ಬೆಂಗಳೂರು:ಆನ್ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಕೇಂದ್ರ ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ.
ಆರೋಪಿಯಿಂದ 12 ಕೋಟಿ ರೂ. ನಗದು, ಇದರಲ್ಲಿ ಒಂದು ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ಅಲ್ಲದೆ, 6 ಕೋಟಿ ರೂ. ಚಿನ್ನಾಭರಣ, 10 ಕೆ.ಜಿ. ಬೆಳ್ಳಿ ಸಾಮಗ್ರಿ ಜೊತೆಗೆ ನಾಲ್ಕು ವಾಹನಗಳನ್ನು ಪಿಎಂಎಲ್ಎ 2002ರಡಿ ವಶಪಡಿಸಿಕೊಳ್ಳಲಾಗಿದೆ.
2 ಬ್ಯಾಂಕ್ ಲಾಕರ್ ಸೀಲ್
ಇದಲ್ಲದೆ, 17 ಬ್ಯಾಂಕ್ ಖಾತೆಗಳು ಹಾಗೂ ಎರಡು ಬ್ಯಾಂಕ್ ಲಾಕರ್ಗಳನ್ನು ಮುಚ್ಚಲಾಗಿದೆ.
ಹಣದ ಮೂಲವನ್ನು ಪತ್ತೆ ಹಚ್ಚುವ ಸಲುವಾಗಿ ಗ್ಯಾಂಗ್ಟಾಕ್ನಲ್ಲಿ ಶನಿವಾರದಂದು ವೀರೇಂದ್ರ ಅವರನ್ನು ಬಂಧಿಸಲಾಯಿತು.
ಬಳಿಕ ಅವರನ್ನು ಸಿಕ್ಕಿಂನ ಗ್ಯಾಂಗ್ಟಾಕ್ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಬೆಂಗಳೂರಿನ ಅಧಿಕಾರ ಕ್ಷೇತ್ರ ನ್ಯಾಯಾಲಕ್ಕೆ ಹಾಜರುಪಡಿಸಲು ಟ್ರ್ಯಾಸಿಟ್ ರಿಮ್ಯಾಂಡ್ ಪಡೆಯಲಾಯಿತು ಎಂದು ಇ.ಡಿ. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

31 ಸ್ಥಳಗಳಲ್ಲಿ ಶೋಧ
ಕಳೆದ ಎರಡು ದಿನಗಳಿಂದ ಗ್ಯಾಂಗ್ಟಾಕ್, ಚಿತ್ರದುರ್ಗ, ಜೋಧ್ಪುರ್, ಮುಂಬೈ ಮತ್ತು ಗೋವಾದ ಪೆಪ್ಪಿಸ್ ಕ್ಯಾಸಿನೋ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೋ, ಪಪ್ಪೀಸ್ ಕ್ಯಾಸಿನೋ ಫ್ರೈಡ್, ಓಷನ್ ಸೆವೆನ್ ಕ್ಯಾಸಿನೋ ಹಾಗೂ ಬಿಗ್ ಡ್ಯಾಡಿ ಕ್ಯಾಸಿನೋ ಒಳಗೊಂಡಂತೆ ಸುಮಾರು 31 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ವೀರೇಂದ್ರ ಮತ್ತು ಇತರರ ವಿರುದ್ಧ ಅಕ್ರಮ ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ಗೆ ಸಂಬಂಧಿಸಿದಂತೆ, ಆತ ಕಿಂಗ್ 567, ರಾಜಾ 567 ಇತ್ಯಾದಿ ಹೆಸರಿನಲ್ಲಿ ಅನೇಕ ಆನ್ಲೈನ್ ಬೆಟ್ಟಿಂಗ್ ಸೈಟ್ಗಳನ್ನು ಅಳವಡಿಸಿರುವುದು ಬಹಿರಂಗವಾಗಿದೆ.
ಇನ್ನಷ್ಟು ತನಿಖೆಯಲ್ಲಿ, ಆರೋಪಿಯ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ದುಬೈಯಿಂದ ಡೈಮಂಡ್ ಸಾಫ್ಟೆಕ್, ಟಿಆರ್ಎಸ್ ಟೆಕ್ನಾಲಜೀಸ್, ಪ್ರೈಮ್ ಟೆಕ್ನಾಲಜೀಸ್ ಎಂಬ ಮೂರು ಕಂಪನಿಗಳನ್ನು ನಡೆಸುತ್ತಿದ್ದು, ಅವು ಕರೆ ಕೇಂದ್ರ ಸೇವೆಗಳು ಮತ್ತು ಕೆ.ಸಿ.ವೀರೇಂದ್ರ ನಡೆಸುತ್ತಿರುವ ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿದೆ ಎಂದು ಪತ್ತೆಯಾಗಿದೆ.

ಅಪರಾಧ ದಾಖಲೆಗಳು
ಆರೋಪಿ ಸಹೋದರ ಕೆ.ಸಿ.ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್. ರಾಜ್ ಅವರ ಮನೆಯಿಂದ ಆಸ್ತಿ ದಾಖಲೆಗಳು ಹಾಗೂ ಸಾಕಷ್ಟು ಅಪರಾಧ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಿಪ್ಪೇಸ್ವಾಮಿ ಮತ್ತು ಪೃಥ್ವಿ ದುಬೈನಿಂದಲೇ ಆನ್ಲೈನ್ ಗೇಮಿಂಗ್ ಕಾರ್ಯಾಚರಣೆ ನಿರ್ವಹಿಸುತ್ತಿರುವುದು ಪತ್ತೆಯಾಗಿದೆ.
ವೀರೇಂದ್ರ ಮತ್ತು ಅವರ ಸಹಚರರು ಭೂಮಿಯನ್ನು ಲೀಸ್ಗೆ ಪಡೆಯುವ ಉದ್ದೇಶದಿಂದ ವ್ಯವಹಾರ ಪ್ರವಾಸವಾಗಿ ಬ್ಯಾಗ್ಡೋಗ್ರಾ ಮಾರ್ಗವಾಗಿ ಗ್ಯಾಂಗ್ಟಾಕ್ಗೆ ಭೇಟಿ ನೀಡಿದ್ದರು.
ಶೋಧ ಕಾರ್ಯಾಚರಣೆ ವೇಳೆ ವಶ ಪಡಿಸಿಕೊಳ್ಳಲಾದ ಸಾಕ್ಷ್ಯದಿಂದ ಹಣದ ಜಟಿಲ ಲೇಯರಿಂಗ್ ಹಾಗೂ ಇತರ ನಿಧಿಗಳ ಹಾದಿ ಪತ್ತೆಯಾಗಿದೆ.

