ನವದೆಹಲಿ:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ ಇತರ ಐದು ಮಂದಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ಇಂದು ರದ್ದುಪಡಿಸಿ ಆದೇಶ ಹೊರಡಿಸಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರನ್ನು ಒಳಗೊಂಡ ನ್ಯಾಯಪೀಠ, ಹೈಕೋರ್ಟ್ನ ಆದೇಶ ರದ್ದುಪಡಿಸಿ, ಆರೋಪಿಗಳಿಗೆ ನೀಡಲಾದ ಜಾಮೀನು ರದ್ದುಗೊಳಿಸಿರುವುದಾಗಿ ತಿಳಿಸಿತು.
ಜಾಮೀನು ಆದೇಶದಲ್ಲಿ ದೋಷ
ಆರೋಪಿಗಳಿಗೆ ನೀಡಲಾದ ಹೈಕೋರ್ಟ್ನ ಜಾಮೀನು ಆದೇಶ ದೋಷಗಳಿಂದ ಕೂಡಿದೆ, ನ್ಯಾಯಾಲಯ ಆದೇಶ ಅಧಿಕಾರದ ಯಾಂತ್ರಿಕ ಪ್ರಯೋಗ ಬಿಂಬಿಸುತ್ತದೆ, ಜಾಮೀನು ಮಂಜೂರು ಪ್ರಕರಣದ ವಿಚಾರಣೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಪಾರ್ದಿವಾಲಾ ತಮ್ಮ ಆದೇಶದಲ್ಲಿ, ಆರೋಪಿ ಎಷ್ಟೇ ದೊಡ್ಡವನಾದರೂ, ಕಾನೂನಿಗಿಂತ ಮೇಲಲ್ಲ, ನ್ಯಾಯ ವಿತರಣಾ ವ್ಯವಸ್ಥೆ ಕಾನೂನಾತ್ಮ ಆಡಳಿತ ಎತ್ತಿಹಿಡಿಯವಂತಹ ಬಲವಾದ ಸಂದೇಶ ಒಳಗೊಂಡಿದೆ.
ಕಾನೂನಿಗಿಂತ ದೊಡ್ಡವನಲ್ಲ
ಯಾವುದೇ ವ್ಯಕ್ತಿ ಕಾನೂನಿಗಿಂತ ದೊಡ್ಡವನಲ್ಲ ಅಥವಾ ಸಣ್ಣವನಲ್ಲ, ಎಲ್ಲಾ ಸಮಯದಲ್ಲೂ ಕಾನೂನಾತ್ಮಕ ಆಡಳಿತ ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದಿದ್ದಾರೆ.
ಆರೋಪಿಗಳಿಗೆ ಜೈಲಿನಲ್ಲಿ ಪಂಚತಾರಾ ಉಪಚಾರ ನೀಡಲಾಗುತ್ತಿದೆ ಎಂದಾದರೆ, ಅಂತಹ ಸಂದರ್ಭದಲ್ಲಿ ಮೊದಲ ಕ್ರಮವಾಗಿ ಕಾರಾಗೃಹ ಸೂಪರಿಂಟೆಂಡೆಂಟ್ ಆದಿಯಾಗಿ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು, ಆರೋಪಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುವುದೂ ತಪ್ಪು ಎಂದು ನ್ಯಾಯಾಲಯ ಎಚ್ಚರಿಸಿದೆ.

