ಬೆಳಗಾವಿ:ಕೈಗಾರಿಕಾ ಪ್ರದೇಶಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಉದ್ದೇಶಕ್ಕೆ ಮೀಸಲಿಟ್ಟ ಸಿ.ಎ. ನಿವೇಶನಗಳನ್ನು ಪಾರದರ್ಶಕ ಮತ್ತು ನಿಯಮಗಳಿಗೆ ಅನುಸಾರ ಹಂಚಿಕೆ ಮಾಡಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿಧಾನ ಪರಿಷತ್ನಲ್ಲಿ ಇಂದು ಸ್ಪಷ್ಟಪಡಿಸಿದ್ದಾರೆ.
ನಿವೇಶನ ಹಂಚಿಕೆಯಲ್ಲಿ ಎಸ್ಸಿ, ಎಸ್ಸಿ-ಎಸ್ಟಿ ಸಮುದಾಯಗಳ ಅರ್ಹರಿಗೂ ಅವಕಾಶ ಸಿಗಬೇಕೆಂಬ ಮೀಸಲಾತಿ ಕಡ್ಡಾಯಗೊಳಿಸಲಾಗಿದ್ದು, ಸ್ವಜನ ಪಕ್ಷಪಾತವಾಗಲಿ, ಅಕ್ರಮವಾಗಲಿ ನಡೆದಿಲ್ಲ ಎಂದಿದ್ದಾರೆ.
ಸಾರ್ವಜನಿಕ ಉದ್ದೇಶಕ್ಕೆ ಮೀಸಲು
ಸಿ.ಟಿ.ರವಿ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ಕೈಗಾರಿಕಾ ಪ್ರದೇಶಗಳಲ್ಲಿ ಶಾಲೆ, ಆಸ್ಪತ್ರೆ, ವಸತಿ ಸಮುಚ್ಚಯಗಳು, ಬ್ಯಾಂಕ್, ಪೆಟ್ರೋಲ್ ಬಂಕ್, ಕ್ಯಾಂಟೀನ್, ಸಮುದಾಯ ಭವನ, ಆರ್ ಅಂಡ್ ಡಿ ಮತ್ತು ನಾವೀನ್ಯತಾ ಕೇಂದ್ರಗಳ ಉದ್ದೇಶಗಳಿಗೆ ಸಿ.ಎ. ನಿವೇಶನಗಳನ್ನು ಮೀಸಲಿಡಲಾಗಿದೆ.
ಹೋಟೆಲ್ ಸಹಾ ಇದೇ ನಿಯಮದಡಿ ಬರಲಿದ್ದು, ಒಬ್ಬರಿಗೆ ಒಂದು ಸಿ.ಎ. ನಿವೇಶನ ಮಾತ್ರ ಹಂಚಿಕೆ ಮಾಡಬೇಕೆಂಬ ನಿರ್ಬಂಧ ಇಲ್ಲ, ಅರ್ಹ ಸಂಸ್ಥೆಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ ಎಂದರು.
ಸಿ.ಎ. ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಪ್ರಮುಖ ರಾಜ್ಯ ಪತ್ರಿಕೆಗಳು ಹಾಗೂ ಆನ್ಲೈನ್ ಮೂಲಕವೂ ಜಾಹೀರಾತು ವ್ಯವಸ್ಥೆ ಜಾರಿಗೆ ತಂದಿದ್ದು, ಒಟ್ಟು 93 ಕಡೆಗೆ ಜಾಹೀರಾತು ನೀಡಲಾಗಿತ್ತು.
42 ಸಿ.ಎ. ನಿವೇಶನ
42 ಸಿ.ಎ. ನಿವೇಶನಗಳಿಗೆ ಒಂದೊಂದೇ ಅರ್ಜಿ ಬಂದಿದ್ದವು, ಇವುಗಳನ್ನು ತಿರಸ್ಕರಿಸಲಾಗಿದೆ, ಎರಡು ಸಿ.ಎ. ನಿವೇಶನಗಳನ್ನು ಉದ್ಯಮಿಗಳು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ, ಇನ್ನೂ 39 ನಿವೇಶನಗಳು ಉಳಿದಿವೆ.
ಈ ಹಿಂದೆ ಕೈಗಾರಿಕಾ ಸಚಿವರೇ ಸಿ.ಎ. ನಿವೇಶನಗಳ ಹಂಚಿಕೆಯ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದರು, ಪ್ರಸ್ತುತ ಕೆಐಎಡಿಬಿ ಸಿಇಒ ನೇತೃತ್ವದ ಉನ್ನತ ಸಮಿತಿ ರಚಿಸಿದ್ದು, 95 ಎಕರೆ ಜಾಗದಲ್ಲಿ ಇನ್ನೂ 152 ನಿವೇಶನಗಳಿವೆ.
