ಜಿಬಿಎ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮಗೇ ಗೆಲುವು
ಬೆಂಗಳೂರು:ನಗರ ಸ್ಥಳೀಯ ಸಂಸ್ಥೆ, ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ಸ್ಪರ್ಧೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ, ನಂತರ ನಡೆದ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯನ್ನೂ ಜಂಟಿಯಾಗಿ ಎದುರಿಸಿದರು.
ಮತದಾರರು ಕೈ ಹಿಡಿದಿದ್ದಾರೆ
ಪದವೀಧರ, ಶಿಕ್ಷಕರ ಆರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ೪ರಲ್ಲಿ ಜಯಭೇರಿ ಭಾರಿಸಿತು, ಪ್ರಜ್ಞಾವಂತ ಮತದಾರರೆ ನಮ್ಮ ಕೈಹಿಡಿದಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಜಿಬಿಎನ ಐದು ನಗರಪಾಲಿಕೆಗಳಿಗೆ ಚುನಾವಣೆ ನಿಗದಿತ ಸಮಯದಲ್ಲಿ ನಡೆಯಲಿದೆ, ಅಲ್ಲದೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ಗಳಿಗೂ ಚುಣಾವಣೆ ಎದುರಾಗಲಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರು ಮೈತ್ರಿ ಮಾಡಿಕೊಂಡರೂ ಗುರಿ ಮುಟ್ಟಲು ಸಾಧ್ಯವಿಲ್ಲ, ಬೆಂಗಳೂರಿನ ಐದೂ ಪಾಲಿಕೆಗಳಲ್ಲೂ ನಾವು ಜಯಭೇರಿ ಭಾರಿಸುತ್ತೇವೆ.
ಅಧಿಕಾರ ಹಂಚಿಕೆ ಗೊಂದಲ ಇಲ್ಲ
ಅಧಿಕಾರ ಹಂಚಿಕೆ ಗೊಂದಲ ಮಾಧ್ಯಮದ ಸೃಷ್ಟಿ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಇದರಿಂದ ನಮಗೆ ಮುಂಬರುವ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರದು.
ಸ್ಥಳೀಯ ಸಂಸ್ಥೆ ಚುಣಾವಣೆಗೆ ನಾವು ಈಗಾಗಲೇ ಸಿದ್ಧರಾಗಿದ್ದೇವೆ, ಕೆಪಿಸಿಸಿ ಅಧ್ಯಕ್ಷರೂ ಈ ಸಂಬಂಧ ಕಾಲಾನುಕಾಲಕ್ಕೆ ಸಭೆ ನಡೆಸಿದ್ದಾರೆ, ಜಿಬಿಎ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಿಗೆ ಅಭ್ಯರ್ಥಿ ಆಯ್ಕೆಗೆ ಅರ್ಜಿಯನ್ನೂ ಆಹ್ವಾನಿಸಿದ್ದಾರೆ ಎಂದರು.
ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಸರ್ಕಾರಿ ಕಟ್ಟಡ ಮತ್ತು ಜಾಗಗಳನ್ನು ಅಡವಿಟ್ಟು 6,000 ಕೋಟಿ ರೂ. ಸಾಲ ಪಡೆದಿದ್ದರು, ಇದೇ ಅವರ ಸಾಧನೆ.
ಸಾಲ ತೀರಿಸಿದ್ದೇವೆ
ನಾವು ಅಧಿಕಾರಕ್ಕೆ ಬಂದ ನಂತರ ಸಾಲ ತೀರಿಸಿ ಅಡವಿಟ್ಟದ್ದನ್ನು ಬಿಡಿಸಿರುವುದಲ್ಲದೆ, ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ.
ಸುಗಮ ಸಂಚಾರ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಬಿಜೆಪಿ ವಿರೋಧ ಮಾಡಿಕೊಂಡೇ ಬರುತ್ತಿದೆ.
ಬಿಜೆಪಿ ದ್ವಂದ್ವ ನೀತಿ
ಅವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಾವು ಕೈಗೊಳ್ಳಬೇಕಾದ ಯೋಜನೆಗಳನ್ನೇ ಕಾರ್ಯಗತಕ್ಕೆ ಮುಂದಾಗುತ್ತಾರೆ, ಇದು ಅವರ ದ್ವಂದ್ವ ನೀತಿ ತೋರಿಸುತ್ತದೆ.
ಟನಲ್ ರಸ್ತೆ ನಿರ್ಮಾಣಕ್ಕೆ ವಿರೋಧ ಮಾಡುವ ಬಿಜೆಪಿ ಮುಂಬೈನಲ್ಲಿ ಇಂತಹದ್ದೇ ಎರಡು ಕಾಮಗಾರಿಗಳನ್ನು ಕೈಗೊಂಡಿದೆ, ಅಲ್ಲಿ ನಾವು ವಿರೋಧ ಮಾಡುತ್ತಿದ್ದೇವೆಯೇ ಎಂದು ಪ್ರಶ್ನಿಸಿದರು.

