ಬೆಂಗಳೂರು:ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರು ದೈವಾಧೀನರಾದ ವೇಳೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಭಕ್ತಾಧಿಗಳು ಆಗಮಿಸುತ್ತಿದ್ದಾಗ ನಡೆದ ಅಹಿತಕರ ಘಟನೆ ಸಂಬಂಧ ಪ್ರಕರಣ ನ್ಯಾಯಾಲದಲ್ಲಿ ಇಂದು ಕಕ್ಷಿದಾರರ ಮಧ್ಯೆ ರಾಜಿಸಂಧಾನದೊಂದಿಗೆ ಇತ್ಯರ್ಥವಾಗಿದೆ.
ನೈಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಅವರು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಂದಿದ್ದ ವೇಳೆ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ.
ಜನಪ್ರತಿನಿಧಿಗಳ ನ್ಯಾಯಾಲಯ
ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಕಕ್ಷಿದಾರರಾದ ನೈಸ್ ಸಂಸ್ಥೆ ಮುಖ್ಯಸ್ಥ ಆಶೋಕ್ ಖೇಣಿ, ಈ ಸಂಜೆ ಪತ್ರಿಕೆ ಸಂಪಾದಕ ಟಿ.ವೆಂಕಟೇಶ್, ವಕೀಲ ದೊರೆರಾಜು ಕೆಪಿಎಸ್ಸಿ ಮಾಜಿ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣ, ಮಂಡ್ಯ ಶಾಸಕ ರವಿ ಗಣಿಗ ಸೇರಿದಂತೆ ಇತರರು ಹಾಜರಾಗಿದ್ದರು.
ರಾಜಿಸಂಧಾನಕ್ಕೆ ಎರಡು ಕಡೆಯವರ ಸಮ್ಮತಿ ಇದೆ ಎಂಬುದಾಗಿ ನ್ಯಾಯಾಲಯದ ಗಮನಕ್ಕೆ ತಂದಾಗ, ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿ ಪ್ರಕರಣ ಇತ್ಯರ್ಥಗೊಳಿಸಿದರು.
ಬಳಿಕ ಎಲ್ಲಾ ಕಕ್ಷಿದಾರರು ನ್ಯಾಯಾಲಯದ ಹೊರಗೆ ನಗುಮುಖದಿಂದ ಹಸ್ತಲಾಘವ ಮಾಡಿದರು.
ಕಳೆದ 2013 ಫೆಬ್ರವರಿ 14ರಂದು ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ನಿಧನರಾದಾಗ ಆಸ್ಪತ್ರೆಗೆ ಅಶೋಕ್ ಖೇಣಿ ಭೇಟಿ ನೀಡಿದ್ದ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೂ ಆಸ್ಪತ್ರೆಯಲ್ಲಿದ್ದರು.
ಕುಹಕ ಮಾತುಗಳು
ಈ ವೇಳೆ ಖೇಣಿ, ಏನು ಗೌಡರೇ, ಆಸ್ಪತ್ರೆಯಲ್ಲೂ ರಾಜಕೀಯ ಮಾಡುತ್ತಿದ್ದೀರಿ ಎಂದಾಗ ಕುಪಿತರಾದ ದೇವೇಗೌಡರ ಆಪ್ತರು, ಖೇಣಿ ಅವರ ಮೇಲೆ ಹಲ್ಲೆ ನಡೆಸಿದರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.
ಆಸ್ಪತ್ರೆಯಿಂದ ಹೊರಬಂದ ನಂತರ ಪುನಃ ಖೇಣಿ ಅವರ ಮೇಲೆ ಕೆಲವರು ಹಲ್ಲೆ ನಡೆಸಲು ಮುಂದಾದಾಗ, ಈ ವೇಳೆ ಪೊಲೀಸರ ರಕ್ಷಣೆಯಲ್ಲಿ ಅವರನ್ನು ಕಾರಿಗೆ ಹತ್ತಿಸಿ ಕಳುಹಿಸಲಾಗಿತ್ತು.
ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿ ಅಶೋಕ್ ಖೇಣಿ ನೀಡಿದ ದೂರು ದಾಖಲಿಸಲಾಗಿತ್ತು.