ನವದೆಹಲಿ:ಕರ್ನಾಟಕ ರಾಜ್ಯಕ್ಕೆ ಅಕ್ಕಿಕೊಡಲು ಕೇಂದ್ರ ಸರ್ಕಾರ ಸಿದ್ಧವಿದೆ, ಮನವಿ ಬಂದರೆ ಹೆಚ್ಚುವರಿ ಅಕ್ಕಿ ಕೊಡಲಿದ್ದೇವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಪ್ರತಿ ಕೆಜಿಗೆ 28 ರೂ.ನಂತೆ ಅಕ್ಕಿ ಕೊಡಲು ಕೇಂದ್ರ ಸಿದ್ಧವಿದೆ, ಎಷ್ಟು ಪ್ರಮಾಣದ ಅಕ್ಕಿ ಬೇಕಿದ್ದರೂ ಕೊಡುತ್ತೇವೆ ಎಂದರು.
ಈ ಹಿಂದೆ ಅಕ್ಕಿ ಕೊಡಲು ಒಪ್ಪಿರಲಿಲ್ಲ
ಈ ಹಿಂದೆ ರಾಜ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ಒಪ್ಪಿರಲಿಲ್ಲ, ಎಲ್ಲಾ ದಾಸ್ತಾನನ್ನೂ ರಾಜ್ಯಕ್ಕೆ ಮಾರಾಟ ಮಾಡಿ ಗೋದಾಮುಗಳು ಖಾಲಿಯಾದರೆ ತುರ್ತು ಸಂದರ್ಭಗಳಲ್ಲಿ ಅಕ್ಕಿ ವಿತರಣೆ ಕಷ್ಟವಾಗುತ್ತದೆ ಎಂಬುದು ಕೇಂದ್ರದ ವಾದವಾಗಿತ್ತು.
ಅನ್ನಭಾಗ್ಯ ಯೋಜನೆಯಡಿ ಕರ್ನಾಟಕ ಸರ್ಕಾರದ ಪಾಲಿನ ಉಚಿತ 5 ಕೆಜಿ ಅಕ್ಕಿ ನೀಡಲು ಕೇಂದ್ರದಿಂದ ಅಕ್ಕಿ ದೊರೆಯುತ್ತಿಲ್ಲ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಲವು ಸಚಿವರು ಆರೋಪಿಸುತ್ತಿದ್ದರು.
ಅಕ್ಕಿ ರಾಜಕೀಯ ಆರೋಪ
ಹಣ ಕೊಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಸಿದ್ಧವಿಲ್ಲ, ಬಡವರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ನಿರಂತರ ಆರೋಪ ಕೇಳಿಬಂದಿತ್ತು.
ಕೇಂದ್ರ ಸರ್ಕಾರ ಬೇರೆಯದೇ ಕಾರಣ ನೀಡಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು, ಇದೀಗ ಕೇಂದ್ರದಿಂದ ಅಕ್ಕಿ ದೊರೆತರೆ ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ಹಣದ ಬದಲಿಗೆ ಅಕ್ಕಿಯನ್ನೇ ವಿತರಿಸಲು ಸಾಧ್ಯವಾಗಲಿದೆ.
