ಬೆಂಗಳೂರು:ಸಿದ್ದರಾಮಯ್ಯ ನೀಡಿದ ರಾಜೀನಾಮೆ ಅಂಗೀಕಾರ ಆಗುತ್ತಿದ್ದಂತೆ, ಡಿ.ಕೆ.ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲು ಕಾಂಗ್ರೆಸ್ ವರಿಷ್ಠರು ವೇದಿಕೆ ಸಿದ್ಧಪಡಿಸಿದ್ದಾರೆ.
ನಾಯಕನ ಆಯ್ಕೆಗೆ ಮೇ 30ರ ಶನಿವಾರ ಸಂಜೆ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಒಂದು ಸಾಲಿನ ನಿರ್ಣಯ
ಕಾಂಗ್ರೆಸ್ ಸಂಪ್ರದಾಯದಂತೆ ಎಐಸಿಸಿ ನಿಯೋಜಿಸಿರುವ ವೀಕ್ಷಕರು, ಒಂದು ಸಾಲಿನ ನಿರ್ಣಯ ತಂದು ಅಂಗೀಕಾರ ಪಡೆಯುವ ಮೂಲಕ ಸರ್ಕಾರ ರಚನೆಗೆ ಶಿವಕುಮಾರ್ ಹಾದಿ ಸುಗಮಗೊಳಿಸಲಿದ್ದಾರೆ.
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಶಿವಕುಮಾರ್ ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕೋತ್ತಾಯ ಪ್ರಸ್ತಾವನೆ ಸಲ್ಲಿಸಲಿದ್ದಾರೆ.
ಶಿವಕುಮಾರ್ ಜೊತೆ ಕೆಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ವೇದಿಕೆ ಸಿದ್ಧಗೊಳ್ಳುತ್ತಿದೆ.

ಮಳೆ ಬಂದರೆ ಸ್ಥಳಾಂತರ
ಒಂದೊಮ್ಮೆ ಮಳೆ ಬಂದರೆ, ಕೊನೆ ಗಳಿಗೆಯಲ್ಲಿ ಪ್ರಮಾಣವಚನ ಸಮಾರಂಭವನ್ನು ಕಂಠೀರವ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡುವ ಸಿದ್ಧತೆಯೂ ನಡೆದಿದೆ.
ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್, ಕೆಲವು ಶಾಸಕರು ಮತ್ತು ಪಕ್ಷದ ಮುಖಂಡರನ್ನು ಸಂಪರ್ಕಿಸಿ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯುವ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸುತ್ತಿದ್ದಾರೆ.
ಭಾನುವಾರ, ಸೋಮವಾರ ಇಲ್ಲವೇ ಬುಧವಾರದಂದು ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಸರ್ಕಾರ ರಚನೆ ಚರ್ಚೆ
ಸಿದ್ದರಾಮಯ್ಯ ಲೋಕಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತಿದ್ದಂತೆ ಗುರುವಾರ ರಾತ್ರಿಯೇ ದೆಹಲಿಗೆ ದೌಢಾಯಿಸಿದ ಶಿವಕುಮಾರ್ ಇಂದು ಇಡೀ ದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಸರ್ಕಾರ ರಚನೆ ಕುರಿತು ಸಮಾಲೋಚಿಸಿದ್ದಾರೆ.
ನಂತರ ಶಾಸಕಾಂಗ ಪಕ್ಷದ ಸಭೆ ನಿಗದಿ ಮಾಡಲಾಯಿತು, ಈ ವೇಳೆ ದೆಹಲಿಯಲ್ಲೇ ಪುತ್ರನೊಂದಿಗೆ ಬಿಡಾರ ಹೂಡಿದ್ದ ಸಿದ್ದರಾಮಯ್ಯ ಅವರನ್ನೂ ಎರಡು-ಮೂರು ಬಾರಿ ಭೇಟಿ ಮಾಡಿ ಸಮಾಲೋಚಿಸಿದರು.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆಯೇ ಮಂತ್ರಿಮಂಡಲಕ್ಕೆ ಯಾರನ್ನು ಸೇರ್ಪಡೆಗೊಳಿಸಬೇಕೆಂಬ ಕುರಿತು ಶಿವಕುಮಾರ್, ವರಿಷ್ಠರಿಗೆ ಸಂಭವನೀಯ ಸಚಿವರ ಪಟ್ಟಿ ನೀಡಿದ್ದಾರೆ ಎನ್ನಲಾಗಿದೆ.
ಮೌನ ಮುರಿದ ಶಿವಕುಮಾರ್
ಕಳೆದ ಮೂರು ದಿನಗಳಿಂದ ಮೌನವಾಗಿದ್ದ ಶಿವಕುಮಾರ್, ಇಂದು ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಶನಿವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದರು.
ಪಕ್ಷದ ಎಲ್ಲಾ ಶಾಸಕರು ಬೆಂಗಳೂರಿನಲ್ಲೇ ಇರುವಂತೆ ಸೂಚಿಸಲಾಗಿದೆ, ವರಿಷ್ಠರ ಆದೇಶದ ಮೇರೆಗೆ ಸಮಯ ನಿಗದಿ ಪಡಿಸಲಾಗಿದೆ ಎಂದರು.
ಮೊದಲು ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಂತರ ಉಳಿದೆಲ್ಲಾ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ ಎಂದರಲ್ಲದೆ, ಇನ್ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ.


