ಬೆಂಗಳೂರು:ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹೊರಗಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರು, ಶಾಸಕರ ಕಷ್ಟ ಸುಖಗಳ ಆಲಿಕೆ ಕಾರ್ಯ ಆರಂಭಿಸಿದ್ದಾರೆ.
ದೆಹಲಿಯಿಂದ ಹಿಂತಿರುಗುತ್ತಿದ್ದಂತೆ ಪಕ್ಷದ ಶಾಸಕರ ವಿಶ್ವಾಸ ಗಳಿಸುವುದು ಒಂದೆಡೆಯಾದರೆ, ಅವರ ಕ್ಷೇತ್ರಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯ ಸೇರಿದಂತೆ ಉಳಿದ ರಾಜಕೀಯ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಈ ಸಭೆ ನಡೆಸಿದ್ದಾರೆ.
ಉಪಮುಖ್ಯಮಂತ್ರಿ ಕಡೆಗಣನೆ
ಸರ್ಕಾರದ ಯಾವುದೇ ಸಮಾರಂಭ ಮತ್ತು ಸಭೆಗಳಲ್ಲಿ ಬಹುತೇಕ ಉಪಮುಖ್ಯಮಂತ್ರಿ ಅವರನ್ನು ಜೊತೆಗಿಟ್ಟುಕೊಂಡು ಮುನ್ನಡೆಯುತ್ತಿದ್ದ ಮುಖ್ಯಮಂತ್ರಿ, ಇದೀಗ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಅವರನ್ನು ರಾಮನಗರ ಜಿಲ್ಲೆಯ ಶಾಸಕರಿಗೆ ಸಾಮಾನ್ಯವಾಗಿ ಆಹ್ವಾನ ನೀಡುವಂತೆ ಇವರಿಗೂ ಆಹ್ವಾನ ಹೋಗಿದೆ, ಕಾರ್ಯಕ್ರಮ ಪಟ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೆಸರನ್ನು ಪ್ರಾಮುಖ್ಯತೆಯಿಂದ ನಮೂದಿಸಿ, ಶಿವಕುಮಾರ್ ಹೆಸರನ್ನು ಕೆಳಹಂತದಲ್ಲಿ ಕೇವಲ ಶಾಸಕರಂತೆ ನಮೂದಿಸಿರುವುದು ಅವರಿಗೆ ಮಾಡಿರುವ ಅಪಮಾನವಾಗಿದೆ ಎಂದು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.
ಶಿವಕುಮಾರ್ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು, ಆದರೆ ಅವರ ಉಸ್ತುವಾರಿಯ ನಗರ ಶಾಸಕರ ಸಭೆಯನ್ನೇ ಮುಖ್ಯಮಂತ್ರಿ ಆಯೋಜಿಸಿಲ್ಲ.
ಹಿಂದೆಯೂ ಇದೇ ರೀತಿ ಸಭೆ
ಸಿದ್ದರಾಮಯ್ಯ 2013ರಿಂದ 2018ರವರೆಗೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇದೇ ರೀತಿ ಅಂದೂ ಸಹಾ ಪಕ್ಷದ ಶಾಸಕರ ಸಭೆಗಳನ್ನು ಹಲವು ಬಾರಿ ನಡೆಸಿದ್ದರು, ಆದರೆ, ಅಂದಿನ ಸಭೆಯಿಂದ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಅವರನ್ನು ಬದಿಗಿರಿಸಿ ನಡೆಸಿದ್ದರು.
ಸಚಿವರು ಮತ್ತು ಸರ್ಕಾರದ ವಿರುದ್ಧವೇ ಕೆಲವು ಶಾಸಕರು ಅಪಸ್ವರ ಎತ್ತಿದಾಗ ಕೆಪಿಸಿಸಿ ಶಿಫಾರಸಿನ ಮೇರೆಗೆ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಕಳುಹಿಸಿ ಸಚಿವರು ಮತ್ತು ಶಾಸಕರೊಂದಿಗೆ ಮುಖಾಮುಖಿ ಸಮಾಲೋಚನೆ ನಡೆಸಲಾಗಿತ್ತು.
ಸುರ್ಜೇವಾಲ ಸಭೆಗೆ ಮುಖ್ಯಮಂತ್ರಿಗಾಗಲೀ, ಉಪಮುಖ್ಯಮಂತ್ರಿಗಾಗಲೀ ಆಹ್ವಾನ ನೀಡಿರಲಿಲ್ಲ, ಅದೇ ದಾಟಿಯಲ್ಲಿ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ ಎಂಬುದಾಗಿ ಅವರ ಆಪ್ತರು ಹೇಳಿಕೊಳ್ಳುತ್ತಿದ್ದಾರೆ.

