕರಿಸಲು ಸಾಧ್ಯವಿಲ್ಲ, ಅವರು ನಮ್ಮ ಕುಟುಂಬ ಇದ್ದಂತೆ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದರು.
ನಿಭಾಯಿಸುವ ಶಕ್ತಿ ನನಗಿದೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆ ಸಂದರ್ಭದಲ್ಲಿ ಎದುರಾಗುವ ಗಾಳಿ, ಬಿರುಗಾಳಿ, ಗುಡುಗು, ಸಿಡಿಲು, ಮಳೆ ನಿಭಾಯಿಸುವ ಶಕ್ತಿ ನನಗೆ ಮತ್ತು ಪಕ್ಷಕ್ಕಿದೆ ಎಂದರು.
ನಾನು ಮುಖ್ಯಮಂತ್ರಿಯಾದರೂ, ರಾಮಲಿಂಗಾರೆಡ್ಡಿ ಸಚಿವರಾದರೂ, ನಾವೆಲ್ಲಾ ಸ್ನೇಹಿತರು, ಅವರು ಪಕ್ಷದ ಹಿರಿಯರು, ಬೆಂಗಳೂರಿನಲ್ಲಿ ಪಕ್ಷ ಕಟ್ಟಿ, ಬೆಳೆಸಿದವರು, ಅಂತಹವರನ್ನು ಹೊರಗಿಟ್ಟು ನಾನು ಅಧಿಕಾರ ನಡೆಸಲಾಗುತ್ತದೆಯೇ.
ಸರ್ಕಾರದ ಪ್ರಾರಂಭದಲ್ಲಿ ಇದೆಲ್ಲಾ ಸಾಮಾನ್ಯ, ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ, ಅದೇ ರೀತಿ ನಮ್ಮ ರಾಜಕೀಯು ಇರುತ್ತದೆ, ಇದರ ಬಗ್ಗೆ ಮಾಧ್ಯಮದವರು ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಸಮಸ್ಯೆ ಕುರಿತು ಚರ್ಚಿಸಿದ್ದೇವೆ
ರೆಡ್ಡಿ ಅವರ ಜೊತೆ ಶುಕ್ರವಾರ ತಡರಾತ್ರಿ ಮಾತನಾಡಿದ್ದೇನೆ, ನಾನು ಮಾತುಕತೆ ನಡೆಸಿದ ನಂತರ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲ ಜೊತೆಗೂ ಸಮಸ್ಯೆ ಕುರಿತು ಚರ್ಚಿಸಿದ್ದೇವೆ.
ಸರ್ಕಾರ ರಚನೆಗೂ ಮುನ್ನ ಬೆಂಗಳೂರು ಉಸ್ತುವಾರಿ ಖಾತೆ ರೆಡ್ಡಿ ಅವರಿಗೇ ನೀಡುವುದಾಗಿ ಭರವಸೆ ನೀಡಿದ್ದೆ, ಆದರೆ ಪಕ್ಷದ ಮಟ್ಟದಲ್ಲಿ ಕೆಲ ಬದಲಾವಣೆಯಾಗಿದೆ, ಸಮಸ್ಯೆ ಬಗ್ಗೆ ವರಿಷ್ಟರ ಗಮನಕ್ಕೂ ತಂದಿದ್ದೇನೆ, ನಾನೇ ಬಗೆಹರಿಸುತ್ತೇನೆ.
ಇನ್ನೂ ಕೆಲವು ಸಣ್ಣಪುಟ್ಟ ಸಮಸ್ಯೆಗಳಿವೆ, ಅವೂ ಒಂದೆರಡು ದಿನದಲ್ಲಿ ಪರಿಹಾರವಾಗಲಿದೆ, ಮುಂದೆ ನಾವೆಲ್ಲರೂ ಒಟ್ಟಿಗೆ ಸೇರಿ ಒಳ್ಳೆ ಆಡಳಿತ ಕೊಡುವಲ್ಲಿ ಗಮನಹರಿಸುತ್ತೇವೆ ಎಂದರು.
ಮಾತು ತಪ್ಪಿದ್ದಕ್ಕೆ ಬೇಸರ
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, ನಾನು ತಾಳ್ಮೆ ಕಳೆದುಕೊಂಡಿಲ್ಲ, ಮಾತು ತಪ್ಪಿದ್ದಕ್ಕೆ ಬೇಸರವಾಗಿ ರಾಜೀನಾಮೆ ನೀಡಿದ್ದೇನೆ ಎಂದರು.
ತಮ್ಮ ರಾಜೀನಾಮೆ ಅಂಗೀಕಾರ ಮಾಡುವುದಿಲ್ಲ ಎಂಬುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ, ನನ್ನ ನಿರ್ಧಾರವನ್ನು ಶಿವಕುಮಾರ್ ಹಾಗೂ ರಣದೀಪ್ಸಿಂಗ್ ಸುರ್ಜೇವಾಲ ಅವರಿಗೂ ಸ್ಪಷ್ಟವಾಗಿ ತಿಳಿಸಿದ್ದೇನೆ.
ಜಲಸಂಪನ್ಮೂಲ ದೊಡ್ಡ ಇಲಾಖೆ, ಅದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲವೆಂದಾಗ ಸಚಿವನಾಗಿ ಕಾರ್ಯನಿರ್ವಹಿಸುವುದಾದರೂ ಹೇಗೆ ಎಂದರು.
ನಿಭಾಯಿಸಲಾಗದ ಖಾತೆ
ನಾನು ಜಲಸಂಪನ್ಮೂಲ ಖಾತೆ ಬಯಸಿರಲಿಲ್ಲ, ನನ್ನನ್ನು ಮಂತ್ರಿ ಮಾಡಿ, ಇಂತಹುದೇ ಖಾತೆ ಬೇಕು ಎಂಬ ಹಠವನ್ನೂ ಹಿಡಿದಿರಲಿಲ್ಲ, ನಿಭಾಯಿಸಲಾಗದ ಖಾತೆ ತೆಗೆದುಕೊಂಡು ಹೇಗೆ ಕೆಲಸ ಮಾಡಲಿ.
ನನಗೆ ತಿಳಿದಿರುವ ಇಲಾಖೆ ನೀಡಿದರೆ, ಸಮರ್ಪಕವಾಗಿ ನಿಭಾಯಿಸುವೆ, ಎಲ್ಲಾ ವಿಚಾರವನ್ನು ನಾಯಕರಿಗೆ ತಿಳಿಸಿದ್ದೇನೆ, ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ, ನಾನು ಯಾರ ಮೇಲೂ ಅಪವಾದ ಮಾಡುತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ ಎಂದರು.


