ಬೆಂಗಳೂರು:ಇನ್ನೂ ಹತ್ತು ವರ್ಷ ನಮ್ಮದೇ ಅಧಿಕಾರ, ಸರ್ಕಾರ ಎಂಬುದಾಗಿ ಕಾಂಗ್ರೆಸ್ ನಾಯಕರು ಬೀಗುತ್ತಿದ್ದು, ಹತ್ತು ವರ್ಷದ ಮಾತಿರಲಿ, ಇನ್ನು ಹತ್ತು ತಿಂಗಳು ಅಧಿಕಾರದಲ್ಲಿ ಇರಲಿ ನೋಡೋಣ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಮಾರ್ಮಿಕವಾಗಿ ನುಡಿದರು.
ಬೆಂಗಳೂರಿನಿಂದ ಮೈಸೂರುವರೆಗೆ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ಸರ್ಕಾರವನ್ನು ಯಾರೂ ಅಸ್ಥಿರ ಮಾಡುತ್ತಿಲ್ಲ, ಜನರು ಕೊಟ್ಟ ಅವಕಾಶವನ್ನು ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ, ಹಗರಣಗಳ ಮೇಲೆ ಹಗರಣಗಳನ್ನು ನಡೆಸಿ ಅಕ್ರಮ ಎಸಗಿದ್ದೀರಿ, ಈಗ ಜೆಡಿಎಸ್-ಬಿಜೆಪಿ ಪ್ರಶ್ನೆ ಮಾಡುತ್ತಿವೆ ಎನ್ನುತ್ತಿದ್ದೀರಿ ಎಂದು ಅವರು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ನಿರತ ಸರ್ಕಾರ
ವಿಧಾನಸಭಾ ಚುನಾವಣೆ ನಂತರ ಅಧಿಕಾರಕ್ಕೆ ಬಂದು ಜನಪರ ಕೆಲಸ ಮಾಡುವುದನ್ನು ಬಿಟ್ಟು ಕಾನೂನುಬಾಹಿರ ಚಟುವಟಿಕೆಗಳು, ಭ್ರಷ್ಟಾಚಾರದಲ್ಲಿ ನಿರತರಾಗಿದ್ದೀರಿ, ಹಿಂದೆಂದೂ ಕಂಡಿರದಂತಹ ಭ್ರಷ್ಟ ಸರ್ಕಾರವನ್ನು ಕಾಣುತ್ತಿದ್ದೇವೆ.
ಜನ ವಿರೋಧಿ ಸರ್ಕಾರದ ವಿರುದ್ಧ ಜೆಡಿಎಸ್-ಬಿಜೆಪಿ ಜಂಟಿ ಹೋರಾಟ ಹಮ್ಮಿಕೊಂಡಿವೆ, ಜನರಿಗೆ ಕಾಂಗ್ರೆಸ್ನ ಅಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ, ಆದಿಶಕ್ತಿ ತಾಯಿ ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿ ಯಡಿಯೂರಪ್ಪನವರ ಇನ್ನಿತರೆ ಮಾರ್ಗದರ್ಶಕರ ನೇತೃತ್ವದಲ್ಲಿ ಮೈಸೂರು ಪಾದಯಾತ್ರೆ ಮಾಡುತ್ತಿದ್ದೇವೆ, ನಾಡಿನ ಜನತೆಯ ಅಭಿಪ್ರಾಯ ಏನಿದೆ ಅದರ ಪರವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ.
ಕಾಂಗ್ರೆಸ್ ನಾಯಕರು ಬಿಡದಿಯಲ್ಲಿ ಪ್ರಶ್ನೆ ಮಾಡಿದ್ದಾರೆ, ಮುಂದೆಯೂ ಪ್ರಶ್ನೆ ಮಾಡುತ್ತಾರಂತೆ, ಮಾಡಲಿ, ಅವರಿಗೆ ತಕ್ಕ ಉತ್ತರ ಕೊಡುತ್ತೇವೆ, ಅವರು ಕೇಳಿರುವ ಪ್ರಶ್ನೆಗಳಿಗೆ ಬಿಡದಿ, ರಾಮನಗರದಲ್ಲಿ ಉತ್ತರ ಕೊಡುತ್ತೇನೆ ಎಂದರು.
