ಬೆಂಗಳೂರು:ಅಭಿವೃದ್ಧಿಗೆ ಹಣ ಬಿಡುಗಡೆ ಆಗಿಲ್ಲ ಎಂಬುದು ಸೇರಿದಂತೆ ಪಕ್ಷದ ಶಾಸಕರು ಮಾಡುತ್ತಿರುವ ಆರೋಪಗಳನ್ನು ಲಿಖಿತ ರೂಪದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಪಡೆಯುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಚಿವರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.
ಪಕ್ಷ ಮತ್ತು ಸರ್ಕಾರದಲ್ಲಿ ಗೊಂದಲ ಉಂಟು ಮಾಡುವಂತಹ ಕಸರತ್ತು ಈಗ ಬೇಕಿತ್ತೆ, ಅವರು ಯಾವ ಕಾರಣಕ್ಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಲ್ಲ-ಸಲ್ಲದ ಪ್ರಶ್ನೆ
ಅಲ್ಪ ಸಮಯದಲ್ಲೇ ರಾಜ್ಯಕ್ಕೆ ಭೇಟಿ ನೀಡಿ, ಶಾಸಕರನ್ನು ಮುಖಾಮುಖಿ ಭೇಟಿ ಮಾಡಿ ಇಲ್ಲ-ಸಲ್ಲದ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿರುವುದಲ್ಲದೆ, ಲಿಖಿತ ರೂಪದಲ್ಲಿ ದೂರು ಪಡೆದು ಯಾವ ದಾಖಲೆ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ಕೇಳುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಅನಾರೋಗ್ಯ ಕಾರಣ ಎಲ್ಲಾ ಕಾರ್ಯಕ್ರಮ ರದ್ದು ಮಾಡಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಸಚಿವರು ಮತ್ತು ಮುಖಂಡರು ಸುರ್ಜೇವಾಲ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಸಹಾ ಈ ಕಸರತ್ತಿನ ಹಿಂದಿನ ಮರ್ಮ ತಿಳಿಯದು ಎಂದಿದ್ದಾರೆ.
ಇಂತಹ ಕಸರತ್ತನ್ನು ಎಐಸಿಸಿ ಮಾಡಿಸುತ್ತಿದೆಯೇ ಅಥವಾ ಸುರ್ಜೇವಾಲ ಯಾರದೋ ಒತ್ತಡಕ್ಕೆ ಮಣಿದು ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆಯೇ ಎಂಬ ಮಾತುಗಳು ಕೇಳಿಬಂದಿವೆ.
ಗ್ಯಾರಂಟಿಗಳು ಯಶಸ್ವಿ ಜಾರಿ
ಬಿಜೆಪಿ ದುರಾಡಳಿತದಿಂದ ನಾವು ಅಧಿಕಾರಕ್ಕೆ ಬಂದು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ, ಇಂತಹ ಸಂದರ್ಭದಲ್ಲೂ ಜನತೆಗೆ ನೀಡಿದ ಐದು ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಗೊಂಡಿವೆ.
ಈಗ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಕಾಲ ಬಂದಿದೆ, ಇದೆಲ್ಲಾ ಮಾಹಿತಿ ಇದ್ದರೂ ಸುರ್ಜೇವಾಲ ಇಂತಹ ಕಸರತ್ತು ಏಕೆ ನಡೆಸುತ್ತಿದ್ದಾರೆ ಎಂಬ ಯಕ್ಷ ಪ್ರಶ್ನೆ ಕಾಡಿದೆ.
ಅಭಿವೃದ್ಧಿಗೆ ಹಣ ನೀಡಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು ತಮ್ಮ ಮತ್ತು ಸರ್ಕಾರದ ವಿರುದ್ಧ ವರಿಷ್ಠರಿಗೆ ವರದಿ ನೀಡುವ ಉದ್ದೇಶ ಇವರದ್ದಾಗಿದೆಯೇ.

ಸರ್ಕಾರದ ಮಾಹಿತಿ ವರಿಷ್ಠರ ಮುಂದೆ
ಅವರು ಕಸರತ್ತು ನಡೆಸಲಿ, ಅದರಿಂದ ಏನೂ ಆಗದು, ನನ್ನ ದೆಹಲಿ ಭೇಟಿ ಸಂದರ್ಭದಲ್ಲಿ ಸರ್ಕಾರದ ಮಾಹಿತಿಯನ್ನು ವರಿಷ್ಠರ ಮುಂದಿಡುತ್ತೇನೆ ಎಂದಿದ್ದಾರೆ.
ಈ ಮಧ್ಯೆ ಪಕ್ಷದ 95 ಶಾಸಕರ ಅಭಿಪ್ರಾಯ ಸಂಗ್ರಹ ಪೂರ್ಣಗೊಳಿಸಿರುವ ಸುರ್ಜೇವಾಲ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆ ಅನುಷ್ಟಾನ ಹಾಗೂ ಅಭಿವೃದ್ಧಿ ಯೋಜನೆಗಳನ್ನು ನಮ್ಮ ಶಾಸಕರ ಮುಂದಿಟ್ಟು, ಉತ್ತರ ಪಡೆದಿದ್ದೇನೆ ಎಂದರು.
ಸಚಿವರ ಕಾರ್ಯವೈಖರಿ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದಾರೆ, ಅದೂ ಸೇರಿದಂತೆ ಇತರ ವಿಷಯ ಕುರಿತು ಲಿಖಿತವಾಗಿ ದೂರು ಪಡೆದುಕೊಂಡಿದ್ದೇನೆ ಎಂದರು.