ಪ್ರತ್ಯೇಕ ಸಭೆ ಮಾಡುವುದರಲ್ಲಿ ತಪ್ಪೇನಿದೆ
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರ ಬಳಸಿಕೊಂಡು ಶಾಸಕರ ಸಭೆ ಮಾಡುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಶಾಸಕರ ಭೇಟಿ ನಂತರ ಅನೇಕ ವಿಚಾರಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಅಹವಾಲುಗಳ ಕುರಿತು ಸಭೆ ಮಾಡುತ್ತಿದ್ದಾರೆ, ಇದರಲ್ಲಿ ತಪ್ಪೇನು ಇಲ್ಲ, ಇದಕ್ಕೆ ನನಗೆ ಯಾವುದೇ ಆಕ್ಷೇಪ ಇಲ್ಲ, ಈ ವಿಚಾರದಲ್ಲಿ ನನಗೆ ಆಗದ ಕಷ್ಟ ನಿಮಗೇಕೆ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.
ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ, ನಾವು ಪ್ರತ್ಯೇಕ ಅಜೆಂಡಾ ಹೊಂದಿದ್ದು, ಪ್ರತ್ಯೇಕ ಚರ್ಚೆ ನಡೆಸುತ್ತೇವೆ, ನಾನೂ ಒಂದಷ್ಟು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದೇನೆ ಎಂದರು.
ತಮ್ಮ ಮನೆ ಸರಿಪಡಿಸಿಕೊಳ್ಳಲಿ
ಬಿಜೆಪಿಯವರು ಮೊದಲು ಅವರ ಮನೆ ಸರಿ ಮಾಡಿಕೊಳ್ಳಲಿ, ಅವರ ಪಕ್ಷ, ಮನೆಯೇ ಅಸ್ತವ್ಯಸ್ತವಾಗಿದೆ, ಅವರ ಪಕ್ಷದ ಒಳಗೆ ಅನೇಕ ಮೇಲಾಟಗಳು ನಡೆಯುತ್ತಿವೆ, ಅವರ ನಾಯಕರ ಹೇಳಿಕೆಗಳನ್ನು ಎಲ್ಲರೂ ಗಮನಿಸಿದ್ದಾರೆ, ಅವರುಗಳ ಮಧ್ಯೆಯೇ ಸಾಕಷ್ಟು ತಿಕ್ಕಾಟಗಳಿವೆ, ಮೊದಲು ಆ ಸಮಸ್ಯೆಗಳನ್ನು ಸರಿಮಾಡಿಕೊಳ್ಳಲಿ ಎಂದರು.
ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಂದಿನ ಎರಡೂವರೆ ವರ್ಷಗಳಲ್ಲಿ ಕ್ಷೇತ್ರವಾರು ಸಾಧ್ಯವಿರುವ ಅಭಿವೃದ್ಧಿ ಕಾರ್ಯ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಸಭೆ ಕರೆದಿದ್ದಾರೆ.

ಇದರಲ್ಲಿ ಹೊಸದೇನಿದೆ
ಇತರೆ ಅಭಿವೃದ್ಧಿ ಕಾರ್ಯ ಹಾಗೂ ಪಕ್ಷ ಸಂಘಟನೆ ಬಗ್ಗೆಯೂ ಮಾತನಾಡುತ್ತಾರೆ, ಇದು ಹೊಸದೇನಲ್ಲ, 2013 ರಿಂದ 2018ರವರೆಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ಮಾಡಿದ್ದರು, ಆಗ ನಾನು ಅಧ್ಯಕ್ಷನಾಗಿದ್ದೆ, ಎಲ್ಲ ಶಾಸಕರ ಸಮಸ್ಯೆ ಆಲಿಸಿದ್ದೆವು, ಪ್ರಸಕ್ತ ಐದು ವರ್ಷ ಆಡಳಿತಾವಧಿಯ ಮಧ್ಯಲ್ಲಿದ್ದೇವೆ.
ಶಿವಕುಮಾರ್ ಅವರನ್ನು ಶಾಸಕರ ಸಭೆಗೆ ಮುಖ್ಯಮಂತ್ರಿ ಕರೆದಿರಬಹುದು, ಆದರೆ, ಅವರಿಗೆ ಆರೋಗ್ಯ ಸರಿಯಿಲ್ಲ ಡೆಂಗ್ಯೂ ಇದೆ ಎಂಬುದಾಗಿ ಕೇಳಿದ್ದೆ, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.