ನಿಮ್ಮ ಆಸ್ತಿ ವಿವರ ನಾವೂ ಕೊಡುತ್ತೇವೆ
ದೇವೇಗೌಡರು ರಾಮನಗರಕ್ಕೆ ಬಂದ ನಂತರ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದಾಗಿ ಉಪಮುಖ್ಯಮಂತ್ರಿ ಕೇಳಿದ್ದಾರೆ, ಅದಕ್ಕೂ ನಾವು ಉತ್ತರ ಕೊಡುತ್ತೇವೆ, ನಾವೂ ಕೂಡ ಅವರದ್ದು ಎಷ್ಟಿದೆ ಆಸ್ತಿ ಎನ್ನುವುದನ್ನು ಬಿಡುಗಡೆ ಮಾಡುತ್ತೇವೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರುಗಳ ಅಕ್ರಮ ಆಸ್ತಿಗಳ ದಾಖಲೆ ಪತ್ರಗಳನ್ನ ಕೇಂದ್ರ ಸರ್ಕಾರಕ್ಕೆ ನಾನೇ ಕೊಟ್ಟಿದ್ದೇನೆ ಎಂದು ಅವರುಗಳು ಹೇಳಿಕೊಂಡು ತಿರುಗುತ್ತಿದ್ದಾರೆ, ನಮ್ಮನ್ನು ಬಂಧಿಸಲು ದೆಹಲಿಯಿಂದ ಬರುತ್ತಾರೆ, ಬಂಧನಕ್ಕೂ ನಾವು ಸಿದ್ಧವಿದ್ದೇವೆ ಅಂತಲೂ ಹೇಳಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಹಿಂದುಳಿದ ವರ್ಗಗಳ ನಾಯಕರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದಕ್ಕೆ ಕೆಲವರಿಗೆ ಹೊಟ್ಟೆ ಉರಿಯಿದೆ ಎನ್ನುತ್ತಾರೆ, ಇವರು ಒಳ್ಳೆಯ ಕೆಲಸ ಮಾಡಿದರೆ ಯಾರಿಗೆ ಹೊಟ್ಟೆ ಉರಿ ಬರುತ್ತದೆ, ಸುಖಾಸುಮ್ಮನೆ ಜನರ ಗಮನ ಬೇರೆಡೆಗೆ ಸೆಳೆಯಲು ನಾನು ಹಿಂದುಳಿದವನು, ಅದಕ್ಕೆ ಹೊಟ್ಟೆ ಉರಿ ಎಂದು ನಾಟಕ ಮಾಡುತ್ತಿದ್ದಾರೆ.
ನಿಮ್ಮದೇ ಸಮಾಜದ ಅಧಿಕಾರಿ ಆತ್ಮಹತ್ಯೆ
ಗೃಹ ಸಚಿವ ಡಾ.ಪರಮೇಶ್ವರ್, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ, ಆದರೆ, ನನ್ನ ಒಂದು ಪ್ರಶ್ನೆಗೆ ಉತ್ತರ ಕೊಡಲಿ, ಯಾದಗಿರಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ನಿಮ್ಮದೇ ಸಮಾಜದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರು ಏಕೆ ಜೀವ ಕಳೆದುಕೊಂಡರು.
ಅಧಿಕಾರಿ ಬದುಕು ಕೊನೆಗೊಳಿಸಿಕೊಂಡ ಬಗ್ಗೆ ಆ ಪೊಲೀಸ್ ಅಧಿಕಾರಿಯ ಪತ್ನಿ ಹೇಳುತ್ತಿದ್ದಾರೆ, ಪೋಸ್ಟಿಂಗ್ಗೆ 25 ಲಕ್ಷ ರೂ. ಲಂಚ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು, ಆ ತಾಯಿ ಯಾರ ವಿರುದ್ಧ ಆರೋಪ ಮಾಡಿದ್ದಾರೆ, ಅದರ ಬಗ್ಗೆ ಪರಮೇಶ್ವರ್ ಅವರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯವೆಂದು ಹೇಳಿಕೊಂಡು ರಾಜಕೀಯ ಲಾಭ ಪಡೆಯುತ್ತಿರುವ ನಿಮ್ಮ ಆಡಳಿತಾವಧಿಯಲ್ಲಿ ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು, ನಿಮ್ಮದೇ ಸಮಾಜದ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು, ಈಗಲೂ ಅದು ಮುಂದುವರಿದೆ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊಡುವ ಗೌರವ ಇದೇನಾ, ಇಂಥ ಸಾವುಗಳನ್ನು ತಡೆಯುವ ಶಕ್ತಿ ನಿಮಗೆ ಇಲ್ಲವೇ ಎಂದು ಮುಖ್ಯಮಂತ್ರಿ ಅವರನ್ನು ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡರು.
ಕಟ್ಟಕಡೆ ವ್ಯಕ್ತಿಗೂ ಸಂವಿಧಾನದ ಹಕ್ಕಿದೆ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಹಕ್ಕಿದೆ, ಅದನ್ನು ಎತ್ತಿ ಹಿಡಿಯುವ ಕೆಲಸ ನಾವು ಮಾಡುತ್ತೇವೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇವೆ.
