ಬೆಂಗಳೂರು:ಮಾನವರ ಅಳಿವು-ಉಳಿವು ಕಾಡಿನ ಸಂರಕ್ಷಣೆ ಮೇಲೆ ಅವಲಂಬಿತವಾಗಿದ್ದು, ಹಸಿರಿನ ಹೊದಿಕೆ ಹೆಚ್ಚಾದರೆ ಕಾನನ ದಟ್ಟವಾಗಿ ಅರಣ್ಯ ಸಂಪತ್ತೂ ಹೆಚ್ಚುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಾಡು ಪ್ರಾಣಿ ಸಂಪತ್ತಿನಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ, ಕಾಡು ಪ್ರಾಣಿಗಳಿಗೆ ಅಗತ್ಯ ಆಹಾರ, ನೀರು ಕಾಡಿನಲ್ಲೇ ಸಾಕಷ್ಟು ಸಿಗುವಂತಾದರೆ ವನ್ಯಜೀವಿ-ಮಾನವ ಸಂಘರ್ಷ ತಡೆಗಟ್ಟಬಹುದು ಎಂದರು.
ಹೆಚ್ಚು ಹಣ ನೀಡಲು ಸಿದ್ಧ
ಕಾಡು ಪ್ರಾಣಿಗಳು ಮತ್ತು ಮಾನವರ ನಡುವಿನ ಸಂಘರ್ಷ ತಪ್ಪಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಿಸಿ, ನಿರ್ವಹಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ, ಅರಣ್ಯ ಇಲಾಖೆ ಬಳಿ ಸಾಕಷ್ಟು ಹಣವಿದೆ, ಅಗತ್ಯವಿದ್ದರೆ ಇನ್ನೂ ಹೆಚ್ಚು ಹಣ ನೀಡಲು ಸಿದ್ಧ, ಸಮರ್ಪಕ ಬ್ಯಾರಿಕೇಡ್ ನಿರ್ಮಿಸಿ ಆನೆ-ಮಾನವ ಸಂಘರ್ಷ ತಪ್ಪಿಸಿ.
ಹಿರಿಯ ಅಧಿಕಾರಿಗಳು ಆಗಿಂದ್ದಾಗ್ಯೆ ಕಾಡಿಗೆ ಭೇಟಿ ನೀಡಿ, ಕಾಡಿನಲ್ಲೇ ಹೆಚ್ಚೆಚ್ಚು ಉಳಿಯಬೇಕು, ಆಗ ಮಾತ್ರ ಕೆಳಹಂತದ ಸಿಬ್ಬಂದಿ ಕಾಡೊಳಗೇ ಇದ್ದು ಪರಿಣಾಮಕಾರಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.