ಬಿಜೆಪಿ ಸರ್ಕಾರವು ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ಗೆ ಸೇರಿದ ಜಾಗದಲ್ಲಿ ಒಂದು ಶಿಕ್ಷಣ ಸಂಸ್ಥೆಗೆ ಜಮೀನು ಕೊಟ್ಟಿದ್ದರಿಂದ ಬೊಕ್ಕಸಕ್ಕೆ 135 ಕೋಟಿ ರೂ. ನಷ್ಟವಾಗಿದೆ, ಇಂತಹ ಹಂಚಿಕೆಗಳಲ್ಲಿ ಪ್ರತಿಪಕ್ಷ ರಾಜಕೀಯ ಮಾಡಿದರೆ, ನಮಗೂ ರಾಜಕೀಯ ಮಾಡಲು ಬರುತ್ತದೆ ಎಂದು ತಿರುಗೇಟು ನೀಡಿದರು.
ರೈತರಿಗೆ ನೇರ ಪರಿಹಾರ
ಭಾರತಿ ಶೆಟ್ಟಿ ಅವರ ಮತ್ತೊಂದು ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಕೈಗಾರಿಕಾ ಉದ್ದೇಶಕ್ಕೆ ಜಮೀನನ್ನು ಸ್ವಾಧೀನ ನಂತರ ಆಯಾ ಪ್ರದೇಶದ ಮಾರ್ಗಸೂಚಿ ಬೆಲೆ ಆಧರಿಸಿ ರೈತರಿಗೆ ಆರ್ಟಿಜಿಎಸ್ ಮೂಲಕ ನೇರ ಪರಿಹಾರ ಪಾವತಿಸಲಾಗುತ್ತಿದೆ.
ಮಧ್ಯವರ್ತಿಗಳು ಹಾಗೂ ಜಮೀನಿನ ಜಿಪಿಎ ಹೊಂದಿದವರಿಗೆ ಹಣ ವರ್ಗಾವಣೆ ವ್ಯವಸ್ಥೆ ಇಲ್ಲ, ನಿಯಮಗಳ ಪ್ರಕಾರ ರೈತರು ಮತ್ತು ಉದ್ಯಮಿಗಳ ಜಂಟಿ ಸಹಭಾಗಿತ್ವಕ್ಕೆ ಅವಕಾಶವಿಲ್ಲ, ಪರಿಹಾರ ಬೇಡ ಎನ್ನುವವರಿಗೆ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ ನಿವೇಶನ ನೀಡಲು ನಿಯಮಗಳಲ್ಲಿ ಅವಕಾಶವಿದೆ ಎಂದರು.
ಟಿ.ಎನ್.ಜವರಾಯಿಗೌಡರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಬೆಂಗಳೂರು ನಾಗರಿಕರು ಮತ್ತು ಉದ್ಯಮಿಗಳ ಉಪಯೋಗಕ್ಕೆ 2ನೇ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು, ಇದಕ್ಕಾಗಿ ಮೂರ್ನಾಲ್ಕು ಸ್ಥಳಗಳನ್ನು ಗುರುತಿಸಿದ್ದು, ಐಡೆಕ್ ಸಂಸ್ಥೆ ಅಧ್ಯಯನ ನಡೆಸುತ್ತಿದೆ, ಇನ್ನೊಂದು ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ, ನಂತರ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ಸಂಸ್ಥೆ ಸ್ಥಳವನ್ನು ಆಖೈರುಗೊಳಿಸುತ್ತದೆ, ಇದರಲ್ಲಿ ತಮ್ಮ ಹಸ್ತಕ್ಷೇಪ ಇರುವುದಿಲ್ಲ.
ಪ್ರಾಧಿಕಾರ ಅಂತಿಮ ನಿರ್ಧಾರ
ಪ್ರಯಾಣಿಕರ ದಟ್ಟಣೆ, ಕೈಗಾರಿಕಾ ಸಾಗಾಣಿಕೆ, ಸ್ಥಳದ ಭೌಗೋಳಿಕ ಲಕ್ಷಣ ಇತ್ಯಾದಿಗಳನ್ನು ಪರಿಗಣಿಸಿ, ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಳವನ್ನು ಪರಿಶೀಲಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಪಾಟೀಲ ತಿಳಿಸಿದ್ದಾರೆ.
ಸ್ಥಳ ಆಖೈರಾದ ನಂತರವಷ್ಟೇ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ, ಆ ಪ್ರದೇಶದ ಮಾರ್ಗಸೂಚಿ ದರದ ಅನ್ವಯ ಜಮೀನು ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.