ಮೂಡಾ ಹಗರಣದಲ್ಲಿ ನಿಮ್ಮ ಹೆಸರು ಕೇಳಿಬಂದಿದೆ, ನೀವು ನಿವೇಶನ ಪಡೆದಿರುವುದಕ್ಕೆ ನಮಗೆ ಅಭ್ಯಂತರ ಇಲ್ಲ, ಆದರೆ, ಸರ್ಕಾರದ ಜಮೀನು ನಿಮ್ಮ ಬಾವಮೈದನನ ಹೆಸರಿಗೆ ಖರೀದಿಸಿ, ಆ ನಂತರ ಅವರ ಸಹೋದರಿಗೆ ಕೊಡುತ್ತೀರಿ, ಇದು ಹೇಗೆ ರವಾನೆಯಾಗಿದೆ ಎನ್ನುವುದು ನಿಮಗೆ ಗೊತ್ತಿಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಮಾತು ಮಾತಿಗೂ ಅಂಬೇಡ್ಕರ್ ಎಂದು ಹೇಳುತ್ತೀರಿ, ದಲಿತರ ಉದ್ಧಾರ ಎಂದು ಭಾಷಣ ಬಿಗಿಯುತ್ತೀರಿ, ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡಿದ್ದೀರಿ, ಬಾಬಾ ಸಾಹೇಬ್ ಅವರಿಗೆ ಗೌರವ ಕೊಡೋದು ಎಂದರೆ ಇದೇನಾ, ಯಾರಿಗಾಗಿ ಅವರು ತಮ್ಮ ಬದುಕು ಮುಡಿಪಿಟ್ಟು ಹೋರಾಟ ನಡೆಸಿದರೋ ಆ ಜನಗಳ ಹಣ ಕೊಳ್ಳೆ ಹೊಡೆದಿರಿ.
ವಾಲ್ಮೀಕಿ ನಿಗಮ ಅಕ್ರಮ ಒಪ್ಪಿಕೊಂಡಿದ್ದೀರಿ
ನಾನು, ಯಡಿಯೂರಪ್ಪ ಸೇರಿ ವಾಲ್ಮೀಕಿ ನಿಗಮ ಸ್ಥಾಪನೆ ಮಾಡಿದೆವು, ದುರ್ಬಲರಿಗೆ ಶಕ್ತಿ ಬರಲಿ ಎನ್ನುವ ಒಳ್ಳೆಯ ಉದ್ದೇಶದಿಂದ ಈ ಕೆಲಸ ಮಾಡಿದೆವು, ಈ ನಿಗಮದಲ್ಲಿ 89 ಕೋಟಿ ರೂ. ಅಕ್ರಮ ಆಗಿದೆ ಎಂದು ನೀವೇ ಹೇಳಿದ್ದೀರಿ, ಹಗರಣ ನಡೆದಿದೆ ಎಂದು ಒಪ್ಪಿಕೊಂಡಿದ್ದೀರಿ, ನಿಮ್ಮ ನಿಜವಾದ ಬಣ್ಣ ಬಯಲಾಗುತ್ತದೆ ಎಂದು ಹೆದರಿ ಕದ್ದು ಓಡಿದವರು ನೀವು, ಈಗ ನೋಡಿದರೆ ಮುಡಾ ಹಗರಣ ಮುಚ್ಚಿಹಾಕಲು ಮುಂದಾಗಿದ್ದೀರಿ ಎಂದರು.
ಪರಮೇಶ್ವರ್ ಅವರು ಹೇಳುತ್ತಾರೆ, ನಾವು ಬಣ್ಣ ಬದಲಾಯಿಸಿದ್ದೇವೆ ಎಂದು, ನನ್ನ ಬಣ್ಣ ಬದಲಾಗಲು ಸಾಧ್ಯವೇ ಇಲ್ಲ ಪರಮೇಶ್ವರ್ರವರೇ, ಇದು ಪರ್ಮನೆಂಟ್ ಬಣ್ಣ ಎಂದು ಗೃಹ ಸಚಿವರಿಗೆ ಟಾಂಗ್ ಕೊಟ್ಟರು.
ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೀರಿ, ನಾನು, ಸಿದ್ದರಾಮಯ್ಯನವರ ಪರವಾಗಿದ್ದೇನೆ ಎನ್ನುತ್ತೀರಿ, ನಿಮ್ಮ ನಾಟಕ ಬಯಲಾಗುತ್ತದೆ, ಕಾದು ನೋಡಿ ಪರಮೇಶ್ವರ್ ಅವರೇ.
ಬುಡಸಮೇತ ಕಿತ್ತೊಗೆಯುತ್ತೇವೆ
ಸಿ.ಡಿ. ಶಿವು ಅವರು, ಕಾಂಗ್ರೆಸ್ ಎದುರಿಸಲು ಬಿಜೆಪಿ ಜತೆಗೆ ಜೆಡಿಎಸ್ ಸೇರಿಕೊಂಡಿದೆ ಎಂದು ಹೇಳಿದ್ದಾರೆ, ನಿಮ್ಮನ್ನು ಬುಡಸಮೇತ ಕಿತ್ತೊಗೆಯಲು ನಾವು ಜೊತೆಯಾಗಿಯೇ ಇರುತ್ತೇವೆ ಎಂಬುದಾಗಿ ಅವರಿಗೆ ಹೇಳಲು ಬಯಸುತ್ತೇನೆ ಎಂದು ತಿರುಗೇಟು ಕೊಟ್ಟರು.
ಸಭೆ ನಂತರ ನಗಾರಿ ಭಾರಿಸುವ ಮೂಲಕ, ಕಹಳೆ ಮೊಳಗಿಸಿದ ನಂತರ ಎಲ್ಲಾ ನಾಯಕರು ಪಾದಯಾತ್ರೆಗೆ ಚಾಲನೆ ನೀಡಿದರು.
